ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ  ಜೈವಿಕ ಉದ್ಯಾನವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಲವು ಸಸ್ಯಗಳು ಬೆಂಕಿಗೆ ಆಹುತಿಯಾಗಿವೆ. 

 ತುಮಕೂರು (ಜ.29): ಇಲ್ಲಿಗೆ ಸಮೀಪದ ಬಸ್ತಿ ಬೆಟ್ಟದ ಬಳಿಯ ಪಂಡಿತನಹಳ್ಳಿಯಲ್ಲಿ ಇದ್ದ ಶಿವಕುಮಾರ ಸ್ವಾಮೀಜಿ ಜೈವಿಕ ವನಕ್ಕೆ ಬೆಂಕಿ ಬಿದ್ದಿದೆ.

Add Asianetnews Kannada as a Preferred SourcegooglePreferred

8.16 ಎಕರೆ ಜಾಗದಲ್ಲಿ ಇರುವ ಈ ಜೈವಿಕ ವನದಲ್ಲಿ ಹೊನ್ನೆ, ಮತ್ತಿ, ಬಾದಾಮಿ, ಜಮ್‌ ನೇರಳಿ, ಬೀಟೆ, ಆಲ, ತೇಗ, ಹಲಸು, ಶ್ರೀಗಂಧ, ರಕ್ತ ಚಂದನ, ಸಂಪಿಗೆ, ಹೆಬ್ಬೇವು ಇನ್ನು ಅನೇಕ ಕಾಡು ಜಾತಿಯ ಮರಗಳನ್ನು ತುಮಕೂರಿನ ಎಸ್‌ಐಟಿ ಇಕೋ ಕ್ಲಬ್‌ನ ಸದಸ್ಯರು ನೆಟ್ಟಿದ್ದರು.

ಕೊರೋನಾ ವೇಳೆ ಲಾಕ್‌ಡೌನ್‌ ಆಗಿದ್ದ ವೇಳೆ ತುಮಕೂರಿನ ಎಸ್‌ಐಟಿ ಇಕೋ ಕ್ಲಬ್‌ನ ಸದಸ್ಯರು ಹಾಗೂ ಕಾಲೇಜಿನ ನೌಕರರು 4 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಅರಣ್ಯ ಇಲಾಖೆಯಿಂದ ಸಸಿ ಪಡೆದು ನೆಟ್ಟಿದ್ದರು.

ಆನೆಗೆ ಬೆಂಕಿ ಇಟ್ಟ ಕಿರಾತಕರು, ನರಳಿ ಪ್ರಾಣಬಿಟ್ಟ ಆನೆ ಬಿಗಿದಪ್ಪಿ ಕಣ್ಣೀರಿಟ್ಟ ಅರಣ್ಯ ಸಿಬ್ಬಂದಿ! .

ಪಂಡಿತನಹಳ್ಳಿಯಲ್ಲಿ ಬಳಿ ಸರ್ವೆ ನಂಬರ್‌ 19 ರಲ್ಲಿ ಗೋಮಾಳ ಜಾಗವಿದ್ದು ಅಲ್ಲಿ ಕೈಗಾರಿಕಾ ತ್ಯಾಜ್ಯಗಳನ್ನು ಸುಡುತ್ತಿದ್ದರು. ಈ ಸಂಬಂಧ ಜೈವಿಕ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶಿಸರ ಅವರು ಕೂಡ ಜೈವಿಕ ವನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೈಗಾರಿಕಾ ತ್ಯಾಜ್ಯ ಸುಡದಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದ್ದರು.

ಶಿವಕುಮಾರಶ್ರೀ ಸ್ಮರಣೆ ಇನ್ನು ದಾಸೋಹ ದಿನ: ಸಿಎಂ ಬಿಎಸ್‌ವೈ ...

ಪಂಡಿತನಹಳ್ಳಿ ಸುತ್ತಮುತ್ತ ಕೈಗಾರಿಕಾ ತ್ಯಾಜ್ಯ ಸುಡಬಾರದೆಂದು ಅನಂತ ಹೆಗಡೆ ಆಶಿಸರ ಅವರಿಗೆ ಮನವಿ ಮಾಡಲಾಗಿತ್ತು. ಆದರೆ ಗುರುವಾರ ರಾತ್ರಿ ಏಕಾಏಕಿ ಬೆಂಕಿ ಬಿದ್ದಿದ್ದು ಕೊರೋನಾ ಸಂದರ್ಭದಲ್ಲಿ ಬೆಳೆಸಿದ್ದ ಹಲವಾರು ಜಾತಿಯ ಗಿಡ, ಮರಗಳು ಕೂಡ ಬೆಂಕಿಗೆ ಅಹುತಿಯಾಗಿದೆ.

ಬೆಂಕಿ ಆಹುತಿಗೆ ಕಾರಣವಾಗಿರುವುದು ಕೈಗಾರಿಕಾ ಘನತ್ಯಾಜ್ಯ ವಸ್ತುವಿನ ಬೆಂಕಿಯೋ ಅಥವಾ ಕಿಡಿಗೇಡಿಗಳೋ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಇಕೋ ಕ್ಲಬ್‌ನ ರುದ್ರಮೂರ್ತಿ ಆಗ್ರಹಿಸಿದ್ದಾರೆ.