ಶಿವಾಜಿನಗರದಲ್ಲಿನ ಶಿಥಿಲಾವಸ್ಥೆಯಲ್ಲಿದ್ದ ನರ್ಸರಿ ಶಾಲೆ ಕಟ್ಟಡವೊಂದು ಇಂದು ಮುಂಜಾನೆ ಕುಸಿದುಬಿದ್ದಿದ್ದು ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. 

ಬೆಂಗಳೂರು (ನ.27): ಶಿವಾಜಿನಗರದಲ್ಲಿನ ಶಿಥಿಲಾವಸ್ಥೆಯಲ್ಲಿದ್ದ ನರ್ಸರಿ ಶಾಲೆ ಕಟ್ಟಡವೊಂದು ಇಂದು ಮುಂಜಾನೆ ಕುಸಿದುಬಿದ್ದಿದ್ದು ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಶಿವಾಜಿನಗರದ ಕುಕ್ಸ್ ರೋಡ್ ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ನಸುಕಿನ ಜಾವ 2ರ ವೇಳೆ ಹಠಾತ್ ಕುಸಿದು ಬಿದ್ದಿದ್ದು, ಕಟ್ಟಡದ ಅವಶೇಷದಡಿ ವಾಹನಗಳು ಸಿಲುಕಿ ಸಂಪೂರ್ಣವಾಗಿ ಜಖಂ ಆಗಿವೆ. ಅದೃಷ್ಟವಶಾತ್ ಶಾಲೆಯಲ್ಲಿ ಮಕ್ಕಳು ಇಲ್ಲದ ವೇಳೆ ಕಟ್ಟಡ ಬಿದ್ದಿದ್ದು ಭಾರೀ ಅನಾಹುತ ತಪ್ಪಿದೆ. ನರ್ಸರಿ ಶಾಲೆಯಲ್ಲಿ ಸುಮಾರು 70ರಿಂದ 80 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. 

Add Asianetnews Kannada as a Preferred SourcegooglePreferred

ಅಷ್ಟಕ್ಕೂ ಈ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದರೂ ಸಹ ಇಲ್ಲೇ ಶಾಲೆ ನಡೆಸಲಾಗುತ್ತಿತ್ತು, ಒಂದು ವೇಳೆ ಶಾಲಾ ಸಮಯದಲ್ಲಿ ಕುಟ್ಟಡ ಕುಸಿದು ಬಿದ್ದು ದೊಡ್ಡ ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದು ಬಿಬಿಎಂಪಿಗೆ ಸೇರಿದ ನರ್ಸರಿ ಇಂಗ್ಲಿಷ್ ಸ್ಕೂಲ್ ಆಗಿದ್ದು,ಅದರಲ್ಲಿ 90 ಮಕ್ಕಳು ಪ್ರವೇಶ ಪಡೆದುಕೊಂಡಿದ್ದರು. ಅದರೆ, 90 ಮಕ್ಕಳ ಪೈಕಿ 75 ಮಕ್ಕಳು ಮಾತ್ರ ಪ್ರತಿದಿನ ಶಾಲೆಗೆ ಬರುತ್ತಿದ್ದರು. ದೇವರ ದಯೆಯಿಂದ ಶಾಲಾ ಸಮಯದಲ್ಲಿ ಕಟ್ಟಡ ಬಿದ್ದಿಲ್ಲ. ಇದೀಗ ಸ್ಥಳಕ್ಕೆ ಜೆಸಿಬಿ ಆಗಮಿಸಿದ್ದು, ಕಟ್ಟಡದ ಅವಶೇಷಗಳ ತೆರವು ಕಾರ್ಯ ನಡೆದಿದೆ. ಇನ್ನು ವಾಹನಗಳಿಗೆ ಹಾನಿಯಾಗಿದ್ದರಿಂದ ಮಾಲೀಕರು ಕಂಗಾಲಾಗಿದ್ದಾರೆ.

ಕಾಂಗ್ರೆಸ್‌ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ: ಮಾಜಿ ಸಚಿವ ಶ್ರೀರಾಮುಲು

ಜಾಗ ಇದೆ ಅಂತಾ ಇಲ್ಲಿ ಆಟೋ ನಿಲ್ಲಿಸುತ್ತಿದ್ದೆ. ರಾತ್ರಿ 2 ಗಂಟೆಗೆ ಏಕಾಏಕಿ ಕಟ್ಟಡ ಕುಸಿದಿದೆ. ನಮ್ಮ ಕುಟುಂಬಕ್ಕೆ ಆಟೋನೆ ಆಧಾರವಾಗಿತ್ತು. ಈಗ ನಷ್ಟ ಯಾರು ಕಟ್ಟಿಕೊಡ್ತಾರೆ. ಆಟೋ ನಷ್ಟ ಭರಿಸಿ ಅಂತಾ ಜಖಂಗೊಂಡ ಆಟೋ ಮಾಲೀಕ ಅನಿಶ್ ಅಳಲನ್ನು ತೊಡಿಕೊಂಡಿದ್ದಾನೆ. ಘಟನೆ ಬಗ್ಗೆ ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ ಶಿವಾಜಿನಗರದ ಕ್ಷೇತ್ರದಲ್ಲಿ ಹಳೇ ಶಾಲಾ ಕಟ್ಟಡಗಳನ್ನು ಗುರುತಿಸಿದ್ದೇವೆ. ಈಗ ಕುಸಿದಿರುವ ಶಾಲಾ ಕಟ್ಟಡ ಸೇರಿ ೩ ಶಾಲೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕೂಡ ಕರೆದಿದ್ದೇವೆ. ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತೇವೆ ಎಂದರು.