Asianet Suvarna News Asianet Suvarna News

ಹಳೇಹುಬ್ಬಳ್ಳಿ ಗಲಭೆ: ವಿಶೇಷ ನ್ಯಾಯಾಲಯಕ್ಕೆ ಚಾರ್ಚ್‌ಶೀಟ್ ಸಲ್ಲಿಕೆ

 ಹಳೇಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ತನಿಖೆ ನಡೆಸಿದ ಪೊಲೀಸರು ಹಾಗೂ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ 4 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಬರೋಬ್ಬರಿ 180 ದಿನಗಳ ಬಳಿಕ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

hubli riot Chargesheet submitted to special court gow
Author
First Published Oct 15, 2022, 6:59 PM IST

ಹುಬ್ಬಳ್ಳಿ (ಅ.15): ಇಲ್ಲಿನ ಹಳೇಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ತನಿಖೆ ನಡೆಸಿದ ಪೊಲೀಸರು ಹಾಗೂ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ 4 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಬರೋಬ್ಬರಿ 180 ದಿನಗಳ ಬಳಿಕ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಗ್ರಾಫಿಕ್ಸ್‌ ಫೋಟೋವನ್ನು ವ್ಯಾಟ್ಸ್‌ ಆ್ಯಪ್‌ ಸ್ಟೇಟಸ್‌ನಲ್ಲಿ ಯುವಕನೊಬ್ಬ ಇಟ್ಟುಕೊಂಡಿದ್ದ. ಈ ವಿಚಾರಕ್ಕೆ ರೊಚ್ಚಿಗೆದ್ದ ಒಂದು ಕೋಮಿನ ಸಾವಿರಾರು ಜನರು 2022ರ ಏಪ್ರಿಲ್‌ 16ರಂದು ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಗಲಭೆ ಸೃಷ್ಟಿಸಿದ್ದರು. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಿದ್ದರಲ್ಲದೇ, ಪೊಲೀಸ್‌ ಜೀಪ್‌ನ್ನು ಪಲ್ಟಿಹೊಡಿಸಿದ್ದರು. ಅಕ್ಕಪಕ್ಕದ ಮನೆ ಹಾಗೂ ದೇವಸ್ಥಾನಗಳ ಮೇಲೂ ಕಲ್ಲು ತೂರಾಟ ನಡೆದಿತ್ತು. ಘಟನೆಯಿಂದ ಇಬ್ಬರು ಪಿಐ ಹಾಗೂ 10ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿದ್ದವು. ನಾಲ್ಕು ಪೊಲೀಸ್‌ ವಾಹನಗಳು ಜಖಂಗೊಂಡು, ಅಕ್ಕಪಕ್ಕದ ಹತ್ತಾರು ಮನೆ, ದಿಡ್ಡಿ ಹನುಮಂತ ದೇವಸ್ಥಾನಕ್ಕೆ ಹಾನಿಯುಂಟಾಗಿತ್ತು.ಈ ಸಂಬಂಧ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಒಟ್ಟು 12 ಪ್ರಕರಣ ದಾಖಲಿಸಿಕೊಂಡು ಕೃತ್ಯಕ್ಕೆ ಪ್ರಚೋದನೆ ನೀಡಿದ ಮೌಲ್ವಿ ಸೇರಿದಂತೆ ಒಟ್ಟು 158 ಜನರನ್ನು ಬಂಧಿಸಿದ್ದರು. ಈ ಪೈಕಿ ಎಐಎಂಐಎಂ ಪಕ್ಷದ ಪಾಲಿಕೆ ಸದಸ್ಯ ನಜೀರ್‌ ಹೊನ್ಯಾಳ, ಓರ್ವ ಬಾಲಕ ಸೇರಿದಂತೆ 7 ಜನರಿಗೆ ಷರತ್ತುಬದ್ಧ ಜಾಮೀನು ದೊರೆತಿತ್ತು. ಉಳಿದ ಎಲ್ಲ ಆರೋಪಿಗಳು ಇನ್ನೂ ಬಳ್ಳಾರಿ ಹಾಗೂ ಕಲಬುರಗಿ ಜೈಲಿನಲ್ಲಿಯೇ ಇದ್ದಾರೆ.

