ಬೆಳಗಾವಿಯ ಬಸ್ತವಾಡ ಗ್ರಾಮದಲ್ಲಿ, ಮುಸ್ಲಿಂ ದಂಪತಿಯೊಬ್ಬರು ಅನಾಥ ಹಿಂದೂ ಹುಡುಗರನ್ನು ದತ್ತು ಪಡೆದು ಬೆಳೆಸಿದ್ದಾರೆ. ಇದೀಗ, ತಮ್ಮ ಹಿರಿಯ ದತ್ತು ಪುತ್ರನ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ಅದ್ದೂರಿಯಾಗಿ ನೆರವೇರಿಸಿ, ಧರ್ಮ ಸೌಹಾರ್ದತೆಗೆ ಮಾದರಿಯಾಗಿದ್ದಾರೆ.

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮ ಭಾವೈಕ್ಯದ ಮದುವೆಗೆ ಸಾಕ್ಷಿಯಾಗಿದೆ. ಬಸ್ತವಾಡ ಗ್ರಾಮದ ಮೆಹಬೂಬ್ ಹಸನ್ ನಾಯಿಕವಾಡಿ (ಮುಲ್ಲಾ) ಮತ್ತು ನೂರಜಾನ್ ದಂಪತಿ ಹಿಂದೂ ಧರ್ಮದ ಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ಇಬ್ಬರು ಮಕ್ಕಳಲ್ಲಿ ಓರ್ವ ಮಗನ ಮದುವೆಯನ್ನು ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ಮಾಡಿದ್ದಾರೆ. ಮಗನ ಮದುವೆ ಕಂಡು ಮುಲ್ಲಾ ದಂಪತಿ ಭಾವುಕರಾಗಿದ್ದರು. ಭಾನುವಾರ ಬಸ್ತವಾಡ ಗ್ರಾಮದ ಕಾಡಸಿದ್ದೇಶ್ವರ ಸಭಾಭವನದಲ್ಲಿ ನಡೆದ ಮದುವೆಗೆ ನೂರಾರು ಮಂದಿ ಸಾಕ್ಷಿಯಾಗಿದ್ದಾರೆ.

ಇಬ್ಬರು ಮಕ್ಕಳನ್ನು ಮಡಿಲಿಗೆ ಹಾಕಿಕೊಂಡ ನಾಯಿಕವಾಡಿ ದಂಪತಿ

ಗ್ರಾಮದ ಹಿಂದೂ-ಲಿಂಗಾಯತ ಸಮುದಾಯದ ಶಿವಾನಂದ್ ಕಾಡಯ್ಯ ಪೂಜಾರ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಹಿರಿಯ ಪುತ್ರ ಸೋಮಶೇಖರ್ 4 ವರ್ಷ ಮತ್ತು ಕಿರಿಯ ಪುತ್ರ ವಸಂತ್‌ಗೆ 2 ವರ್ಷದವರಾಗಿದ್ದ ಪೂಜಾರ ದಂಪತಿ ನಿಧನರಾಗುತ್ತಾರೆ. ಲೋಕಜ್ಞಾನ ಬರುವ ಮುಂಚೆಯೇ ಅಪ್ಪ-ಅಮ್ಮನನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದ ಸೋಮಶೇಖರ್ ಮತ್ತು ವಸಂತ್‌ ಜವಾಬ್ದಾರಿಯನ್ನು ನಾಯಿಕವಾಡಿ ದಂಪತಿ ತೆಗೆದುಕೊಂಡಿದ್ದರು. ತಮ್ಮ ಐದು ಮಕ್ಕಳ ಜೊತೆಯಲ್ಲಿಯೇ ಇವರಿಬ್ಬರನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದರು.

ತಮ್ಮ ಮಕ್ಕಳಂತೆ ಇವರಿಬ್ಬರನ್ನು ಬೆಳೆಸಿ ಶಿಕ್ಷಣ ಕೊಡಿಸಿದ್ದಾರೆ. ಮಹೆಬೂಬ್ ಮತ್ತು ನೂರಜಾನ್ ದಂಪತಿಗೆ ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ. ಸೋಮಶೇಖರ್, ವಸಂತ್ ಸೇರಿದಂತೆ ಒಟ್ಟು ಏಳು ಮಕ್ಕಳನ್ನು ನಾಯಿಕವಾಡಿ ದಂಪತಿ ಬೆಳೆಸಿದ್ದಾರೆ. ಪದವಿ ಪಡೆದುಕೊಂಡಿರುವ ಸೋಮಶೇಖರ್ ಮತ್ತು ಪಿಯುಸಿ ಮುಗಿಸಿರುವ ವಸಂತ್ ಇಬ್ಬರೂ ವಿಶೇಷ ಆರ್ಥಿಕ ವಲಯದ ಎಕಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಹಿರಿಯ ಮಗ ಸೋಮಶೇಖರ್ ಮದುವೆಯನ್ನು ಅದ್ಧೂರಿಯಾಗಿ ಮಾಡಲಾಗಿದೆ.

