*  ರಾಜ್ಯದಲ್ಲೇ ಇರುವೆ ಎಲ್ಲಿಯೂ ಹೋಗಿಲ್ಲ*  ದಿಲ್ಲಿಗೆ ತೆರಳಿದ್ದಾರೆ ಎಂಬ ವದಂತಿಗೆ ಸ್ಪಷ್ಟನೆ ನೀಡಿದ ಸಚಿವ ಸಿಂಗ್‌*  ಪ್ರಬಲ ಖಾತೆ ಮೇಲೆ ಕಣ್ಣಿಟ್ಟ ಸಚಿವ ಆನಂದ್‌ ಸಿಂಗ್‌

ಹೊಸಪೇಟೆ(ಆ.19): ಪ್ರಬಲ ಖಾತೆ ಆಕಾಂಕ್ಷಿಯಾಗಿರುವ ಪರಿಸರ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಹೈಕಮಾಂಡ್‌ ಭೇಟಿಗೆ ಗೋವಾದಿಂದ ದಿಲ್ಲಿಗೆ ತೆರಳಿದ್ದಾರೆ ಎಂಬ ಫುಕಾರು ಎದ್ದಿದೆ. ಆದರೆ, ಸಚಿವ ಸಿಂಗ್‌ ಮಾತ್ರ ನಾನು ಎಲ್ಲಿಯೂ ಹೋಗಿಲ್ಲ ರಾಜ್ಯದಲ್ಲೇ ಇರುವೆ ಎಂದು ಸ್ಪಷ್ಟಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಉತ್ತರ ಕನ್ನಡದ ಯಲ್ಲಾಪುರಕ್ಕೆ ಮಹರ್ಷಿ ವಾಲ್ಮೀಕಿ ಜಾತ್ರೆ ರಥದ ತಯಾರಿ ವೀಕ್ಷಣೆಗೆ ತೆರಳಿದ್ದ ಆನಂದ್‌ ಸಿಂಗ್‌ ಅವರು ಅಲ್ಲಿಂದ ಕಾರವಾರ ಮೂಲಕ ಗೋವಾಕ್ಕೆ ತೆರಳಿ, ದಿಲ್ಲಿಗೆ ಹೋಗಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ತಾನು ಮಾತ್ರ ರಾಜ್ಯ ಬಿಟ್ಟು ಎಲ್ಲಿಯೂ ಹೋಗಿಲ್ಲ. ರಾಜ್ಯದಲ್ಲೇ ಇರುವೆ ಎಂದು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ ಡಾಟ್‌ಕಾಂಗೆ ಸಚಿವ ಆನಂದ್‌ ಸಿಂಗ್‌ ಅವರು ಸ್ಪಷ್ಟಪಡಿಸಿದ್ದಾರೆ.

ಆನಂದ ಸಿಂಗ್‌ ಅಧಿಕಾರ : ನೀವುಂಟು, ಅವರುಂಟು ಎಂದ ಸಿಎಂ ಬೊಮ್ಮಾಯಿ

ನಾನು ಎಲ್ಲಿಯೂ ಹೋಗಿಲ್ಲ. ದಿಲ್ಲಿ ಹಾಗೂ ಬೆಂಗಳೂರಿಗೆ ಹೋಗುವುದಾದರೆ ಹೇಳಿಯೇ ಹೋಗುವೆ. ಮುಚ್ಚು ಮರೆಯಿಂದ ತೆರಳುವ ಜಾಯಮಾನ ನನ್ನದಲ್ಲ. ಸುಳ್ಳು ಹೇಳಿ ದಾರಿತಪ್ಪಿಸುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ಹೊಸಪೇಟೆಯಲ್ಲೀದ್ದೀರಾ ಇಲ್ಲವೇ ಬೆಂಗಳೂರಿನಲ್ಲೀದ್ದೀರಾ ಎಂದು ಕೇಳಿದ ಪ್ರಶ್ನೆಗೆ, ರಾಜ್ಯದಲ್ಲೇ ಇರುವೆ. ಕರ್ನಾಟಕ ಬಿಟ್ಟು ಎಲ್ಲಿಯೂ ಹೋಗಿಲ್ಲ. ಸುಮ್ಮನೆ ವದಂತಿ ಹಬ್ಬಿಸುವುದು ಬೇಡ. ದಿಲ್ಲಿಗಂತೂ ನಾನು ಹೋಗಿಲ್ಲ ಎಂದರು.

ಸಚಿವ ಆನಂದ್‌ ಸಿಂಗ್‌ ಅವರು ಪ್ರಬಲ ಖಾತೆ ಮೇಲೆ ಕಣ್ಣಿಟ್ಟಿದ್ದು, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಮನವೊಲಿಸಿದ್ದಾರೆ. ಆದರೂ, ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ಜವಾಬ್ದಾರಿಯನ್ನು ಇದುವರೆಗೆ ವಹಿಸಿಕೊಂಡಿಲ್ಲ. ಹೀಗಾಗಿ ಅವರ ನಡೆ ಇಂದಿಗೂ ನಿಗೂಢವಾಗಿಯೇ ಉಳಿದಿದೆ.