ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಮೇಲೆ ಗೂಗಲ್ ಉದ್ಯೋಗಿ ಸಿಗರೇಟ್ ಸೇದಿ, ಪ್ರಶ್ನಿಸಿದ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಮಾನ ನಿಲ್ದಾಣದ ಭದ್ರತಾ ವೈಫಲ್ಯದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಬೆಂಗಳೂರು (ಮಾ.30): ತಾಂತ್ರಿಕ ಜಗತ್ತಿನ ದೈತ್ಯ ಸಂಸ್ಥೆ 'ಗೂಗಲ್'ನಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರು ಸಾಕ್ಷಾತ್ ವಿಮಾನ ನಿಲ್ದಾಣದ ರನ್‌ವೇ ಮೇಲೆಯೇ ಸಿಗರೇಟ್ ಸೇದಿ ದರ್ಪ ಮೆರೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ವಿಮಾನ ನಿಲ್ದಾಣದಂತಹ ಅತೀ ಸೂಕ್ಷ್ಮ ಪ್ರದೇಶದಲ್ಲಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ ಈ ಟೆಕ್ಕಿಯ ವರ್ತನೆಗೆ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

Add Asianetnews Kannada as a Preferred SourcegooglePreferred

ಏನಿದು ಘಟನೆ?

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟಾರ್ಮ್ಯಾಕ್ (ವಿಮಾನಗಳು ನಿಲ್ಲುವ ಜಾಗ) ಮೇಲೆ ಈ ಘಟನೆ ಸಂಭವಿಸಿದೆ. ಉತ್ಕರ್ಷ್ ಗೌತಮ್ ಎಂಬ ಗೂಗಲ್ ಟೆಕ್ಕಿ, ವಿಮಾನ ಏರುವ ಮುನ್ನ ರನ್‌ವೇ ಹತ್ತಿರವೇ ಸಿಗರೇಟ್ ಹಚ್ಚಿಕೊಂಡಿದ್ದಾರೆ. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಗ್ರೌಂಡ್ ಸಿಬ್ಬಂದಿ ಕೂಡಲೇ ಅಲ್ಲಿಗೆ ಧಾವಿಸಿ, "ಸರ್, ಇಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ, ದಯವಿಟ್ಟು ಸಿಗರೇಟ್ ಆರಿಸಿ" ಎಂದು ಮನವಿ ಮಾಡಿದ್ದಾರೆ.

ಆದರೆ, ಕಾನೂನು ತಿಳಿದಿರಬೇಕಾದ ಈ ಸುಶಿಕ್ಷಿತ ಟೆಕ್ಕಿ ಮಾತ್ರ ಸಿಬ್ಬಂದಿಯ ಮಾತಿಗೆ ಬೆಲೆ ಕೊಡದೆ ಉದ್ಧಟತನ ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೆ, ತನ್ನನ್ನು ಪ್ರಶ್ನಿಸಿದ ಸಿಬ್ಬಂದಿಯ ಮುಖಕ್ಕೆ ಸಿಗರೇಟ್ ಹೊಗೆ ಬಿಟ್ಟು, "ಧೂಮಪಾನ ಮಾಡಬಾರದು ಎಂಬ ಕಾನೂನು ಎಲ್ಲಿದೆ? ನನಗೆ ತೋರಿಸಿ" ಎಂದು ಸವಾಲು ಹಾಕಿದ್ದಾರೆ. ಈ ಇಡೀ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿದೆ.

ವೈರಲ್ ಆದ ವಿಡಿಯೋ ಮತ್ತು ನೆಟ್ಟಿಗರ ಆಕ್ರೋಶ:

ವಾಯುಯಾನಕ್ಕೆ ಸಂಬಂಧಿಸಿದ ಸುದ್ದಿಗಳನ್ನೇ ಹಂಚಿಕೊಳ್ಳುವ @aviationnews___ ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪ್ರಕಟವಾದ ಬೆನ್ನಲ್ಲೇ ವೈರಲ್ ಆಗಿದೆ. ವಿಡಿಯೋ ನೋಡಿದ ಸಾವಿರಾರು ಜನರು ಟೆಕ್ಕಿಯ ಅತಿರೇಕದ ವರ್ತನೆಯನ್ನು ಖಂಡಿಸಿದ್ದಾರೆ. ‘ಇಷ್ಟು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಕನಿಷ್ಠ ಜ್ಞಾನವಿಲ್ಲವೇ? ವಿಮಾನ ನಿಲ್ದಾಣಗಳಲ್ಲಿ ಇಂಧನ ಇರುತ್ತದೆ, ಒಂದು ಸಣ್ಣ ಕಿಡಿ ಎಷ್ಟು ದೊಡ್ಡ ಅವಘಡಕ್ಕೆ ಕಾರಣವಾಗಬಹುದು ಎಂಬ ಅರಿವಿಲ್ಲವೇ?’ ಎಂದು ಹಲವರು ಪ್ರಶ್ನಿಸಿದ್ದಾರೆ.

View post on Instagram

ಭದ್ರತಾ ವೈಫಲ್ಯದ ಪ್ರಶ್ನೆ:

ಈ ಘಟನೆಯು ಕೇವಲ ಒಬ್ಬ ವ್ಯಕ್ತಿಯ ಉದ್ಧಟತನ ಮಾತ್ರವಲ್ಲದೆ, ವಿಮಾನ ನಿಲ್ದಾಣದ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂಬ ಚರ್ಚೆಯೂ ಶುರುವಾಗಿದೆ. ಕಟ್ಟುನಿಟ್ಟಿನ ತಪಾಸಣೆ ಇರುವ ಏರ್‌ಪೋರ್ಟ್‌ನಲ್ಲಿ ರನ್‌ವೇ ವರೆಗೆ ಲೈಟರ್ ಮತ್ತು ಸಿಗರೇಟ್ ಕೊಂಡೊಯ್ಯಲು ಈತನಿಗೆ ಹೇಗೆ ಸಾಧ್ಯವಾಯಿತು? ಭದ್ರತಾ ಸಿಬ್ಬಂದಿ ತಪಾಸಣೆಯಲ್ಲಿ ಇದನ್ನು ಹೇಗೆ ಗಮನಿಸಲಿಲ್ಲ? ಎಂಬ ಪ್ರಶ್ನೆಗಳು ಎದ್ದಿವೆ.

ಬ್ಯಾನ್ ಮಾಡಲು ಆಗ್ರಹ:

ಈ ಘಟನೆಯ ನಂತರ ಉತ್ಕರ್ಷ್ ಗೌತಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಪ್ರಯಾಣಿಕರನ್ನು 'ನೋ ಫ್ಲೈ ಲಿಸ್ಟ್'ಗೆ (ವಿಮಾನ ಪ್ರಯಾಣ ನಿಷೇಧಿತ ಪಟ್ಟಿ) ಸೇರಿಸಬೇಕು ಮತ್ತು ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂಬ ಆಗ್ರಹ ಕೇಳಿಬಂದಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಗೂಗಲ್ ಸಂಸ್ಥೆಯು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.