ಕುಚುಕು ಗೆಳೆಯ ಅಂಬಿ ನಿಧನದ ನಂತರ ವಿಷ್ಣು ಸ್ಮಾರಕ  ವಿವಾದ ಮತ್ತೆ ಮರುಜೀವ ಪಡೆದುಕೊಂಡಿದ್ದು,ಸಾಹಸ ಸಿಂಹನ ವಿಷ್ಣು ಸ್ಮಾರಕಕ್ಕೆ ಉಚಿತವಾಗಿ ಜಾಗ ಕೊಡಲು ಸಿದ್ಧ ಎಂದ ಅಭಿಮಾನ್ ಸ್ಟುಡಿಯೋ ಮಾಲೀಕ ಹೇಳಿದ್ದಾರೆ. ಇನ್ನೇನಿದ್ದರು ಸ್ಮಾರಕ ನಿರ್ಮಿಸುವ ಕೆಲಸ ಒಂದೇ ಬಾಕಿ.

 ಬೆಂಗಳೂರು, [ನ.29] ಅಂಬರೀಶ್‌ ನಿಧನದ ನಂತರ ತಣ್ಣಗಾಗಿದ್ದ ಡಾ.ವಿಷ್ಣುವರ್ಧನ್‌ ಸ್ಮಾರಕದ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. 

ರೆಬೆಲ್‌ಸ್ಟಾರ್‌ ಸ್ಮಾರಕ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸುತ್ತಿದ್ದಂತೆಯೇ ವಿಷ್ಣು ಸ್ಮಾರಕದ ವಿಚಾರ ಮುನ್ನೆಲೆಗೆ ಬಂದಿದೆ.

ಪುಣ್ಯಭೂಮಿ ಮುಟ್ಟಲ್ಲ, ಸ್ಮಾರಕ ಮೈಸೂರಿನಲ್ಲಿ ಆಗ್ಬೇಕು: ಅನಿರುದ್ಧ್

 ಶೀಘ್ರವೇ ವಿವಾದವನ್ನು ಬಗೆಹರಿಸಿ ಸಾಹಸ ಸಿಂಹನ ಸ್ಮಾರಕವನ್ನು ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲಿ ಮಾಡಬೇಕೆಂದು ವಿಷ್ಣು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. 

2009 ಡಿಸೆಂಬರ್ 30ರಂದು ವಿಧಿವಶರಾಗಿದ್ದ ಡಾ. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನಡೆದಿತ್ತು. ಆದ್ರೆ ಅಲ್ಲಿಂದ ಇಲ್ಲಿಗೆ ವರೆಗೂ ವಿಷ್ಣು ಅವರ ಸ್ಮಾರಕ ಮಾಡಲು ಯಾವ ಸರ್ಕಾರ ಮುಂದಾಗಿಲ್ಲ. ಯಾಕೆ ಎನ್ನುವುದು ಮಾತ್ರ ಬಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ.

ಜಾಗ ಕೊಡಲು ಸಿದ್ಧ ಎಂದ ಅಭಿಮಾನ್ ಸ್ಟುಡಿಯೋ ಮಾಲೀಕ
ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಡುವುದಕ್ಕೆ ಸಿದ್ಧ ಎಂದು ಅಭಿಮಾನ್ ಸ್ಟುಡಿಯೋ ಮಾಲೀಕ ಹೇಳಿದ್ದಾರೆ. 50X150 ಜಾಗ ಉಚಿತವಾಗಿ ನೀಡುವುದಕ್ಕೆ ಸಿದ್ಧನಿದ್ದೇನೆ ಎಂದು ಅಭಿಮಾನ್ ಸ್ಟುಡಿಯೋ ಮಾಲೀಕ ಬಿ.ಗಣೇಶ್ ತಿಳಿಸಿದ್ದಾರೆ.

ಈಗ ಜಾಗದ ಸಮಸ್ಯೆ ಒಂದು ಕಡೆ ಬಗೆಹರಿದಂತಾಯ್ತು. ಹೀಗೇನಿದ್ದರೂ ಸ್ಮಾರಕ ನಿರ್ಮಾಣದ ಕೆಲಸ ಆಗೋದೊಂದೆ ಬಾಕಿ ಇದ್ದು, ಸರ್ಕಾರ ಏನು ಮಾಡುತ್ತೆ ಎನ್ನುವುದನ್ನ ಕಾದು ನೋಡಬೇಕಿದೆ.