ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿ ತಕ್ಷಣವೇ ಮಠ ಖಾಲಿ ಮಾಡಬೇಕೆಂದು ವೀರಶೈವ ಲಿಂಗಾಯತ ಪಂಚಮಸಾಲಿ ಯುವ ಘಟಕ ಆಗ್ರಹ. ಸ್ವಾಮೀಜಿ ಮಕ್ಕಳಿಂದ ಮಸಾಜ್ ಮಾಡಿಸಿಕೊಂಡು ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಿದ ಯುವ ಘಟಕ, ಪೀಠ ತೊರೆಯದಿದ್ದರೆ ಧರಧರನೆ ಎಳೆದು ಹೊರಹಾಕ್ತೀವಿ ಎಂದು ಎಚ್ಚರಿಸಿದೆ.
ದಾವಣಗೆರೆ: ಹರಿಹರ ಪಂಚಮಸಾಲಿ ಪೀಠಕ್ಕೆ ಲಾಬಿ ಮಾಡಿ, ಶಿಫಾರಸ್ಸಿನ ಮೇಲೆ ಬಂದಿದ್ದ ಉಚ್ಚಾಟಿತ ವಚನಾನಂದ ಸ್ವಾಮೀಜಿ ತಕ್ಷಣವೇ ಮಠ ಖಾಲಿ ಮಾಡದಿದ್ದರೆ ವೀರಶೈವ ಲಿಂಗಾಯತ ಪಂಚಮಸಾಲಿ ಯುವ ಘಟಕದವರು ‘ಧರಧರನೆ ಎಳೆದು ಹೊರ ಹಾಕಬೇಕಾಗುತ್ತದೆ’ ಎಂದು ಯುವ ಘಟಕದ ರಾಜ್ಯಾಧ್ಯಕ್ಷ ಕಿಚಡಿ ಕೊಟ್ರೇಶ, ಕಾರ್ಯದರ್ಶಿ ಬಿ.ಆರ್.ಕರಿಬಸಪ್ಪ ಎಚ್ಚರಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪಂಚಮಸಾಲಿ ಹಿರಿಯರು, ಮುಖಂಡರ ದಶಕಗಳ ಪ್ರಯತ್ನದ ಫಲವಾಗಿ ಹರಿಹರ ಪಂಚಮಸಾಲಿ ಪೀಠ ಸ್ಥಾಪನೆಯಾಗಿದ್ದು, ಸಂಸ್ಕೃತಿ, ಸಂಸ್ಕಾರವಿದ್ದರೆ ವಚನನಾನಂದ ಸ್ವಾಮೀಜಿ ತಕ್ಷಣವೇ ಪೀಠವನ್ನು ತೊರೆಯಬೇಕು. ಇಲ್ಲವಾದರೆ ಮಠದಿಂದ ಧರಧರನೆ ಹೊರ ಹಾಕುವ ಕೆಲಸವನ್ನು ಯುವ ಘಟಕವೇ ಮಾಡುತ್ತದೆ ಎಂದರು.
ಪೀಠದ ಹಿಂದಿನ ಶ್ರೀ ಸಿದ್ಧಲಿಂಗ ಸ್ವಾಮಿಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಕಟ್ಟಿದ ಮಠದಲ್ಲಿ ಹೊಕ್ಕಿರುವ ವಚನಾನಂದ ಸ್ವಾಮೀಜಿ ನಿಜಬಣ್ಣ ಈಗ ಬಯಲಾಗಿದೆ. ಚಿಕ್ಕ ಮಕ್ಕಳಿಂದ ಮಸಾಜ್ ಮಾಡಿಸಿಕೊಂಡು ವಿಕೃತಿ ಮೆರೆದಿದ್ದಲ್ಲದೇ, ಅಪ್ರಾಪ್ತ ಮಗುವೊಂದು ಚಳಿ ಜ್ವರದಿಂದ ಬಳಲುತ್ತಿದ್ದರೆ ಆ ಮಗುವಿನ ಮೇಲೆ ತಣ್ಣೀರೆರಚಿ ಅಮಾನವೀಯ ವರ್ತನೆ ತೋರಿದ್ದಾರೆ. ಹಾಗಾಗಿ ಸ್ವಾಮೀಜಿ ಪೀಠದಲ್ಲಿ ಮುಂದುವರಿಯುವ ನೈತಿಕತೆಯೇ ಇಲ್ಲ. ತಕ್ಷಣವೇ ಪೀಠ ತೊರೆಯಲಿ ಎಂದು ತಾಕೀತು ಮಾಡಿದರು.