ಹುಬ್ಬಳ್ಳಿ ಗಲಭೆಕೋರರ ಬೆಂಬಲಕ್ಕೆ ನಿಂತ ಅಂಜುಮನ್ ಇಸ್ಲಾಂ ಸಂಸ್ಥೆ

ಗಲಭೆ ಸೃಷ್ಟಿಸಿದ ಆರೋಪಿಗಳ ವಿರುದ್ಧ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ, ದೇಶದ್ರೋಹ, ಕಾನೂನುಬಾಹಿರ ಚಟುವಟಿಕೆ ಸಂಬಂಧಿಸಿದ ಯುಎಪಿಎ ಇತರ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಹೀಗಾಗಿ ಈ ಪ್ರಕರಣ ಸ್ಥಳೀಯ ನ್ಯಾಯಾಲಯದಿಂದ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ವರ್ಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಅನುಮತಿ ಮೇರೆಗೆ ಎನ್‌ಐಎ ಹಾಗೂ ಪ್ರಕರಣದ ತನಿಖಾಧಿಕಾರಿ ಎಸಿಪಿ ಆರ್‌.ಕೆ. ಪಾಟೀಲ, ಹಳೇಹುಬ್ಬಳ್ಳಿ ಠಾಣೆ ಪಿಐ ಅಶೋಕ ಚವ್ಹಾಣ ನೇತೃತ್ವದ ತಂಡ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.

ಗಲಭೆಕೋರರ ನಾಲ್ಕು ತಲೆ ಉರುಳಿದ್ದರೆ 50 ವರ್ಷ ಹುಬ್ಬಳ್ಳಿ ಶಾಂತವಾಗಿರುತ್ತಿತ್ತು: ಸಿ.ಟಿ. ರವಿ

ಎರಡು ಕಡೆ ಪ್ರತ್ಯೇಕ ಗಲಭೆ: ಇಬ್ಬರು ಜಾಮೀನು ಅಮಾನತು
ಗಂಗಾವತಿ: ಎರಡು ಪ್ರತ್ಯೇಕ ಗಲಭೆ ವಿವಾದದಲ್ಲಿ ಭಾಗಿಯಾಗಿದ್ದ ಇಬ್ಬರ ಜಾಮೀನು ಅರ್ಜಿಯನ್ನು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಮಾನತುಗೊಳಿಸಿದೆ. ಸೆ. 16ರಂದು ಇಂಟರ್‌ ನ್ಯಾಶನಲ್‌ ಹೋಟೆಲ್‌ನಲ್ಲಿ ಸಂದೀಪ್‌ ಎನ್ನುವ ವ್ಯಕ್ತಿ ತನ್ನ ಮಹಮ್ಮದ್‌, ಸಲ್ಮಾನ್‌ ಗುರುಪಾದ, ವಸಂತ ಕುಮಾರ, ಸುಂಕಪ್ಪ ಅವರು ಹೋಟೆಲ್‌ ಸಿಬ್ಬಂದಿಗೆ ಕೊಲೆ ಬೆದರಿಕೆ ಹಾಕಿದ್ದರು. ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡುವಂತೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕೋರಿದ್ದರು. ನ್ಯಾಯಧೀಶರಾದ ಎಂ.ಜಿ. ಶಿವಳ್ಳಿ ವಿಚಾರಣೆ ನಡೆಸಿ ಜಾಮೀನು ಅರ್ಜಿ ವಜಾಗೊಳಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಆಟೋ ನಗರದ ನಿವೇಶನ ಹಂಚಿಕೆ ಕುರಿತು ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಎಫ್‌. ರಾಘವೇಂದ್ರ ಅವರು ಪೌರಾಯುಕ್ತರ ವಿರುದ್ದ ಇಲ್ಲ-ಸಲ್ಲದ ಅರೋಪ ಮಾಡಿ ಬೆದರಿಕೆ ಹಾಕಿದ್ದರಿಂದ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ಜಾಮೀನು ನೀಡುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಾಧೀಶರು ವಜಾಗೊಳಿಸಿದ್ದಾರೆ. ಅಶಾಂತಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ.

Follow Us:
Download App:
  • android
  • ios