ಬಸ್‌ ತಂಗುದಾಣ ಒಡೆಯಲ್ಲ, ಮೇಲಿನ ಗುಮ್ಮಟ ಧ್ವಂಸ ಮಾಡುವೆ, ತೆರವಿಗೆ ಜಿಲ್ಲಾಡಳಿತ ಅನುಮತಿ ಬೇಡ. ಅದು ರಾಷ್ಟ್ರೀಯ ಹೆದ್ದಾರೀಲಿ ಇದೆ: ಸಂಸದ ಪ್ರತಾಪ್‌ ಸಿಂಹ 

ಮೈಸೂರು(ನ.16):  ಬಸ್‌ ತಂಗುದಾಣ(ನಿಲ್ದಾಣ)ದಲ್ಲಿ ಗುಂಬಜ್‌ ತೆರವಿಗೆ ನಾನು ನೀಡಿದ ಎರಡು ದಿನದ ಗಡುವು ಮುಗಿದಿದೆ. ಇನ್ನೆರಡು ದಿನದಲ್ಲಿ ತೆರವು ಮಾಡದೇ ಇದ್ದರೆ ನಾನೇ ಅದನ್ನು ತೆರವು ಮಾಡುತ್ತೇನೆ. ನಾನು ನಿಲ್ದಾಣ ತೆರವು ಮಾಡಲ್ಲ, ಗುಂಬಜ್‌ ಮಾತ್ರ ತೆರವು ಮಾಡುತ್ತೇನೆ ಎಂದು ಸಂಸದ ಪ್ರತಾಪ್‌ ಸಿಂಹ ಪುನರುಚ್ಚರಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಹೇಳಿಕೆ ಕೊಡುವ ಮುನ್ನ ಬಸ್‌ ತಂಗುದಾಣ ಮೇಲೆ ಬರೀ ಗುಂಬಜ್‌ ಇತ್ತು. ನಂತರ ರಾತ್ರೋರಾತ್ರಿ ಅದರ ಮೇಲೆ ಕಳಸ ಹೇಗೆ ಬಂತು? ಅರಮನೆ ಗೋಪುರಕ್ಕೂ ಮಸೀದಿ ಮೇಲಿನ ಗುಂಬಜ್‌ಗೂ ವ್ಯತ್ಯಾಸ ಇಲ್ವಾ? ಅರಮನೆ ಗೋಪುರ ಇಂಡೋ-ಸಾರ್ಸೆನಿಕ್‌ ಶೈಲಿಯಲ್ಲಿದೆ. ಬಸ್‌ ನಿಲ್ದಾಣದ್ದು ಯಾವ ವಾಸ್ತುಶಿಲ್ಪ ಎಂದು ಪ್ರಶ್ನಿಸಿದರು.

ಅದೆಷ್ಟುಒಡೆದು ಹಾಕ್ತಾರೆ ಒಡೆದು ಹಾಕಲಿ : ಸಂಸದ ಪ್ರತಾಪ್ ವಿರುದ್ಧ ಕಿಡಿ.

ಬಸ್‌ ನಿಲ್ದಾಣದ ಮೇಲಿನ ಗುಂಬಜ್‌ ತೆರವು ಶತಃಸಿದ್ಧ. ಗುಂಬಜ್‌ ತೆರವಿಗೆ ಜಿಲ್ಲಾಡಳಿತದ ಅನುಮತಿ ಬೇಕಿಲ್ಲ. ಬಸ್‌ ನಿಲ್ದಾಣ ನಿರ್ಮಾಣ ಆಗಿರುವುದು ರಾಷ್ಟ್ರೀಯ ಹೆದ್ದಾರಿ ಜಾಗದಲ್ಲಿ. ಯಾವುದೇ ಅನುಮತಿ ಪಡೆಯದೆ ಬಸ್‌ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರ ಹಣ ನಷ್ಟವಾಗಬಾರದೆಂದು ಬಸ್‌ ನಿಲ್ದಾಣ ಉಳಿಸಿಕೊಳ್ಳಲಾಗುತ್ತದೆ. ಬಸ್‌ ನಿಲ್ದಾಣದ ಮೇಲಿನ ಗುಂಬಜ್‌ ಮಾತ್ರ ತೆರವು ಮಾಡಲಾಗುತ್ತದೆ ಎಂದು ತಿಳಿಸಿದರು.

ಶಾಸಕ ರಾಮದಾಸ್‌ ಅವರು ಅರಮನೆ ಮಾದರಿಯಲ್ಲಿ 20 ಬಸ್‌ ನಿಲ್ದಾಣ ಕಟ್ಟಲಿ. ನಾನು ಗುಂಬಜ್‌ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಎಸ್‌.ಎ.ರಾಮದಾಸ್‌ ಅವರು ಮೌನವಹಿಸಿದ್ದಾರೆಂದರೆ ಅದರ ಅರ್ಥ ನನ್ನ ಮಾತಿಗೆ ಅವರ ಸಮ್ಮತಿ ಇದೆ. ಅವರು ಹಿಂದುತ್ವದ ಹಿನ್ನೆಲೆಯಲ್ಲಿ ಬಂದವರು ಬಹುಶಃ ಗುತ್ತಿಗೆದಾರ ಅವರ ದಾರಿ ತಪ್ಪಿಸಿರಬಹುದು ಎಂದು ಹೇಳಿದರು.