ಮಠದ ಟ್ರಸ್ಟಿಗಳು, ಸಮಾಜದ ಮುಖಂಡರ ವಿರುದ್ಧ ಎತ್ತಿ ಕಟ್ಟುವ ಮೂಲಕ ಇಡೀ ಸಮಾಜವನ್ನು ಒಡೆದು ಆಳುವ ನೀತಿಯನ್ನು ವಚನಾನಂದ ಸ್ವಾಮೀಜಿ ಅನುಸರಿಸಿದ್ದಾರೆ. ಹಿಂದೆ ಸಿದ್ಧಲಿಂಗ ಸ್ವಾಮೀಜಿಗೆ ವಚನಾನಂದ ಶ್ರೀ ಕರೆ ಮಾಡಿ, ನಿಮ್ಮನ್ನು ಉಚ್ಛಾಟಿಸಿದ್ದು, ಮಠ ಬಿಟ್ಟು ಹೋಗಿ ಅಂತ ತಿಳಿಸಿದ್ದರು. ಈಗ ತಾವೇ ಉಚ್ಛಾಟನೆಯಾಗಿದ್ದರಿಂದ ಮಠ ತೊರೆಯಬೇಕಲ್ಲವೇ ಎಂದರು.
ಲೆಕ್ಕ ಕೇಳಲೂ ನಾವು ಬರುತ್ತೇವೆ:
ಲೆಕ್ಕ ಕೊಡಿ ಹೋರಾಟ ಸಮಿತಿ ಮುಖಂಡರಿಗೂ ನಾವು ಮನವಿ ಮಾಡುತ್ತೇವೆ. ಮೊದಲು ವಚನಾನಂದ ಸ್ವಾಮೀಜಿ ಪೀಠದಿಂದ ಹೊರ ಹೋಗಲಿ, ನಿಮ್ಮ ಜೊತೆಗೆ ನಾವೂ ಲೆಕ್ಕ ಕೊಡಿ ಅಂತ ಟ್ರಸ್ಟನ್ನು ಕೇಳುತ್ತೇವೆ. ಸ್ವಾಮಿತ್ವಕ್ಕೆ ಬೆಲೆ ಕೊಡದ, ಕೀಚಕ ಮನಸ್ಸಿನ ಇಂತಹ ಸ್ವಾಮೀಜಿ ನಮ್ಮ ಸಮಾಜಕ್ಕೆ, ಪೀಠಕ್ಕೆ ಬೇಕೆ? ಎಂಬ ಬಗ್ಗೆ ಲೆಕ್ಕ ಕೊಡಿ ಹೋರಾಟ ಸಮಿತಿ ಮುಖಂಡರು ಆಲೋಚಿಸಲಿ. ಮೊದಲು ಸಮುದಾಯದ ಜನರು, ರಾಜಕಾರಣಿಗಳು ಕೊಟ್ಟ ಕಾಣಿಕೆಯ ಲೆಕ್ಕವನ್ನು ಸ್ವಾಮೀಜಿಯೂ ನೀಡಲಿ ಎಂದು ಕಿಚಡಿ ಕೊಟ್ರೇಶ ಒತ್ತಾಯಿಸಿದ್ದಾರೆ.
ಹಿಂಜಾವೇ ಬಗ್ಗೆ ತುಚ್ಛ ಪದ ಬಳಕೆ:
ಈ ಹಿಂದೆ ಪಂಚಮಸಾಲಿ ಯುವತಿ ಲವ್ ಜಿಹಾದ್ಗೆ ತುತ್ತಾದಾಗ ಹಿಂದೂ ಜಾಗರಣಾ ವೇದಿಕೆಯವರು ಧ್ವನಿ ಎತ್ತಿದ್ದರು. ಈ ವೇಳೆ ವಚನಾನಂದ ಸ್ವಾಮೀಜಿಯನ್ನು ಹೋರಾಟಕ್ಕೆ ಕರೆದಾಗ ಹಿಂಜಾವೇ ಮುಖಂಡರು, ಕಾರ್ಯಕರ್ತರ ಬಗ್ಗೆ ತುಚ್ಛ ಪದಗಳಿಂದ ನಿಂದನೆ ಮಾಡಿದ್ದರು ಎಂದು ಬಿ.ಆರ್.ಕರಿಬಸಪ್ಪ ಆರೋಪಿಸಿದ್ದಾರೆ.


