ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸೋ ಹಾಸನಾಂಬೆಯ ದರ್ಶನೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಈ ಬಾರಿ 15 ದಿನಗಳ ಕಾಲ ಜಾತ್ರಾ ಮಹೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ.

ವರದಿ- ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಹಾಸನ, (ಸೆಪ್ಟೆಂಬರ್. 10): ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸೋ ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲು ಅಕ್ಟೋಬರ್ 13ಕ್ಕೆ ತೆರೆಯಲಿದ್ದು, ಜಾತ್ರಾ ಮಹೋತ್ಸವ ಅಕ್ಟೋಬರ್ 13ರಿಂದ ಅಕ್ಟೋಬರ್ 27ರವರೆಗೆ ನಡೆಯಲಿದೆ.

ಇದಕ್ಕೆ ಹಾಸನ ಜಿಲ್ಲಾಡಳಿತ ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಳ್ತಿದೆ. ಕೊರೋನಾ ನಂತರ ಇದೀಗ ಅದ್ದೂರಿಯಾಗಿ ಜಾತ್ರಾಮಹೋತ್ಸವವನ್ನ ಆಚರಣೆ ಮಾಡೋದಕ್ಕೆ ಜಿಲ್ಲಾಡಳಿತ ಪ್ಲಾನ್ ಮಾಡಿಕೊಂಡಿದ್ದು, ಭಕ್ತರ ಸಂಖ್ಯೆಯಲ್ಲಿಯೂ ಹೆಚ್ಚಾಗುವ ನಿರೀಕ್ಷೆ ಇದೆ. ಈಗಾಗಲೇ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಿಎಂ ಸೇರಿದಂತೆ ರಾಜ್ಯದ ಎಲ್ಲಾ ಗಣ್ಯರನ್ನ ಆಹ್ವಾನಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. 

ಶಾಸಕ ರೇವಣ್ಣ ಬದಲಿಸಲು ಹಾಸನಾಂಬೆ ಮುಂದೆ ಕೋರಿಕೆ : ಹುಂಡಿಯಲ್ಲಿ ಡಿಫರೆಂಟ್ ಪತ್ರ

ಅಕ್ಟೋಬರ್ 13 ರಿಂದ 27ರ ವರೆಗೆ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಲಿದೆ. ಪವಾಡ ಕ್ಷೇತ್ರವೆಂದೇ ಕರೆಸಿಕೊಳ್ಳೋ ಹಾಸನ ನಗರದ ಅಧಿದೇವತೆ, ಸಪ್ತಮಾತೃಕೆಯರ ಕ್ಷೇತ್ರ ಹಾಸನದ ಹಾಸನಾಂಬೆಯ ಜಾತ್ರಾಮಹೋತ್ಸವ ಅಕ್ಟೋಬರ್ 13 ಕ್ಕೆ ಚಾಲನೆಗೊಳ್ಳಲಿದೆ. ಆಶ್ವೀಜ ಮಾಸದ ಪೌರ್ಣಿಮೆಯ ನಂತರ ಬರುವ ಮೊದಲ ಗುರುವಾರ ಗರ್ಭಗುಡಿಯ ಬಾಗಿಲು ತೆರೆದು, ಬಲಿಪಾಡ್ಯಮಿಯ ಮಾರನೆಯ ದಿನ ಗರ್ಭಗುಡಿ ಬಾಗಿಲು ಮುಚ್ಚುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ.

ಅದರಂತೆ ಅಕ್ಟೋಬರ್ 13 ರಂದು ಗರ್ಭಗುಡಿಯ ಬಾಗಿಲು ತೆರೆದು, ಅಕ್ಟೋಬರ್ 27ಕ್ಕೆ ಬಾಗಿಲು ಮುಚ್ಚುಲಾಗುವುದು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಲು, ಶಾಸಕ ಪ್ರೀತಂಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ, ದೇವಾಲಯ ಆಡಳಿತಾಧಿಕಾರಿ, ಎಸಿ ಜಗದೀಶ್ ಅವರನ್ನೊಳಗೊಂಡಂತೆ ಪೂರ್ವಭಾವಿ ಸಭೆ ನಡೆಸಿದೆ. ಇಂದು ದೇವಾಲಯದ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಮೊದಲನೇ ದಿನ ಹಾಗೂ ಕೊನೆಯ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರೋದಿಲ್ಲ, ಇನ್ನು ಈ ಭಾರಿ ಒಂದು ದಿನ ಗ್ರಹಣ ಬಂದಿರೋದ್ರಿಂದ ಒಟ್ಟು ಮೂರು ದಿನಗಳು ಈ ಭಾರಿ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರೋದಿಲ್ಲ. ಕಳೆದ ಎರಡು ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಹಾಗಾಗಿ ಈ ಭಾರಿ ಹೆಚ್ಚಿನ ಭಕ್ತರ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಇದೆ. ಡಿಸಿ ಹಾಗೂ ಎಸ್ಪಿಯವರಿಗೆ ಮೊದಲನೇ ಜಾತ್ರಾ ಮಹೋತ್ಸವವಾಗಿರೋದು, ಒಂದು ರೀತಿಯ ಸವಾಲಾಗಿದೆ. ಏನೆಲ್ಲಾ ಅಗತ್ಯ‌ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಡಿಸಿ ಹಾಗೂ ಎಸ್ಪಿ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದ್ದು, ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದೆಂದು ಜಿಲ್ಲಾಧಿಕಾರಿ ಅರ್ಚನಾ ಹೇಳಿದರು.

ಜಾತ್ರಾ ಮಹೋತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರು, ರಾಜ್ಯದ ಮಾಜಿ ಸಿಎಂಗಳು, ಹಾಲಿ ಶಾಸಕರುಗಳು, ಸೇರಿದಂತೆ ಎಲ್ಲಾ ಪ್ರಮುಖ ಗಣ್ಯರನ್ನ ಆಹ್ವಾನಿಸಲು ಜಿಲ್ಲಾಡಳಿತ ತೀರ್ಮಾನ ಮಾಡಿದೆ. ಹಾಸನಾಂಬೆಯ ದರ್ಶನಕ್ಕೆ ರಾಜ್ಯ ಮಾತ್ರವಲ್ಲದೇ ಹೊರರಾಜ್ಯದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸೋದು ದೇವಿಯ ಪ್ರಸಿದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ. ಎ ಗ್ರೇಡ್ ಸ್ಥಾನ ಹಿಂದಿರೋ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಇಂದಿನಿಂದಲೇ ಜಿಲ್ಲಾಡಳಿತ ಸಿದ್ದತೆ ಮಾಡಿಕೊಳ್ಳೋಕೆ ಮುಂದಾಗಿದೆ. ಈ ಭಾರಿ ವರುಣದೇವ ಯಾವುದೇ ಸಮಸ್ಯೆ ಮಾಡದೇ ಹೋದ್ರೆ ಭಕ್ತರು ನಿರಾಳರಾಗಿ ಹಾಸನಾಂಬೆಯ ದರ್ಶನವನ್ನ ಪಡೆಯಬಹುದಾಗಿದೆ.