ಹಿಂದೂ-ಲಿಂಗಾಯತ ಸಂಪ್ರದಾಯದಂತೆ ನಡೆದ ಮದುವೆ

ತಾವೇ ಪೂನಂ ಎಂಬ ಯುವತಿಯನ್ನು ಹುಡುಕಿ ಸೋಮಶೇಖರ್ ಜೊತೆ ಮದುವೆ ಮಾಡಿಸಿದ್ದಾರೆ. ಹಿಂದೂ-ಲಿಂಗಾಯತ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ವಧು ಮತ್ತು ವರ ಮಾತ್ರ ಹಿಂದುಗಳು. ಇನ್ನುಳಿದಂತೆ ಮದುವೆ ಖರ್ಚು ಸೇರಿದಂತೆ ಎಲ್ಲಾ ಕೆಲಸಗಳಲ್ಲಿ ಮುಸ್ಲಿಮರು ಓಡಾಡುತ್ತಿರುವ ದೃಶ್ಯ ಕಂಡು ಬಂದಿತ್ತು. ಮೆಹಬೂಬ್ ಹಸನ್ ನಾಯಿಕವಾಡಿ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಿವೃತ್ತ ಉದ್ಯೋಗಿಯಾಗಿದ್ದಾರೆ. ಸೋಮಶೇಖರ್-ವಸಂತ್ ತಂದೆ ಶಿವಾನಂದ್ ಕಾಡಯ್ಯ ಸಹ ಖಾಸಗಿ ಟ್ರಾನ್ಸಪೋರ್ಟ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅನ್ಯ ಧರ್ಮದ ಮಕ್ಕಳನ್ನು ದತ್ತು ಪಡೆದುಕೊಂಡಾಗ ಮೆಹಬೂಬ್ ಹಸನ್-ನೂರಜಾನ್ ಅವರಿಗೆ ಕುಟುಂಬಸ್ಥರು ಬೆಂಬಲವಾಗಿ ನಿಂತಿದ್ದರು.

ಇದನ್ನೂ ಓದಿ: Tumakuru: ಚೆಂದದ ಮಂಟಪ, ಸುತ್ತಲೂ ಮಂತ್ರಘೋಷ; ತಾಳಿ ಕಟ್ಟುವ ಹೊತ್ತಿಗೆ ವರನಿಗೆ ಬಿಗ್‌ ಶಾಕ್

ಮನುಷ್ಯರೆಲ್ಲಾ ಒಂದೇ ಎಂದ ನಾಯಿಕವಾಡಿ

ಮದುವೆ ಕುರಿತು ಮಾತನಾಡಿರುವ ಮೆಹಬೂಬ್ ಹಸನ್, ಹಿರಿಯ ಮಗ ಸೋಮಶೇಖರ್‌ಗೆ ಕನ್ಯ ನೋಡಿದ್ದೀವಿ. ಹಿಂದೂ-ಲಿಂಗಾಯತ ಸಂಪ್ರದಾಯದಂತೆಯೇ ಗ್ರಾಮದ ಹಿರಿಯರ ಸಮ್ಮುಖದಲ್ಲಿಯೇ ಮದುವೆ ಮಾಡಿದ್ದೀವಿ. ಮನುಷ್ಯರೆಲ್ಲಾ ಒಂದೇ ಎಂಬುವುದು ನನ್ನ ಭಾವನೆಯಾಗಿದೆ. ಸೋಮಶೇಖರ್ ಮತ್ತು ವಸಂತ್ ನಮ್ಮ ಮಕ್ಕಳಂತೆಯೇ ಮನೆಯಲ್ಲಿ ಬೆಳೆದಿದ್ದಾರೆ. ಇಬ್ಬರು ಮಕ್ಕಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಧರ್ಮ ಸಂಘರ್ಷಗಳು ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಈ ಭಾವೈಕ್ಯತೆಯ ಮದುವೆ ಮಾದರಿಯಾಗಿದೆ. ನಾಯಿಕವಾಡಿ ದಂಪತಿ ತೆಗೆದುಕೊಂಡ ಇಡೀ ದೇಶಕ್ಕೆ ಮಾದರಿ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವಪ್ರಭು ವಂಟಮೂರಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: Special Marriage: ಭಾವನೆಗಳ ಮೂಲಕವೇ ನಡೆದ ಅಪರೂಪದ ಮದುವೆ: ಹೃದಯದ ಭಾಷೆ, ಮೌನವೇ ಸಂಭಾಷಣೆ