Asianet Suvarna News Asianet Suvarna News

ಕಟೀಲು ದೇವಳ, ಉಡುಪಿ ಕೃಷ್ಣ ಮಠ ನಾಳೆ ತೆರೆಯುವುದಿಲ್ಲ

ಧರ್ಮಸ್ಥಳ. ಸುಬ್ರಮಣ್ಯ, ಕೊಲ್ಲೂರು ದೇಗುಲಗಳಲ್ಲಿ ದೇವಾಲು ತೆರೆಯಲು ಬಹುತೇಕ ಸಿದ್ಧತೆಗಳು ಮುಗಿದಿವೆ. ಈ ನಡುವೆ ಕೆಲವು ದೇವಾಲಯಗಳು ಬಾಗಿಲು ತೆರೆಯದಿರಲು ನಿರ್ಧರಿಸಿದೆ. ಇಲ್ಲಿದೆ ಮಾಹಿತಿ.

Few temples in mangalore and udupi continue to shutdown
Author
Bangalore, First Published Jun 7, 2020, 8:43 AM IST

ಮಂಗಳೂರು/ಉಡುಪಿ/ಬೆಳ್ತಂಗಡಿ(ಜೂ.07): ದ.ಕ. ಹಾಗೂ ಉಡುಪಿ ಜಿಲ್ಲೆಯ ಬಹುತೇಕ ದೇವಾಲಯಗಳು ಸೋಮವಾರದಿಂದ (ಜೂ.8) ಸರ್ಕಾರದ ನಿರ್ದೇಶನದನ್ವಯ ಭಕ್ತರ ಪ್ರವೇಶಕ್ಕೆ ತೆರೆದುಕೊಳ್ಳಲಿವೆ. ಆದರೆ ಮಾರ್ಗಸೂಚಿಯನ್ವಯ ಬಹಳಷ್ಟುಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗಿದ್ದು, ಇದಕ್ಕಾಗಿ ದೇವಾಲಯಗಳಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಭಕ್ತರಿಗೆ ತೀರ್ಥ ಸಿಗುವುದಿಲ್ಲ. ಗಂಧ ಪ್ರಸಾದವಷ್ಟೇ ನೀಡಲಾಗುತ್ತದೆ. ಅನ್ನಪ್ರಸಾದ ಸ್ವೀಕಾರಕ್ಕೂ ಹಲವು ನಿಯಮಗಳನ್ನು ರೂಪಿಸಲಾಗಿದೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಭೇಟಿಗೂ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ. ಭೇಟಿಗೆ ಇಚ್ಛಿಸುವವರು ಕ್ಷೇತ್ರದ ಪ್ರವಚನ ಮಂಟಪದಲ್ಲಿ ನೋಂದಾಯಿಸಿಕೊಳ್ಳಬೇಕು.

ಉಡುಪಿ: ರಾ.ಹೆ.ಮೇಲ್ಸೇತುವೆಯಲ್ಲಿ ಪೇಜಾವರ ಶ್ರೀ ಹೆಸರಿನ ಫಲಕ!

ಕುಕ್ಕೆ ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ದೇವರ ದರ್ಶನಕ್ಕಾಗಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹೊರಾಂಗಣದಲ್ಲಿ ಭಕ್ತರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪೇಂಟ್‌ನಿಂದ ಒಂದು ಮೀಟರ್‌ ಅಂತರದ ಚೌಕಟ್ಟುಗಳನ್ನೂ ರಚಿಸಲಾಗಿದೆ. ಭಕ್ತರಿಗೆ ತೀರ್ಥ ಪ್ರಸಾದಗಳನ್ನು ನೀಡುವ ವ್ಯವಸ್ಥೆಯನ್ನು ಕೈ ಬಿಡಲಾಗಿದೆ. ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಕ್ಷೇತ್ರದಲ್ಲಿ ನಡೆಯುವ ಯಾವ ಸೇವೆಗಳಿಗೂ ಅವಕಾಶ ನೀಡಲಾಗಿಲ್ಲ.ಛತ್ರ ವ್ಯವಸ್ಥೆ ಸಂಪೂರ್ಣ ನಿಷೇಧಿಸಿದೆ.

ಕುದ್ರೋಳಿ ಸ್ಯಾನಿಟೈಸ್‌: ಮಂಗಳೂರಿನ ಪ್ರಮುಖ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯವನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಿ ಭಕ್ತರ ಆಗಮನಕ್ಕೆ ಸಿದ್ಧಗೊಳಿಸಲಾಗಿದೆ. ದೇವಾಲಯದ ನಿತ್ಯದ ಅನ್ನಪ್ರಸಾದ ಸೇವೆಯನ್ನು ಕೆಲಸಮಯ ಸ್ಥಗಿತಗೊಳಿಸಲಾಗಿದೆ.

