Asianet Suvarna News Asianet Suvarna News

ಕರ್ನಾಟಕದ ಏಳು ಅದ್ಭುತ ಹಂಪಿಗೆ ಗರಿಮೆ

ಐತಿಹಾಸಿಕ ಜಿಲ್ಲೆ ವಿಜಯನಗರ ಜಿಲ್ಲೆಯ ಅಸ್ಮಿತೆಯಾಗಿರುವ ಹಂಪಿಗೆ ಕರ್ನಾಟಕದ ಏಳು ಅದ್ಭುತಗಳು ಗರಿಮೆ ಸಿಕ್ಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಘೋಷಣೆ ಮಾಡಿದ್ದು, ಹಂಪಿಗೆ ಮತ್ತೊಂದು ಗರಿ ದೊರೆತಿದೆ. ಇದರಿಂದ ವಿಜಯನಗರ ಜಿಲ್ಲೆಯಲ್ಲಿ ಸಂಭ್ರಮ- ಉತ್ಸಾಹ ಮನೆ ಮಾಡಿದೆ.

Hampi ranks among the seven wonders of Karnataka snr
Author
First Published Feb 26, 2023, 7:02 AM IST

 ಹೊಸಪೇಟೆ :  ಐತಿಹಾಸಿಕ ಜಿಲ್ಲೆ ವಿಜಯನಗರ ಜಿಲ್ಲೆಯ ಅಸ್ಮಿತೆಯಾಗಿರುವ ಹಂಪಿಗೆ ಕರ್ನಾಟಕದ ಏಳು ಅದ್ಭುತಗಳು ಗರಿಮೆ ಸಿಕ್ಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಘೋಷಣೆ ಮಾಡಿದ್ದು, ಹಂಪಿಗೆ ಮತ್ತೊಂದು ಗರಿ ದೊರೆತಿದೆ. ಇದರಿಂದ ವಿಜಯನಗರ ಜಿಲ್ಲೆಯಲ್ಲಿ ಸಂಭ್ರಮ- ಉತ್ಸಾಹ ಮನೆ ಮಾಡಿದೆ.

ಇತ್ತೀಚೆಗಷ್ಟೇ ಕರ್ನಾಟಕದ 31ನೇ ಜಿಲ್ಲೆಯಾಗಿ ಉದಯಿಸಿರುವ ಐತಿಹಾಸಿಕ ವಿಜಯನಗರ ಜಿಲ್ಲೆಯ ಸಮಸ್ತ ನಾಗರಿಕರಿಗೆ ಸಂತಸದ ಸುದ್ದಿ ದೊರೆತಿದೆ.

ಜಾಗತಿಕ ಹೆಗ್ಗುರುತುಗಳಾಗಿ ಪ್ರಪಂಚದ 7 ಅದ್ಭುತಗಳು ಇರುವಂತೆಯೇ ಇದೀಗ ಕರುನಾಡಿನ ಹೆಗ್ಗುರುತುಗಳಾಗಿ ಕರ್ನಾಟಕದ 7 ಅದ್ಭುತ ತಾಣಗಳ ಘೋಷಣೆಯಾಗಿದೆ. ರಾಜ್ಯದ ನೆಲ-ಜಲ, ಕಾಡು-ಕಡಲು, ವಾಸ್ತು-ವಿಜ್ಞಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿದಂತೆ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟತಾಣಗಳನ್ನು ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಕರ್ನಾಟಕದ 7 ಅದ್ಭುತಗಳು’ ಎಂದು ಘೋಷಿಸಿದ್ದಾರೆ. ಈ ಪೈಕಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಹಂಪಿಯೂ ಒಂದು.

ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ಶನಿವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ‘ಕರ್ನಾಟಕದ 7 ಅದ್ಭುತ’ಗಳನ್ನು ಉದ್ಘೋಷಿಸಲಾಯಿತು. ಇದೇ ವೇಳೆ ಗೌರವ ಪಡೆದ ತಾಣಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರಮಾಣಪತ್ರ ಹಸ್ತಾಂತರಿಸಲಾಯಿತು. ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ ಟಿ. ಪ್ರಮಾಣಪತ್ರ ಸ್ವೀಕರಿಸಿದರು.

ಹಂಪಿ (ಪುರಾತತ್ವ ಅದ್ಭುತ):

