ಪದವಿಪೂರ್ವ ಕಾಲೇಜಿಗಾಗಿ 10 ಕಿಮೀ ಪಾದಯಾತ್ರೆ ಕಾಲೇಜು ಮಂಜೂರಾಗದಿದ್ದರೆ ಚುನಾವಣೆ ಬಹಿಷ್ಕಾರ: ಯರಡೋಣಾ ಗ್ರಾಮಸ್ಥರ ಎಚ್ಚರಿಕೆ

ಕಾರಟಗಿ (ನ.10) : ಗ್ರಾಮಕ್ಕೆ ಪದವಿಪೂರ್ವ ಕಾಲೇಜು ಮಂಜೂರು ಮಾಡಬೇಕೆಂದು ಒತ್ತಾಯಿಸಿ ಸುಮಾರು 10 ಕಿಮೀ ಪಾದಯಾತ್ರೆ ಮಾಡಿದ್ದ ಅಲ್ಲದೇ ಬರುವ ಚುನಾವಣೆ ವೇಳೆಗೆ ಕಾಲೇಜು ಮಂಜೂರು ಮಾಡದ್ದಿದರೆ ಇಡೀ ಗ್ರಾಮಸ್ಥರೆಲ್ಲ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಾಲೂಕಿನ ಯರಡೋಣಾ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಪ್ಪಳ: ಬಿದ್ದಿದ್ದು 150 ಮನೆ, ಪರಿಹಾರ ಸಿಕ್ಕಿದ್ದು 1ಕ್ಕೆ ಮಾತ್ರ..!

ತಾಲೂಕಿನ ಯರಡೋಣಾ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಎಲ್ಲರೂ ಸೇರಿ ಒಕ್ಕೂರಲಿನಿಂದ ತಮ್ಮೂರಿಗೆ ಪದವಿಪೂರ್ವ ಕಾಲೇಜು ಮಂಜೂರು ಮಾಡಬೇಕೆಂದು ಒತ್ತಾಯಿಸಿ ಗ್ರಾಮದಿಂದ ಕಾರಟಗಿಯವರೆಗೆ ಸುಮಾರು 10 ಕಿಮೀ ಪಾದಯಾತ್ರೆ ಕೈಗೊಂಡು ಶಾಸಕರಿಗೆ ಮತ್ತು ತಹಸೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಬುಧವಾರ ಬೆಳಗ್ಗೆ 9ಕ್ಕೆ ಗ್ರಾಮದಿಂದ ಪ್ರಾರಂಭಿಸಿದ ಪಾದಯಾತ್ರೆಯನ್ನು ಎಚ್‌. ಬಸವಣ್ಣಕ್ಯಾಂಪ್‌ದಿಂದ ಮರ್ಲಾನಹಳ್ಳಿ ಮೂಲಕ ಕಾರಟಗಿಯವರೆಗೆ ಸುಮಾರು 4 ಗಂಟೆಗಳ ಕಾಲ ಪಾದಯತ್ರೆಯನ್ನು ನಡೆಸಿದರು. ಪಾದಯಾತ್ರೆಯುದ್ದಕ್ಕೂ ಘೋಷಣೆಗಳನ್ನು ಕೂಗಿದ ಗ್ರಾಮಸ್ಥರು ರಾಜ್ಯ ಸರ್ಕಾರ ಮಂಜೂರು ಮಾಡಿ ಆದೇಶವನ್ನು ಹಿಂತೆಗೆದುಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಆರ್‌.ಜಿ. ರಸ್ತೆಯ ಮೂಲಕ ಪ್ರವೇಶ ಪಡೆದ ಪಾದಯತ್ರೆ ಅಲ್ಲಿಂದ ನವಲಿ ವೃತ್ತದಲ್ಲಿ ಸ್ವಲ್ವ ಹೊತ್ತು ಪತ್ರಿಭಟನೆ ನಡೆಸಿ ನಂತರ ಅಲ್ಲಿಂದ ವಿಶೇಷ ಎಪಿಎಂಸಿ ಅವರಣದಲ್ಲಿನ ತಹಸೀಲ್ದಾರ್‌ ಕಚೇರಿಗೆ ತಲುಪಿತು.

