ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ, ಮದುವೆಗೆ ನಿರಾಕರಿಸಿದರೆಂಬ ಕಾರಣಕ್ಕೆ ಯುವಕನೋರ್ವ ಯುವತಿ ಮತ್ತು ಆಕೆಯ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹತ್ತು ಜನರೊಂದಿಗೆ ಮನೆಗೆ ನುಗ್ಗಿದ ಆರೋಪಿಯು, ಖಾರದ ಪುಡಿ ಎರಚಿ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ.

ಚಿಕ್ಕೋಡಿ: ಮಗಳನ್ನು ಮದುವೆ ಮಾಡಿ ಕೊಡುವುದಕ್ಕೆ ಆಕೆಯ ಮನೆಯವರು ನಿರಾಕರಿಸಿದರು ಎಂದು ಕುಪಿತಗೊಂಡ ಭಗ್ನ ಪ್ರೇಮಿಯೊಬ್ಬ ಆ ಯುವತಿ ಹಾಗೂ ಅವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ. ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾಶ್ರೀ ಕಿಲಾರಿ ಎಂಬ ಯುವತಿ ಹಾಗೂ ಮನೆಯವರ ಮೇಲೆ ಆರೋಪಿ ಜನರನ್ನು ಕರೆದುಕೊಂಡು ಬಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಬೀರಪ್ಪ ಗಣೇಶಗೋಳ ಎಂಬಾತನೇ ಹೀಗೆ ಹಲ್ಲೆ ನಡೆಸಿದ ದುಷ್ಕರ್ಮಿ.

ಈ ಬೀರಪ್ಪ ಗಣೇಶಗೋಳ ಕಳೆದೆರಡು ವರ್ಷಗಳಿಂದ ಯುವತಿ ವಿದ್ಯಾಶ್ರೀ ಕಿಲಾರಿ ಎಂಬಾಕೆಯನ್ನು ಮದುವೆ ಮಾಡಿ ಕೊಡುವಂತೆ ಆಕೆಯ ಪೋಷಕರ ಬಳಿ ಕೇಳಿದ್ದ. ಆದರೆ ಬೀರಪ್ಪನಿಗೆ ಮಗಳನ್ನು ಕೊಡುವುದಕ್ಕೆ ವಿದ್ಯಾಶ್ರೀ ಮನೆಯವರು ಹಾಗೂ ಆಕೆಯ ತಂದೆ ಮಹಾದೇವ ಕಿಲಾರಿ ಹಿಂದೇಟು ಹಾಕಿದ್ದರು. ಇದರಿಂದ ಸಿಟ್ಟು ಹಾಗೂ ಆಕ್ರೋಶಕ್ಕೆ ಒಳಗಾದ ಬೀರಪ್ಪ ಗಣೇಶಗೋಳ, ವಿದ್ಯಾಶ್ರೀ ಹಾಗೂ ಆಕೆಯ ಮನೆಯವರ ಮೇಲೆ ಹಲ್ಲೆ ಮಾಡಿದ್ದಾನೆ.

ಇದನ್ನೂ ಓದಿ: ಇವಿ ಕಾರು ಚಾರ್ಜಿಂಗ್ ವೇಳೆ ದುರಂತ: ಬೆಂಕಿ ಮನೆಗೆ ಹಬ್ಬಿ 8 ಜನ ಸಜೀವ ದಹನ

ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೆ ಯುವತಿ ವಿದ್ಯಾಶ್ರೀಯ ತಲೆಯನ್ನೇ ಒಡೆದಿದ್ದಾನೆ. ಹತ್ತು ಜನರೊಂದಿಗೆ ಆಗಮಿಸಿದ ಆರೋಪಿ ಬೀರಪ್ಪ, ನಿನ್ನೆ ರಾತ್ರಿ ಏಕಾಏಕಿ ಮನೆಗೆ ನುಗ್ಗಿ, ಮನೆಯವರ ಕಣ್ಣಿಗೆ ಖಾರದ ಪುಡಿ ಎರಚಿ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ಗಾಯಾಳುಗಳನ್ನು ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿ ಬೀರಪ್ಪ ಗಣೇಶಗೋಳ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಒಡೆದ ತುಂಗಭದ್ರಾ ಎಡದಂಡೆ ಕಾಲುವೆ: ಅಪಾರ ಪ್ರಮಾಣ ನೀರು ಪೋಲು: ರೈತರ ಜಮೀನಿಗೆ ನುಗ್ಗಿದ ನೀರು