ಬೆಂಗ್ಳೂರು ಸಬ್ ಅರ್ಬನ್ ರೈಲಿಗೆ ಗತಿ ಶಕ್ತಿ ವೇಗದ ರೈಲು: ಕೇಂದ್ರ ಸಚಿವೆ ದರ್ಶನಾ
ರಾಜ್ಯದಲ್ಲಿ ಮೊದಲ ವಂದೇ ಭಾರತ್ ಹೈಸ್ಪೀಡ್ ಎಕ್ಸ್ಪ್ರೆಸ್ ರೈಲು 2023 ಮಾಚ್ರ್ ವೇಳೆ ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸಲಿದೆ.
ಬೆಂಗಳೂರು(ಸೆ.24): ಕೇಂದ್ರ ಸರ್ಕಾರದ ‘ಗತಿಶಕ್ತಿ ಯೋಜನೆ’ ಬಳಸಿಕೊಂಡು ಸಬ್ ಅರ್ಬನ್ ರೈಲು ಸೇರಿದಂತೆ ರಾಜ್ಯದ ಎಲ್ಲ ರೈಲ್ವೆ ಯೋಜನೆಗಳ ವೇಗ ಹೆಚ್ಚಿಸಲು ಬದ್ಧ ಎಂದು ಕೇಂದ್ರ ಜವಳಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವೆ ದರ್ಶನಾ ಜರ್ದೋಶ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಿ ಕಾಮಗಾರಿಗಳ ಪ್ರಗತಿ, ಹೊಸ ಯೋಜನೆಗಳ ಮಾಹಿತಿ ಪಡೆದರು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೇ ಕಾಮಗಾರಿಗಳ ತೊಡಕು ನಿವಾರಿಸಿ ವೇಗ ಹೆಚ್ಚಿಸಲು ‘ಗತಿಶಕ್ತಿ ಯೋಜನೆ’ ಅನುಕೂಲಕರವಾಗಿದೆ. ನೈಋುತ್ಯ ರೈಲ್ವೆ ಎಲ್ಲ ವಿಭಾಗಗಳಲ್ಲಿಯೂ ಗತಿಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಇದರ ಮೂಲಕ ಉಪನಗರದ ರೈಲ್ವೆ ಸೇರಿದಂತೆ ರಾಜ್ಯದ್ಯಂತ ಕಾಮಗಾರಿ ವೇಗ ಹೆಚ್ಚಿಸಲಾಗುತ್ತದೆ. ಸಭೆಯಲ್ಲಿ ಆಯಾ ಕ್ಷೇತ್ರಗಳ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಇರುವ ಸವಾಲುಗಳನ್ನು ಸಂಸದರು ವಿವರಿಸಿದ್ದು, ಅವುಗಳನ್ನು ಸಮನ್ವಯತೆಯಿಂದ ನಿವಾರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ವಂದೇ ಭಾರತ್ ರೈಲು, ಒಂದು ನಿಲ್ದಾಣ ಒಂದು ಉತ್ಪನ್ನ, ಕವಚದಂತಹ ಹೊಸ ಕಾರ್ಯಕ್ರಮದಿಂದ ರೈಲ್ವೆ ಇಲಾಖೆಗೆ ಜನರಿಗೆ ಮತ್ತಷ್ಟುಅನುಕೂಲ ಮಾಡಿಕೊಟ್ಟಿದೆ. ರಾಜ್ಯ ಸರ್ಕಾರ ಮತ್ತು ರೈಲ್ವೇ ನಡುವಿನ ಸಾಮರಸ್ಯವನ್ನು ಹೆಚ್ಚಿಸುವ ಮೂಲಕ ಯೋಜನೆ ಜಾರಿಗಿರುವ ಅಡೆತಡೆಗಳನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದರು.
ಬೆಂಗಳೂರಿಗರಿಗೆ ಇಲ್ಲಿದೆ ಗುಡ್ ನ್ಯೂಸ್ : ಶೀಘ್ರ ಬರಲಿದೆ ಉಪನಗರ ರೈಲು
ರಾಜ್ಯ ಸಂಸದರೊಂದಿಗೆ ಮೊದಲ ಸಭೆ
ಸಭೆಯಲ್ಲಿ ಸಂಸದರಾದ ಬಿ.ಎನ್.ಬಚ್ಚೇಗೌಡ, ಮುನಿಸ್ವಾಮಿ, ಸುಮಲತಾ ಅಂಬರೀಶ್, ಜಿ.ಎಸ್.ಬಸವರಾಜ್, ಲಹರ್ ಸಿಂಗ್ ಸಿರೋಯ, ರಾಜಾ ಅಮರೇಶ್ವರ ನಾಯ್ಕ್, ಶಿವಕುಮಾರ್ ಉದಾಸಿ, ವೈ.ದೇವೇಂದ್ರಪ್ಪ, ಡಾ
ಉಮೇಶ್ ಜಿ.ಜಾಧವ್, ಅಣ್ಣಾಸಾಹೇಬ ಶಂಕರ ಜೊಲ್ಲೆ, ಕರಡಿ ಸಂಗಣ್ಣ ಹಾಗೂ ಪ್ರತಾತ್ ಸಿಂಹ ಭಾಗವಹಿಸಿದ್ದರು. ಸಭೆಯಲ್ಲಿ ಸಂಸದರು ತಮ್ಮ ಕ್ಷೇತ್ರಗಳಲ್ಲಿ ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ ಬೇಡಿಕೆಗಳ ಲಿಖಿತ ಮನವಿಯನ್ನು ಸಲ್ಲಿಸಿದರು.
ಮಾರ್ಚ್ನಲ್ಲಿ ಮೊದಲ ವಂದೇ ಭಾರತ್ ರೈಲು
ರಾಜ್ಯದಲ್ಲಿ ಮೊದಲ ವಂದೇ ಭಾರತ್ ಹೈಸ್ಪೀಡ್ ಎಕ್ಸ್ಪ್ರೆಸ್ ರೈಲು 2023 ಮಾಚ್ರ್ ವೇಳೆ ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು. ಈ ಮಾರ್ಗದ ಹಳಿಗಳ ಡಬ್ಲಿಂಗ್ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಹಾವೇರಿ-ದಕ್ಷಿಣ ಹುಬ್ಬಳ್ಳಿ ನಿಲ್ದಾಣಗಳ ನಡುವಿನ ಮಾರ್ಗದಲ್ಲಿ 45 ಕಿ.ಮೀ. ಹಳಿ ಡಬ್ಲಿಂಗ್ ಕಾಮಗಾರಿ ಬಾಕಿ ಇದೆ ಎಂದು ಸಚಿವರಿಗೆ ತಿಳಿಸಿದರು.