ದಕ್ಷಿಣ ಕನ್ನಡ: ಕೊರೋನಾ ಸಮಯದಲ್ಲಿ 40 ಡೆಂಘೀ ಕೇಸ್‌!

ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯ ಮುಜರಾಯಿ ಅಧೀನಕ್ಕೆ ಬರುವುದರಿಂದ ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಮುಖಂಡರು ತಿಳಿಸಿದ್ದಾರೆ. ಯಾವ ಸೇವೆ, ತೀರ್ಥ ಪ್ರಸಾದ, ಅನ್ನದಾನ, ವಸತಿ ವ್ಯವಸ್ಥೆ ಇರುವುದಿಲ್ಲ. ಭಕ್ತರ ನಡುವೆ ಅಂತರ ಕಾಯ್ದುಕೊಳ್ಳಲು ಸಿಬ್ಬಂದಿ ಇರುತ್ತಾರೆ. ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟಹಿರಿಯರು ಬಾರದಂತೆ ನೋಡಿಕೊಳ್ಳಬೇಕು.

ಕಟೀಲು ದೇವಳದಲ್ಲಿ ಇಂದು ಮಹತ್ವದ ಸಭೆ

ನಿಯಮ ಸಡಿಲಿಕೆ ಬಳಿಕ ಕಟೀಲು ದೇವಳಕ್ಕೆ ಜನ ಸಾಗರವೇ ಹರಿದು ಬರುವ ನಿರೀಕ್ಷೆಯಿದ್ದು, ಜನರನ್ನು ನಿಭಾಯಿಸುವುದು ಕಷ್ಟಸಾಧ್ಯವಾಗಲಿದೆ. ಇದರಿಂದ ಕೊರೋನಾ ನಿಯಮ ಉಲ್ಲಂಘನೆಯಾಗಲಿದ್ದು, ಆದ್ದರಿಂದ ದೇವಳದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಜೂನ್‌ 8ರಿಂದ ಅವಕಾಶ ನೀಡಲಾಗುವುದಿಲ್ಲ ಎಂದು ದೇವಳ ಆಡಳಿತ ಮಂಡಳಿ ತಿಳಿಸಿದೆ.

ಸರ್ಕಾರ ಈ ಹಿಂದೆ ಜೂ.1ರಿಂದ ದೇವಳ ತೆರೆಯಲಾಗುವುದು ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಕನಿಷ್ಠ ಐದು ಸಾವಿರ ಜನ ದೇವಳಕ್ಕೆ ಭೇಟಿ ನೀಡಿದ್ದಾರೆ. ಆದರೆ ದರ್ಶನಕ್ಕೆ ಅವಕಾಶ ನೀಡದಿದ್ದುದರಿಂದ ಗೋಪುರದಿಂದಲೇ ಹಿಂದಕ್ಕೆ ಹೋಗಿರುತ್ತಾರೆ. ಕಟೀಲಿಗೆ ಹೊರರಾಜ್ಯದ ಭಕ್ತರೂ ಬರುವುದರಿಂದ ಈ ಕುರಿತು ಯಾವ ನಿರ್ಧಾರ ಕೈಗೊಳ್ಳಬೇಕೆಂದು ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಹಾಗಾಗಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ನಿಯಮಿತ ಜನರನ್ನಷ್ಟೇ ದರ್ಶನಕ್ಕೆ ಕರೆಸಿಕೊಳ್ಳಲು ತಿರುಪತಿ ದೇವಸ್ಥಾನದಲ್ಲಿರುವಂತೆ ಆನ್‌ಲೈನ್‌ ದರ್ಶನ ಟಿಕೆಟ್‌ ಸೇವೆಯನ್ನು (ಕಟೀಲಿನಲ್ಲಿ ಉಚಿತವಾಗಿ) ಭಕ್ತರಿಗೆ ಪಡೆದುಕೊಳ್ಳುವ ವ್ಯವಸ್ಥೆಗಾಗಿ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗುತ್ತಿದ್ದು, ಸದ್ಯವೇ ದೇವಳದ ಕೈ ಸೇರಲಿದೆ. ನಂತರ ಹಂತ ಹಂತವಾಗಿ ದೇವಳವನ್ನು ತೆರೆಯುವ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಭಕ್ತರಿಗೆ ದರ್ಶನಾವಕಾಶ ಕಲ್ಪಿಸುವ ಕುರಿತು ಭಾನುವಾರ ದೇವಳದಲ್ಲಿ ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಣಯವಾಗಲಿದೆ.

