Asianet Suvarna News Asianet Suvarna News

ಸದ್ಯದಲ್ಲೇ ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರ ಸ್ಥಾಪನೆ : ಮಾಜಿ ಶಾಸಕರ ಭವಿಷ್ಯ

ಆರು ತಿಂಗಳಿನಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಶಾಸಕ ಮಸಾಲಾ ಜಯರಾಂ ಭವಿಷ್ಯ ನುಡಿದಿದ್ದಾರೆ.

Formation of BJP-JDS coalition government soon: Future of former MLAs snr
Author
First Published Jun 22, 2024, 12:24 PM IST | Last Updated Jun 22, 2024, 12:24 PM IST

 ತುರುವೇಕೆರೆ :  ಆರು ತಿಂಗಳಿನಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಶಾಸಕ ಮಸಾಲಾ ಜಯರಾಂ ಭವಿಷ್ಯ ನುಡಿದಿದ್ದಾರೆ.

ಪಟ್ಟಣದಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆ ವಿರೋಧಿಸಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಏರಬೇಕೆಂಬ ಉದ್ದೇಶದಿಂದ ಗ್ಯಾರಂಟಿ ನೀಡಿ, ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದೆ. ಈಗ ಅಭಿವೃದ್ಧಿಗೂ ಹಣ ಇಲ್ಲದಂತಾಗಿದೆ. ಗ್ಯಾರಂಟಿ ಯೋಜನೆಗಳಿಗೂ ಹಣ ನೀಡಲಾರದಷ್ಟು ದರಿದ್ರ ಈ ಸರ್ಕಾರಕ್ಕೆ ಬಂದಿದೆ. ಇದರಿಂದ ನಿರಾಸೆಗೊಂಡಿರುವ ಕಾಂಗ್ರೆಸ್ ಹಲವಾರು ಶಾಸಕರುಗಳು ಈ ಸರ್ಕಾರದ ಕಾರ್ಯವೈಖರಿಗೆ ಬೇಸತ್ತು ರಾಜೀನಾಮೆ ಕೊಡುವ ಮಟ್ಟಕ್ಕೆ ಇಳಿದಿದ್ದಾರೆ. ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ಎಂದರು.

ಕಾಂಗ್ರೆಸ್ ಶಾಸಕರೇ ಈ ಸರ್ಕಾರದ ವಿರುದ್ಧ ಶೀಘ್ರದಲ್ಲೇ ತಿರುಗಿ ಬೀಳಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ರೈತರ ನೆರವಿಗೆ ಬರಲಿದೆ. ಅಧಿಕಾರದ ಲಾಲಸೆಗಾಗಿ ಇಲ್ಲದ ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್ ಈಗ ಹಣ ಹೊಂದಿಸಲು ಇಲ್ಲದ ಕಸರತ್ತು ಮಾಡುತ್ತಿದೆ. ಸರ್ಕಾರ ಬಂದ ಕೆಲವೇ ದಿನಗಳಲ್ಲಿ ಬಡವರು ಬಳಸುತ್ತಿದ್ದ ಮದ್ಯದ ದರವನ್ನು ಏರಿಕೆ ಮಾಡಲಾಯಿತು ಎಂದು ಹೇಳಿದರು.

ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿದ್ದಾರೆ. ಆದರೂ ಸಹ ಕಾಂಗ್ರೆಸ್ ಮುಖಂಡರಿಗೆ ಬುದ್ದಿ ಬಂತಂತಿಲ್ಲ. ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಭಿವೃದ್ದಿ ಮಾಡದೇ ತಮ್ಮ ಕ್ಷೇತ್ರಗಳಿಗೆ ತೆರಳಲು ಆಗುತ್ತಿಲ್ಲ ಎಂದು ಶಾಸಕರು ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳಿಗೆ ದೂರುತ್ತಿದ್ದಾರೆ. ಎಲ್ಲಾ ಶಾಸಕರೂ ಅಸಹಾಯಕರಾಗಿದ್ದಾರೆ.

ಈ ಸರ್ಕಾರವೇ ಬೇಡವೆಂದು ನಿರ್ಧರಿಸಿ ಕಾಂಗ್ರೆಸ್ ಶಾಸಕರು ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಸಂಪರ್ಕದಲ್ಲಿದ್ದಾರೆ. ಹಾಗಾಗಿ ಈ ಕಾಂಗ್ರೆಸ್ ಸರ್ಕಾರಕ್ಕೆ ಭವಿಷ್ಯವಿಲ್ಲ ಎಂದು ಮಸಾಲಾ ಜಯರಾಮ್ ಹೇಳಿದರು.

ಬಾಣಸಂದ್ರ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ಏರ್ಪಡಿಸಿ ಪ್ರತಿಭಟನೆ ಮಾಡಿದರು. ಕೆಲಕಾಲ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಮುಖಂಡರಾದ ಹಾಲೇಗೌಡ, ತಾಲೂಕು ಕಾರ್ಯದರ್ಶಿ ಪ್ರಕಾಶ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಚೂಡಾಮಣಿ, ಮುನಿಯೂರು ಎಂ.ಡಿ.ಮೂರ್ತಿ, ವಿ.ಬಿ.ಸುರೇಶ್, ನಡುವನಹಳ್ಳಿ ಚಂದ್ರಣ್ಣ, ಚಿದಾನಂದ್, ಹರಿಕಾನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಕಾಳಂಜೀಹಳ್ಳಿ ಸೋಮಶೇಖರ್, ದಬೇಘಟ್ಟದ ಮಹೇಶ್, ಗೋಣಿತುಮಕೂರು ಪುಟ್ಟೇಗೌಡ, ಜೆಡಿಎಸ್ ನ ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎ.ಬಿ.ಜಗದೀಶ್, ಮಂಗೀಕುಪ್ಪೆ ಬಸವರಾಜು, ಬೂವನಹಳ್ಳಿ ದೇವರಾಜ್, ಎಚ್.ಆರ್. ರಾಮೇಗೌಡ, ಲೀಲಾವತಿ ಗಿಡ್ಡಯ್ಯ, ಅರಿಶಿನದ ಹಳ್ಳಿ ನರಸಿಂಹಮೂರ್ತಿ, ಪರಮೇಶ್, ಹುಚ್ಚೇಗೌಡ, ಎನ್.ಆರ್.ಸುರೇಶ್, ಮಧು ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios