ನಾನು ರಾಜಕಾರಣದಲ್ಲಿರಬಹುದು, ರಾಜಕಾರಣಿಯಲ್ಲ: ಪ್ರತಾಪ್ ಸಿಂಹ ಹೀಗಂದಿದ್ಯಾಕೆ..?
ನಾನು ರಾಜಕೀಯದಲ್ಲಿ ಇರಬಹುದು. ಆದರೆ ರಾಜಕಾರಣಿಯಲ್ಲ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ತುಮಕೂರು (ಡಿ.04): ನಾನು ರಾಜಕಾರಣದಲ್ಲಿರಬಹುದು ಆದರೆ ರಾಜಕಾರಣಿಯಾಗಿಲ್ಲ ಎಂದು ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ಅವರು ತಿಪಟೂರಿನಲ್ಲಿ ಬಿಜೆಪಿಯಿಂದ ನಡೆದ ಗ್ರಾಮ ಸ್ವರಾಜ್ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಸೈದ್ಧಾಂತಿಕ ವಿಚಾರ, ರಾಷ್ಟ್ರೀಯತೆ ಬಂದಾಗಷ್ಟೆನನ್ನ ಅಭಿಪ್ರಾಯ ಹೇಳುತ್ತೇನೆ ವಿನಹ ಯೋಗೇಶ್ವರ್ಗೆ ಸಚಿವ ಸ್ಥಾನದ ಬಗ್ಗೆ ಮಾತನಾಡುವುದಿಲ್ಲ ಎಂದರು.
ನಾನು ಮೋದಿ ಸರ್ಕಾರದ ಒಬ್ಬ ಪ್ರತಿನಿಧಿ. ಮೋದಿಯವರು ಗ್ರಾ.ಪಂ ಮಟ್ಟದಿಂದ ಸಂಸತ್ ವರೆಗೆ ಯಾವ್ಯಾವ ಕೆಲಸ ಮಾಡಿದ್ದಾರೆ ಎಂಬುದರ ಮಾಹಿತಿ ಕೊಡಬಹುದು. ಅದರಾಚೆಗೆ ಈ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲ ಎಂದರು. ನಾನು ಮೂಲತಃ ರಾಜಕಾರಣಿ ಅಲ್ಲ, ಒಬ್ಬ ಪತ್ರಕರ್ತ ಆಗಿದ್ದವನು ಎಂದರು.
ಡಿಸಿ ರೋಹಿಣಿ ಪರ ಪ್ರತಾಪ್ ಬ್ಯಾಟಿಂಗ್ : ಸವಾಲ್ ಹಾಕಿದ ಸಂಸದ ...
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕೆಲಸದ ಬಗ್ಗೆ ಕೆಲ ಶಾಸಕರು ಆಕ್ಷೇಪವೆತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಜಿಲ್ಲೆಯ ಜವಾಬ್ದಾರಿ ಜಿಲ್ಲಾಧಿಕಾರಿಗಳ ಮೇಲಿರುತ್ತದೆ. ಜಿಲ್ಲಾಧಿಕಾರಿಗಳಿಗೆ ಮಾತ್ರ ನ್ಯಾಯಾಂಗ ಮತ್ತು ಕಾರ್ಯಾಂಗದ ಅಧಿಕಾರ ಇರುತ್ತದೆ. ಹೀಗಿರುವಾಗ ಜಿಲ್ಲಾಧಿಕಾರಿಗಳು ಅದನ್ನು ನಿರ್ವಹಣೆ ಮಾಡುವ ವೇಳೆ ಶಾಸಕರಾಗಲಿ ಸಂಸದರಾಗಲಿ ಅಡಚಣೆ ಮಾಡುವುದು ಸರಿಯಲ್ಲ ಎಂದರು.
ನಮ್ಮ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡುವ ಅಧಿಕಾರಿಗಳಿಗೆ ನಾವು ಬೆಂಬಲಿಸುತ್ತಾ ಬಂದಿರುವುದಾಗಿ ತಿಳಿಸಿದ ಅವರು ಈ ಹಿಂದೆ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಒಳ್ಳೆ ಕೆಲಸ ಮಾಡಿದ್ದರು. ಅವರನ್ನು ನಾವು ಬೆಂಬಲಿಸಿದ್ದೆವು. ಈಗ ರೋಹಿಣಿ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು.
ಇಲ್ಲಿನ ಶಾಸಕರು ಎರಡು ಮೂರು ಬಾರಿ ಗೆದ್ದು ಬಂದರೂ ಯಾಕೆ ಇಂತಹ ಕಾರ್ಯಕ್ರಮಗಳನ್ನು ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು ಅಧಿಕಾರಿಗಳು ಉತ್ತಮ ಕೆಲಸ ಮಾಡುವಾಗ ಯಾರೂ ಅಡಚಣೆ ಮಾಡಬಾರದು ಎಂದರು.