ಚಾಲಕ ನಿರ್ವಾಹಕರ ಆತ್ಮಹತ್ಯೆ ಕಂಟ್ರೋಲ್ಗೆ ಮ್ಯಾನೇಜರ್ ಮೇಲೆ ತನಿಖಾಸ್ತ್ರ!
ಬಿಎಂಟಿಸಿಯಲ್ಲಿ ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರೋ ಆತ್ಮಹತ್ಯೆಗಳ ಕಂಟ್ರೋಲ್ಗೆ ಡಿಪೋ ಮ್ಯಾನೇಜರ್ ಮೇಲೆ ತನಿಖಾಸ್ತ್ರ ಪ್ರಯೋಗಿಸಲು ನಿಗಮ ಮುಂದಾಗಿದೆ.
ವರದಿ: ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಸೆ.10); ಬಿಎಂಟಿಸಿ ಆಡಳಿತ ವರ್ಗ ನೌಕರರ ಸ್ನೇಹಿ ಅಂತ ಕೊಚ್ಚಿಕೊಳ್ತದೆ .ಆದರೆ ಅದೇ ನೌಕರರ ಮೇಲೆ ಪದೇ ಪದೇ ದೌರ್ಜನ್ಯ ನಡೆಸುತ್ತಿರೋ ಆರೋಪ ಮಾತ್ರವ ಕಡಿಮೆಯಾಗ್ತಿಲ್ಲ. ಇತ್ತೀಚೆಗಂತೂ ಮೇಲಾಧಿಕಾರಿಗಳ ಕಿರುಕುಳದಿಂದ ಡಿಪೋಗಳಲ್ಲಿ ಚಾಲಕರು ,ನಿರ್ವಾಹಕರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಈ ಬಗ್ಗೆ ಅಲರ್ಟ್ ಆಗಿರೋ ಆತ್ಮಹತ್ಯೆಗಳ ಕಂಟ್ರೋಲ್ಗೆ ಡಿಪೋ ಮ್ಯಾನೇಜರ್ ಮೇಲೆ ತನಿಖಾಸ್ತ್ರ ಪ್ರಯೋಗಿಸಲು ನಿಗಮ ಮುಂದಾಗಿದೆ. ಬೆಂಗಳೂರಿಗೂ ಬಿಎಂಟಿಸಿ ಬಸ್ಗೂ ಅವಿನಾಭಾವ ಸಂಬಂಧ. ಒಂದೇ ಒಂದು ದಿನ ಬಿಎಂಟಿಸಿ ಬಸ್ ಸ್ತಬ್ಥವಾದ್ರೆ ಜನಜೀವನವೇ ಅಸ್ತವ್ಯಸ್ತವಾಗ್ತದೆ. ಆದರೆ ಬೆಂಗಳೂರಿನ ಭಯಂಕರ ಟ್ರಾಫಿಕ್ಕಿನಲ್ಲಿ ದಿನಂಪ್ರತಿ ಬಸ್ ಓಡಿಸುವ ಚಾಲಕರ, ನಿರ್ವಾಹಕರ ಪಾಡು ಮಾತ್ರ ಹರೋಹರ. ಈ ನಡುವೆ ಡಿಪೋಗಳಲ್ಲಿ ಸಿಬ್ಬಂದಿಗೆ ಇನ್ನಿಲ್ಲದ ಕಿರುಕುಳ. ಡಿಪೋ ಮ್ಯಾನೇಜರ್ ಗಳಿಂದ ಪದೇ ಪದೇ ಕಿರುಕುಳ ಆಗ್ತಿದೆ ನಿಯಂತ್ರಿಸಿ ಅಂತ ಆಡಳಿತ ವರ್ಗಕ್ಕೆ ಸಾಕಷ್ಟು ದೂರುಗಳು ನೌಕರರು ನೀಡಿದ್ರೂ ನಿಗಮ ಮಾತ್ರ ತಲೆಕೆಡಿಸಿಕೊಂಡಿರಲ್ಲ. ಆದ್ರೆ ಕಳೆದ ಕೆಲ ದಿನಗಳಿಂದ ಡಿಪೋಗಳಲ್ಲಿ ಮ್ಯಾನೇಜರ್ಗಳ ಕಿರುಕುಳ ಆರೋಪದಲ್ಲಿ ಕೆಲ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಈಗ ಅಲರ್ಟ್ ಆಗಿರೋ ನಿಗಮ ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಡಿಪೋ 20,21,27 ರಲ್ಲಿ ಸಿಬ್ಬಂದಿಗಳು ಡಿಪೋ ಮ್ಯಾನೇಜರ್ ಕಿರುಕುಳ ಅಂತ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ರು. ಈ ಹಿನ್ನೆಲೆ ಅಲರ್ಟ್ ಆಗಿರೋ ನಿಗಮದ ಅಧ್ಯಕ್ಷ ನಂದೀಶ್ ರೆಡ್ಡಿ ಹಾಗೂ ಎಂಡಿ ಸತ್ಯವತಿ ಡಿಪೋ ಮ್ಯಾನೇಜರ್ ಗಳ ವಿರುದ್ಧ ತನಿಖೆ ಮಾಡಲು ನಿರ್ಧಾರಿದ್ದಾರೆ. ಕಳೆದ ಹಲವು ವರ್ಷದಿಂದ ಈ ಆರೋಪ ಕೇಳಿ ಬಂದಿತ್ತಾದ್ರೂ ಯಾರೊಬ್ಬ ಅಧಿಕಾರಿಯೂ ಗೋಜಿಗೆ ಹೋಗಿರಲಿಲ್ಲ.
