ಮಹಾರಾಷ್ಟ್ರದ ಹಿಂದೂ ಮೆಡಂಗಿ ಜೋಶಿ ಸಮಾಜದ ಭಕ್ತರು, ತಮ್ಮ ಸಂಪ್ರದಾಯದಂತೆ ಮೂರು ಬೃಹತ್ ಕಾಂಕ್ರೇಜ್ ಹೋರಿಗಳೊಂದಿಗೆ ಧರ್ಮಸ್ಥಳ ಸೇರಿದಂತೆ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಹೊರಟಿದ್ದಾರೆ. 

ದಕ್ಷಿಣ ಕನ್ನಡ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಸ್ಟಿ ಪ್ರದೇಶದ ಹಿಂದೂ ಮೆಡಂಗಿ ಜೋಶಿ ಸಮಾಜದ ಭಕ್ತರು ತಮ್ಮ ಸಂಪ್ರದಾಯದಂತೆ ಕಾಂಕ್ರೇಜ್ ತಳಿಯ ದೊಡ್ಡ ಕೊಂಬುಗಳ ಹೋರಿಗಳೊಂದಿಗೆ ಪ್ರತಿ ವರ್ಷ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ತೆರಳುತ್ತಾರೆ. ಅದೇ ರೀತಿ ಈ ಬಾರಿ ಅವರು ತಮ್ಮ ಊರಿನಿಂದ ಧರ್ಮಸ್ಥಳ, ತಿರುಪತಿ, ಪುರಿ ಜಗನ್ನಾಥ ಕ್ಷೇತ್ರದ ದರ್ಶನಕ್ಕಾಗಿ ಹೊರಟಿದ್ದು, ಈ ವೇಳೆ ಬಿ.ಸಿ. ರೋಡಿನ ತಲಪಾಡಿಯಲ್ಲಿ ವಿಶ್ರಾಂತಿ ಪಡೆದರು.

Add Asianetnews Kannada as a Preferred SourcegooglePreferred

ಜನಾಕರ್ಷಣೆಯಾಗಿರುವ ಬೃಹತ್ ಗಾತ್ರದ ಹೋರಿಗಳು

ಅವರ ಜತೆ ಮೂರು ಬೃಹತ್ ಗಾತ್ರದ ಹೋರಿಗಳಿದ್ದು, ಸುಮಾರು 13 ಮಂದಿ ಜತೆಗಿದ್ದಾರೆ. ಹೋರಿಗಳನ್ನು ಮೂರು ಗೂಡ್ಸ್ ವಾಹನಗಳಲ್ಲಿ ಸಾಗಿಸುತ್ತಿದ್ದು, ಒಂದು ವಾಹನದಲ್ಲಿ ಅವರ ತಂಡ ಸಾಗುತ್ತದೆ. ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ಸಾಗುತ್ತಿದ್ದು, ಈ ಸಂದರ್ಭ ಹೋರಿಗಳು ಜನಾಕರ್ಷಣೆ ಪಡೆಯುತ್ತಿವೆ.

ಕಳೆದೆರಡು ದಿನಗಳಿಂದ ಈ ಯಾತ್ರಾ ತಂಡ ಬಿ.ಸಿ. ರೋಡಿನ ತಲಪಾಡಿಯಲ್ಲಿ ಬೀಡು ಬಿಟ್ಟಿದ್ದು, ಅವರ ಒಂದು ಹೋರಿಗೆ ಕೊಂಚ ಆರೋಗ್ಯ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಒಂದೆರಡು ದಿನ ಹೆಚ್ಚೇ ವಿಶ್ರಾಂತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಆಹಾರ, ಕಾಣಿಕೆ ನೀಡುತ್ತಿರುವ ಸಾರ್ವಜನಿಕರು

ಹೀಗೆ ಸಾಗುವ ಸಂದರ್ಭದಲ್ಲಿ ಜನ ಅಪರೂಪದ ಹೋರಿಗಳನ್ನು ಕಂಡು ಆಹಾರ, ಕಾಣಿಕೆ ನೀಡುತ್ತಾರೆ. ಅದನ್ನು ಸ್ವೀಕರಿಸಿಕೊಂಡು ನಮ್ಮ ಪ್ರಯಾಣ ಬೆಳೆಸುತ್ತೇವೆ. ಪುಣ್ಯಕ್ಷೇತ್ರಗಳ ಸಂದರ್ಶನದ ಸಂದರ್ಭದಲ್ಲಿ ಮಹಾ ನಂದಿಗಳಿಗೆ ಅಲ್ಲಿನ ಜಲವನ್ನು ಅಭಿಷೇಕ ಮಾಡುವುದು ನಮ್ಮ ಸಂಪ್ರದಾಯವಾಗಿದೆ. ಪ್ರಸ್ತುತ ಧರ್ಮಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಹೋರಿಯನ್ನು ಧಾರ್ಮಿಕ ಹಿನ್ನೆಲೆಯಂತೆ ಸಂಪೂರ್ಣ ಅಲಂಕಾರ ಮಾಡುತ್ತೇವೆ. ಜತೆಗೆ ನಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ದೇವರ ದರ್ಶನ ಪಡೆಯುತ್ತೇವೆ.

ಇದನ್ನೂ ಓದಿ: ಕಷ್ಟಪಟ್ಟು ಖರೀದಿಸಿದ್ದ ಮನೆಯಲ್ಲಿ ಮೋಸ; ಹೊಸ ಮನೆಗೆ ಕಾಲಿಟ್ಟ Brindavana Serial ನಟ ವರುಣ್‌ ಆರಾಧ್ಯ!

ಜೊತೆಗೆ ಅಲಂಕೃತ ಹೋರಿಗಳು ತಮ್ಮ ಸಾಹಸ ಪ್ರದರ್ಶನಗಳನ್ನು ನೀಡುತ್ತವೆ. ಅದನ್ನು ಕಂಡು ಭಕ್ತರು ಒಂದಷ್ಟು ಕಾಣಿಕೆ ನೀಡುತ್ತಿದ್ದು, ಅದು ನಮ್ಮ ಪ್ರಯಾಣದ ವೆಚ್ಚದ ಜತೆಗೆ ಮಹಾ ನಂದಿಗಳ ಆಹಾರಕ್ಕೆ ಅನುಕೂಲವಾಗುತ್ತದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಅರೈ ಘಟಕ ಸ್ಥಾಪನೆಗೆ 100 ಎಕರೆ ಜಾಗ ನೀಡುವಂತೆ ಕೇಂದ್ರ ಸಚಿವ ಹೆಚ್‌ಡಿಕೆ ಪತ್ರ