ರಾಯಚೂರಿನಲ್ಲಿ ರೈಲ್ವೇ ಟ್ರಾಕ್ ಕಾಮಗಾರಿಗಾಗಿ ಗುಂಡಿ ಅಗೆಯಲಾಗಿತ್ತು. ಹಾಗೇ ಬಿಟ್ಟು ನಿರ್ಲಕ್ಷ್ಯ ಮಾಡಿದ ಪರಿಮಾಮ 8 ವರ್ಷದ ಬಾಲಕ ಈ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಗನ ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.
ರಾಯಚೂರು (ಜು.26) ಪೋಷಕರ ಜೊತೆ ಜಮೀನಿಗೆ ತೆರಳಿದ 8 ವರ್ಷದ ಬಾಲಕ ಬಳಿಕ ಪಕ್ಕದಲ್ಲೇ ಆಟವಾಡಿದ್ದಾನೆ. ಮಳೆ ನೀರಿನಲ್ಲಿ ಆಟವಾಡುತ್ತಿದ್ದ ಬಾಲಕ ರೈಲ್ವೇ ಟ್ರಾಕ್ ಕಾಮಗಾರಿಗಾಗಿ ತೆಗೆದಿದ್ದ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ರಾಯಚೂರಿನ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ನಡೆದಿದೆ. ಮಣ್ಣಿಗಾಗಿ ಗುಂಡಿ ಅಗೆಯಲಾಗಿತ್ತು. ಬಳಿಕ ಹಾಗೇ ನಿರ್ಲಕ್ಷ್ಯ ತೋರಿದ ಕಾರಣ ಈ ಗುಂಡಿಯಲ್ಲಿ ಮಳೆ ನೀರು ನಿಂತುಕೊಂಡಿತ್ತು.ಅಮಾಯಕ ಬಾಲಕ ಇದೇ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಮಗನ ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.
ಕಾಮಗಾರಿಗಾಗಿ ಅಗೆದಿದ್ದ ಗುಂಡಿಯಲ್ಲಿ ಶವವಾಗಿ ಪತ್ತೆ
8 ವರ್ಷದ ಬಾಲಕ ಯಶವಂತ್ ಪೋಷಕರ ಜೊತೆ ಜಮೀನಿಗೆ ತೆರಳಿದ್ದ. ಪೋಷಕರು ಜಮೀನು ಕೆಲಸದಲ್ಲಿ ತೊಡಗಿಸಿಕೊಂಡರೆ ಇತ್ತ ಬಾಲಕ ಪಕ್ಕದಲ್ಲೇ ಆಟವಾಡುತ್ತಿದ್ದ. ಕೆಲ ಹೊತ್ತಲ್ಲೇ ಬಾಲಕನ ನಾಪತ್ತೆಯಾಗಿದ್ದಾನೆ. ಜಮೀನು ಸುತ್ತ ಮುತ್ತ ಹುಡುಕಿದರೂ ಪತ್ತೆಯಾಗಲಿಲ್ಲ. ಕೊನೆಗೆ ರೈಲ್ವೇ ಕಾಮಗಾರಿಗಾಗಿ ಅಗೆದಿದ್ದ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಗಿಣಿಗೇರಾ ಮೆಹಬೂಬನಗರ ರೈಲ್ವೇ ಟ್ರ್ಯಾಕ್ ಕಾಮಗಾರಿ ನಡೆಯುತ್ತಿದೆ. ರೈಲ್ವೇ ಟ್ರಾಕ್ಗೆ ಮಣ್ಣು ಹೊಂದಿಸಲು ಗುಂಡಿ ತೆಗೆಯಲಾಗಿದೆ. ಬಳಿಕ ಈ ಗುಂಡಿಯನ್ನು ಮಚ್ಚುವ ತಡೆ ಗೋಡೆ ನಿರ್ಮಿಸುವ ಯಾವುದೇ ಕೆಲಸವನ್ನು ಮಾಡಿಲ್ಲ. ಮಳೆ ಕಾರಣದಿಂದ ಈ ಗುಂಡಿಯಲ್ಲಿ ನೀರು ತುಂಬಿಕೊಂಡಿದೆ. ಕೆರೆಯಂತಾದ ಗುಂಡಿ, ಕೆಸರು ನೀರಿನ ಆಳ ಗೊತ್ತಿಲ್ಲದ ಬಾಲಕ ಇದೇ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ.
ಗುತ್ತಿಗೆದಾರನ ನಿರ್ಲಕ್ಷ್ಯ ಆರೋಪ
ಗುತ್ತಿಗೆದಾರ ಮಣ್ಣು ತೆಗೆದು ಗುಂಡಿಯನ್ನು ನಿರ್ಲಕ್ಷಿಸಿದ್ದಾನೆ. ಇದರ ಪರಿಣಾಮ ಬಾಲಕನ ಜೀವ ಹೋಗಿದೆ.ಗುತ್ತಿಗೆದಾರನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ನಿರ್ಲಕ್ಷ್ಯ ತೋರಿ ತಮ್ಮ ಮಗನ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರು ಕಣ್ಣೀರಿಟ್ಟಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