ರೋಮ್‌ನಂತೆ ಇಡೀ ಹಂಪಿಯೇ ಒಂದು ಅದ್ಭುತ. ಇದನ್ನು ಜಗತ್ತಿನ ಅತಿದೊಡ್ಡ ಓಪನ್‌ ಏರ್‌ ಆರ್ಕಿಯಾಲಜಿಕಲ್‌ ಮ್ಯೂಸಿಯಂಗಳಲ್ಲಿ ಒಂದು ಎಂದು ಹೇಳಬಹುದು. ಇಲ್ಲಿನ ಶಿಲ್ಪಕಲಾ ವೈಭವ, ಶಿಲ್ಪಕಲಾ ವೈವಿಧ್ಯ, ನೂರಾರು ಸ್ಮಾರಕಗಳು, ಜಗತ್ೊ್ರಸಿದ್ಧ. ಹಂಪಿಯ ಕಲ್ಲಿನ ರಥ ಯಾರಿಗೆ ಗೊತ್ತಿಲ್ಲ ಹೇಳಿ. ಇಲ್ಲಿನ ಕಲ್ಲುಕಲ್ಲಿನಲಿ ಶಿಲೆಗಳು ಸಂಗೀತ ನುಡಿಸುತ್ತವೆ ಎಂಬುದು ಅಕ್ಷರಶಃ ನಿಜ. ಇದಕ್ಕೆ ವಿಜಯ ವಿಠ್ಠಲ ದೇವಾಲಯದ ಸಂಗೀತ ಕಂಬಗಳಿಂದ ಹಿಡಿದು, ಮಹಾನವಮಿ ದಿಬ್ಬದ ಬಳಿ ಇರುವ ಕಲ್ಲಿನ ಊಟದ ತಟ್ಟೆಗಳವರೆಗೆ ಅನೇಕ ಸಾಕ್ಷಾತ್‌ ನಿದರ್ಶನಗಳಿವೆ. ಅಲ್ಲದೆ, ಹಂಪಿಯ ಸುತ್ತ ಇರುವ ಬಂಡೆ ಬೆಟ್ಟಗಳ ಪರಿಸರ ಕರ್ನಾಟಕದ ವೈವಿಧ್ಯಮಯ ನಿಸರ್ಗ ಸೌಂದರ್ಯಕ್ಕೆ ಪ್ರತ್ಯೇಕ ಮೆರುಗನ್ನೇ ನೀಡಿದೆ. ಕರ್ನಾಟಕದಲ್ಲಿ ಹಂಪಿಯಂಥ ಹಲವಾರು ಶಿಲ್ಪಕಲೆಯ ಪುರಾತತ್ವ ಅದ್ಭುತಗಳಿವೆ. ಪ್ರತಿಯೊಂದೂ ತಾವೇ ತಾವಾಗಿ ಒಂದೊಂದು ಅದ್ಭುತ ಎನಿಸಿಕೊಳ್ಳಬೇಕಾದಂಥವು. ಬೇಲೂರು ಚನ್ನಕೇಶವ ದೇವಾಲಯ ಭಾರತೀಯ ಶಿಲ್ಪಕಲೆಯ ಔನ್ನತ್ಯಕ್ಕೆ ಉದಾಹರಣೆ. ಹಳೇಬೀಡು, ಪಟ್ಟದಕಲ್ಲು ದೇವಾಲಯಗಳು ಒಂದೆಡೆಯಾದರೆ ಐಹೊಳೆಯು ಭಾರತೀಯ ದೇವಾಲಯ ಶಿಲ್ಪಕಲೆಯ ತೊಟ್ಟಿಲು ಎಂದೇ ಖ್ಯಾತ. ಬಾದಾಮಿಯ ಗುಹಾಂತರ ದೇವಾಲಯಗಳೂ ಏನೂ ಕಡಿಮೆ ಇಲ್ಲ. ಲಕ್ಕುಂಡಿ, ತಲಕಾಡು ಸೇರಿದಂತೆ ಕರ್ನಾಟಕಾದ್ಯಂತ ಇರುವ ಇಂಥ ಹಲವಾರು ಪುರಾತತ್ವ ವೈಭವದ ಪ್ರಾತಿನಿಧಿಕ ಅದ್ಭುತವೇ ಹಂಪಿ.

1986ರಲ್ಲೇ ಹಂಪಿಯ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ ವಿಶ್ವ ಪರಂಪರೆ ತಾಣ ಎಂದು ಗುರುತಿಸಿದೆ. ಈಗ ಕರ್ನಾಟಕದ ಏಳು ಅದ್ಭುತವಾಗಿ ಆಯ್ಕೆಯಾಗಿದೆ. ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿರುವ ಹಂಪಿ ಈಗ ಕರ್ನಾಟಕದ ಏಳು ಅದ್ಭುತವಾಗಿ ಹೊರಹೊಮ್ಮಿದೆ. ಈ ಮೂಲಕ ಹಂಪಿ ರಾಜ್ಯದ ಅದ್ಭುತವಾಗಿ ಗರಿಮೆ ಪಡೆದಿದೆ.

ಈಗಾಗಲೇ ವಿಶ್ವವಿಖ್ಯಾತಿ ಅಗಿರುವ ಹಂಪಿ ಈಗ ಪುನಃ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದಾಗಿ ಆಯ್ಕೆ ಆಗಿರುವುದು ನನಗೆ ಅತೀವ ಸಂತಸ ತಂದಿದೆ. ಈ ಕಾರ್ಯವನ್ನು ಮಾಡಿದ ‘ಕನ್ನಡಪ್ರಭ’ ಹಾಗೂ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನವರಿಗೆ ಅಭಿನಂದನೆ ಸಲ್ಲಿಸುವೆ. ಹಾಗೇ ಈ ಕರ್ನಾಟಕದ ಏಳು ಅದ್ಭುತಗಳ ಕುರಿತು ತಮ್ಮ ಸಂಸ್ಥೆಯ ದೇಶದ ಇತರ ಭಾಷೆಗಳಲ್ಲೂ ಬಿತ್ತರಿಸುವ ಮೂಲಕ ಹೆಚ್ಚು ಪ್ರಚಾರವನ್ನು ನೀಡಲು ವಿನಂತಿ.

ಆನಂದ ಸಿಂಗ್‌, ಪ್ರವಾಸೋದ್ಯಮ ಸಚಿವರು

ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದಾಗಿ ಹಂಪಿ ಆಯ್ಕೆಯಾಗಿರುವುದು ಐತಿಹಾಸಿಕ ವಿಜಯನಗರ ಜಿಲ್ಲೆಗೆ ಹೆಮ್ಮೆ ತಂದಿದೆ. ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಹಂಪಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೊಣೆ ನೀಡಿದೆ. ಈ ಮೂಲಕ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ.

ವೆಂಕಟೇಶ ಟಿ. ಜಿಲ್ಲಾಧಿಕಾರಿ ವಿಜಯನಗರ

Follow Us:
Download App:
  • android
  • ios