ನ್ಯಾಯವಾದಿ ರವಿಸಿಂಗ್‌ ರಜಪೂತ್‌ ಮತ್ತು ತಾಪಂ ಮಾಜಿ ಸದಸ್ಯ ಶರಣಪ್ಪ ಮಾತನಾಡಿ, ಗ್ರಾಮಕ್ಕೆ ಕಾಲೇಜು ಮಂಜೂರು ಮಾಡಬೇಕೆಂದು ಹಲವು ಬಾರಿ ಕೊಟ್ಟಮನವಿ ವ್ಯರ್ಥವಾಗಿದೆ. 2019ರಲ್ಲಿಯೇ ಪ್ರೌಢಶಾಲೆಯನ್ನು ಉನ್ನತೀಕರಿಸಿಸಲಾಗಿದೆ. ಆದರೆ ಕಾಲೇಜು ಮಂಜೂರು ಮಾಡಲು ಶಾಸಕರು ಮತ್ತು ಇಲಾಖೆ ಮೀನಮೇಷ ಎಣಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಮತ್ತು ಸಂಬಂಧಿಸಿದರಿಗೆ ಬಿಸಿ ಮುಟ್ಟುವ ತನಕ ಗ್ರಾಮಸ್ಥರು ನಿರಂತರ ಹೋರಾಟ ಮಾಡುತ್ತೇವೆ ಎಂದರು.

ಶರಣಪ್ಪ ಬೋವಿ ಮಾತನಾಡಿ, ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಉಳ್ಳವರ ಮಕ್ಕಳು ಮಾತ್ರ ದೂರದ ಕಾಲೇಜುಗಳಿಗೆ ಹೋಗಿ ಬರುತ್ತಾರೆ. ಇನ್ನು ವಿದ್ಯಾರ್ಥಿನಿಯರ ಪಾಡು ಹೇಳತೀರದು. ಅನೇಕ ಯುವತಿಯರು ಕಾಲೇಜು ಅಭ್ಯಾಸವನ್ನೇ ಬಿಟ್ಟು ಮನೆಯಲ್ಲಿದ್ದಾರೆ. ಗ್ರಾಮಕ್ಕೆ ಬರುವ ಚುನಾವಣೆ ವೇಳೆಗೆ ಕಾಲೇಜು ಮಂಜೂರು ಆಗದಿದ್ದರೆ ಎಲ್ಲರೂ ಚುನಾವಣೆ ಮತದಾನವನ್ನು ಬಹಿಷ್ಕಾರ ಹಾಕುತ್ತೇವೆ ಎಂದು ಒಕ್ಕೊರಲಿನಿಂದ ತೀರ್ಮಾನಿಸಿದ್ದೇವೆ ಎಂದರು. ಕಾಲಮಿತಿಯೊಳಗೆ ಕಾಲೇಜು ಮಂಜೂರಾಗಬೇಕು. ಇಲ್ಲವಾದರೆ ಗ್ರಾಮಸ್ಥರಿಂದ ಹಂತ- ಹಂತವಾಗಿ ಹೋರಾಟ ಹಮ್ಮಿಕೊಳ್ಳುವುದಾಗಿ ಈ ಸಮಯದಲ್ಲಿ ಗ್ರಾವåಸ್ಥರು ಪ್ರಕಟಿಸಿದರು.

ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತ ವಿಶ್ವಗುರು : ಹಾಲಪ್ಪ ಆಚಾರ

ಪ್ರತಿಭಟನೆಯಲ್ಲಿ ಶರಣಯ್ಯಸ್ವಾಮಿ, ಮೌಲಸಾಬ್‌ ಮುಂಗ್ಲಿಮನಿ, ಗಂಗಪ್ಪ ನಾಯಕ್‌, ಶರಣಪ್ಪ ಸುಗ್ಗನಳ್ಳಿ, ರಾಜು ಅಂಗಡಿ, ವೆಂಕಟೇಶ, ಹನುಮಂತಪ್ಪ ಗುಂಡಾಣಿ, ಖಾಸಮ್‌ ಸಾಬ್‌ ಸಾಹುಕಾರ, ನಾಗರಾಜ ಸುಗ್ಗನಳ್ಳಿ, ಶಂಕರರಾಜ್‌, ವೀರೇಶ ಬಜಾರ್‌, ಬಸವನಗೌಡ ವಕೀಲರು, ಶರಣಪ್ಪ ಶಿವಪೂಜಿ, ಜಗದೀಶ ಕಟಾಂಬ್ಲಿ ಸೇರಿದಂತೆ 200ಕ್ಕೂ ಹೆಚ್ಚು ವಿದ್ಯಾಥಿಗಳು ಗ್ರಾಮದ ಎಲ್ಲ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲ ಪಕ್ಷಗಳ ಕಾರ್ಯಕರ್ತರು ಇದ್ದರು.