ಬಿಎಂಟಿಸಿ ಚಾಲಕನ ಮೃತದೇಹ ಡಿಪೋ ಮುಂದಿಟ್ಟು ಪ್ರತಿಭಟನೆ
ಇತ್ತೀಚೆಗೆ ಸರಣಿ ಆತ್ಮಹತ್ಯೆ ಬೆನ್ನಲ್ಲಿ ನಿಗಮ ಕೂಡ ಎಚ್ಚೆತ್ತುಕೊಂಡಿದೆ. ನಗರದಲ್ಲಿ 48 ಬಿಎಂಟಿಸಿ ಡಿಪೋಗಳಿದ್ದು ಅವುಗಳ ಪೈಕಿ, ಮೊದಲ ಹಂತದಲ್ಲಿ 14 ಡಿಪೋ ಮ್ಯಾನೇಜರ್ ಗಳ ಮೇಲೆ ತನಿಖೆ ನಡೆಸಲಿದ್ದಾರೆ. ಉಳಿದ ಡಿಪೋ ಮ್ಯಾನೇಜರ್ ಮೇಲೆ ಹಂತ ಹಂತವಾಗಿ ತನಿಖೆ ನಡೆಸಲು ನಿರ್ಧಾರಿಸಲಾಗಿದೆ. ನಿಗಮದ ಭದ್ರತಾ ಹಾಗೂ ಜಾಗೃತಾ ದಳ ನಿರ್ದೇಶಕಿ ನೇತೃತ್ವದಲ್ಲಿ ತನಿಖೆ ನಡೆಸಿ ಸಿಬ್ಬಂದಿ ಆತ್ಮಹತ್ಯೆಗೆ ನಿಜವಾದ ಸತ್ಯಾಸತ್ಯತೆ ತಿಳಿಯಲು ಬಿಎಂಟಿಸಿ ನಿಗಮ ಮುಂದಾಗಿದೆ.
ಅಧಿಕಾರಿಗಳ ಕಿರುಕುಳಕ್ಕೆ ಡಿಪೋದಲ್ಲಿಯೇ ಬಿಎಂಟಿಸಿ ಚಾಲಕ ಆತ್ಮಹತ್ಯೆ!
ರೂಟ್ ಅಲಾಟ್ ಮಾಡುವ ವಿಚಾರದಲ್ಲಿ ಡಿಪೋ ಮ್ಯಾನೆಜರ್ ಗಳು ಕಿರುಕುಳ ನೀಡೋದು, ಡ್ಯೂಟಿಗೆ ಬಂದ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಸೇರಿದಂತೆ ಸಿಬ್ಬಂದಿಗಳು ಹಲವು ಆರೋಪಗಳನ್ನು ಮಾಡಿದ್ದಾರೆ. ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ಅರಿಯಲು ನಿಗಮ ತನಿಖಾಸ್ತ್ರದ ಪ್ಲಾನ್ ರೂಪಿಸಿದೆ. ಕೊನೆಗೂ ನಿಗಮ ಎಚ್ಚೆತ್ತುಕೊಂಡು ಸಿಬ್ಬಂದಿಗಳ ಆತ್ಮಹತ್ಯೆಗೆ ಬ್ರೇಕ್ ಹಾಕಿ ಶಾಶ್ವತ ಪರಿಹಾರ ಕಂಡು ಹಿಡಿಯಲು ಮುಂದಾಗಿದೆ.