ಕಾದು ನೋಡಲಿದೆ ಕೃಷ್ಣ ಮಠ

ಸರ್ಕಾರ ಜೂನ್‌ 8ರ ನಂತರ ದೇವಸ್ಥಾನಗಳನ್ನು ತೆರೆಯುವುದಕ್ಕೆ ಅವಕಾಶ ಕೊಟ್ಟಿದೆ, ಆದರೆ ಉಡುಪಿ ಕೃಷ್ಣಮಠದಲ್ಲಿ ಇನ್ನೂ ಒಂದು ತಿಂಗಳು ಕಾದು ನೋಡಲು ನಿರ್ಧರಿಸಲಾಗಿದೆ ಎಂದು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಈಗಲೇ ಭಕ್ತರಿಗೆ ದೇವಾಲಯಕ್ಕೆ ಭೇಟಿಗೆ ಅವಕಾಶ ನೀಡದರೆ ಪರವೂರುಗಳಿಂದ ಭಕ್ತರು ಬರುತ್ತಾರೆ. ಇದರಿಂದ ಭಕ್ತರ ಮತ್ತು ಕೃಷ್ಣಮಠದ ಸಿಬ್ಬಂದಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಕೃಷ್ಣಮಠದಲ್ಲಿ ಬಹಳ ಹಿಂದಿನಿಂದಲೂ ಶ್ರೀಗಳೇ ಕೃಷ್ಣನ ಪೂಜೆ ಮಾಡುವ ಸಂಪ್ರದಾಯ ಇದೆ. ಆದ್ದರಿಂದ ಕೃಷ್ಣಮಠದೊಳಗೆ ಸೋಂಕು ಹರಡಿದರೆ ಈ ಸಂಪ್ರದಾಯಕ್ಕೆ ಚ್ಯುತಿಯಾಗುವ ಸಂಭವವಿದೆ. ಆದ್ದರಿಂದ ಪರಿಸ್ಥಿತಿ ನೋಡಿಕೊಂಡು ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.

ವಿಮಾನ ನಿಲ್ದಾಣದ 6 ಸಿಬ್ಬಂದಿ ಸೇರಿ 24 ಮಂದಿಗೆ ಸೋಂಕು

ಶ್ರೀ ಕೃಷ್ಣ ಮಠದಲ್ಲಿ ಈಗಲೂ ಪ್ರತಿದಿನ 1 ಲಕ್ಷ ರು.ಗೂ ಅಧಿಕ ಖರ್ಚು ಇದೆ. ಸುಮಾರು 150 ಮಂದಿ ಸಿಬ್ಬಂದಿ ಮಠದೊಳಗೆ ಮತ್ತು ಸುಮಾರು 100 ಮಂದಿ ಹೊರಗೆ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಸಂಬಳವನ್ನು ಯಥಾವತ್ತಾಗಿ ನೀಡಲಾಗುತ್ತಿದೆ.

ಕೃಷ್ಣ ಮಠದಿಂದ ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಮತ್ತು ಬೇರೆಯವರಿಗೆ ಸೇರಿ ಸುಮಾರು 250ಕ್ಕೂ ಹೆಚ್ಚು ಮಂದಿಗೆ ನಿತ್ಯ ಊಟ ಪೂರೈಸಲಾಗುತ್ತಿದೆ. ಸಾವಿರಾರು ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ದಿಡುಪೆ, ಚಾರ್ಮಾಡಿಯಲ್ಲಿ ಧಾರಾಕಾರ ಮಳೆ

ಸೋಮವಾರದಿಂದ ಶ್ರೀ ಕ್ಷೇತ್ರದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತೇವೆ. ಅದಕ್ಕಾಗಿ ಸಂಪೂರ್ಣ ತಯಾರಿ ಮಾಡಲಾಗಿದೆ. ಈಗ 800-1000 ಮಂದಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ಭಕ್ತರ ಆಧಾರ್‌ ಕಾರ್ಡ್‌ ಮಾಹಿತಿ, ಟೆಂಪರೇಚರ್‌ ನೋಡಿ ಸ್ಯಾನಿಟೈಸರ್‌ ಹಾಕಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಸಿಬ್ಬಂದಿ ಪೇಸ್‌ ಶೀಲ್ಡ್‌, ಗ್ಲೌಸ್‌ ಹಾಕಲಿದ್ದಾರೆ. ಎಲ್ಲ ಹರಕೆ ಸೇವೆ, ನಿತ್ಯಅನ್ನದಾನ ಇರುತ್ತದೆ. ಈ ಹಿಂದೆ ಬಫೆ ಸಿಸ್ಟಂನಲ್ಲಿ ಅನ್ನದಾನ ವಾಗುತ್ತಿತ್ತು. ಈಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಕುಳಿತು ಊಟ ಮಾಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

Follow Us:
Download App:
  • android
  • ios