Chamarajanagar: ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಅಂತಾರಲ್ಲ,ಆಗಾಗಿದೆ ಈ ಭಾಗದ ರೈತರು ಹಾಗೂ ಕಾಡುಪ್ರಾಣಿಗಳ ಬದುಕು. ಈ ಜಲಾಶಯದ ನೀರು ಯಾವಾಗಲೂ ಖಾಲಿಯಾದ ನಿದರ್ಶನ ಕೂಡ ಇಲ್ಲ.
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಜು.25): ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಅಂತಾರಲ್ಲ, ಆಗಾಗಿದೆ. ಈ ಭಾಗದ ರೈತರು ಹಾಗೂ ಕಾಡುಪ್ರಾಣಿಗಳ ಬದುಕು. ಈ ಜಲಾಶಯದ ನೀರು ಯಾವಾಗಲೂ ಖಾಲಿಯಾದ ನಿದರ್ಶನ ಕೂಡ ಇಲ್ಲ. ಆದ್ರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಡವಟ್ಟಿನಿಂದ ನೀರು ಡೆಡ್ ಸ್ಟೋರೆಜ್ ಹಂತ ತಲುಪಿದೆ.ಜನರು ಹಾಗೂ ಪ್ರಾಣಿಗಳಿಗೆ ಕುಡಿಯುವ ನೀರಿಗೂ ಅಭಾವ ಎದುರಾಗಿದೆ ಅಂತಾ ಅನ್ನದಾತರು ಆಕ್ರೋಶ ಹೊರಹಾಕ್ತಿದ್ದಾರೆ.ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಹೌದು ಇದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜೀಪುರ ಸಮೀಪವಿರುವ ಉಡುತೊರೆಹಳ್ಳ ಜಲಾಶಯ.ಈ ಜಲಾಶಯ ಕಟ್ಟಿ ಎರಡು ದಶಕ ಕಳೆದರು ಕೂಡ ಬರಿದಾದ ನಿದರ್ಶನವಿಲ್ಲ. ಆದ್ರೆ ಈ ಬಾರಿ ಶಾಸಕ ಮಂಜುನಾಥ್ ಹಾಗೂ ನೀರಾವರಿ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ಈ ಭಾಗದ ರೈತರಿಗೆ ನೀರಿನ ಕೊರತೆಯುಂಟಾಗಲೂ ಕಾರಣವಾಗಿದೆ.ಈ ಜಲಾಶಯದ ಮೂಲಕ ಮಾರ್ಟಳ್ಳಿ ಭಾಗದ ಹಳ್ಳಗಳಿಗೆ ನೀರು ಹರಿಸಲಾಗಿದೆ.
ಈ ಉಡುತೊರೆಹಳ್ಳ ಜಲಾಶಯದ ಮೂಲಕ ಹರಿದ ನೀರು ಅತ್ತ ಮಾರ್ಟಳ್ಳಿ ಭಾಗದ ಜನರಿಗೂ ಕೂಡ ಸಿಕ್ಕಿಲ್ಲ,ಇತ್ತ ಅಜ್ಜೀಪುರ ಸೇರಿದಂತೆ ಸುತ್ತಮುತ್ತಲಿನ 20 ಕ್ಕೂ ಹೆಚ್ಚು ಗ್ರಾಮದ ಜನರಿಗೆ ಕೂಡ ನೀರಿನ ಅಭಾವವುಂಟಾಗಿದೆ. ಉಡುತೊರೆಹಳ್ಳ ಜಲಾಶಯ 0.678 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಅಲ್ಲದೇ ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಈ ಜಲಾಶಯ ಇರುವುದರಿಂದ ಬರೀ ಜನರಿಗಷ್ಟೇ ಅಲ್ಲದೇ ಕಾಡುಪ್ರಾಣಿಗಳಿಗೂ ಕೂಡ ಆಧಾರವಾಗಿತ್ತು. ಆದ್ರೆ ಇದೀಗಾ ವನ್ಯಜೀವಿಗಳಿಗೂ ಕೂಡ ನೀರಿನ ಅಭಾವ ಸೃಷ್ಟಿಸಿದ್ದಾರೆ. ಸ್ಥಳೀಯ ಮುಖಂಡ ನಿಶಾಂತ್ ಆರೋಪಿಸಿದ್ದಾರೆ..
ಇನ್ನೂ ಉಡುತೊರೆಹಳ್ಳ ಜಲಾಶಯದ ನೀರಿನ ಮಟ್ಟ ಇಳಿಕೆಯಾದ ಹಿನ್ನಲೆ ನೀರು ಕುಡಿಯಲು ಹೋಗಿದ್ದ ಒಂದು ಕಾಡಾನೆ ಹಾಗೂ ಕಾಡೆಮ್ಮೆ ಜಲಾಶಯದ ಹೂಳಿನಲ್ಲಿ ಸಿಲುಕಿ ಮೃತಪಟ್ಟಿದ್ದವು. ಈ ಹಿನ್ನಲೆ ಜಲಾಶಯದ ನೀರಿನ ಮಟ್ಟ ಕಡಿಮೆಯಾದ ಹಿನ್ನಲೆ ಹೂಳೆತ್ತುವ ಕೆಲಸವಾದರೂ ಮಾಡುವಂತೆ ಮನವಿ ಮಾಡಿದ್ದಾರೆ. ನಿಮ್ಮ ಕೈಲಾಗದಿದ್ರೆ ರೈತರಿಗೆ ಹೂಳೆತ್ತಲೂ ಅವಕಾಶ ಕೊಡಿಯೆಂದಿದ್ದಾರೆ. ಹೂಳೆತ್ತುವ ಬಗ್ಗೆ ಅರಣ್ಯ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಈಗಾಗಲೇ ನಾವು ಹಿರಿಯ ಅಧಿಕಾರಿಗಳಿಗೆ ಹೂಳೆತ್ತುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹಿರಿಯ ಅಧಿಕಾರಿಗಳ ಅನುಮತಿ ಬಳಿಕ ನೀರಾವರಿ ಇಲಾಖೆಯಿಂದ ಉಡುತೊರೆಹಳ್ಳ ಜಲಾಶಯದ ಹೂಳೆತ್ತುವ ಕೆಲಸ ಮಾಡ್ತೀವಿ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಮಲೆಮಹದೇಶ್ವರ ವನ್ಯಧಾಮದ ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ. ಒಟ್ನಲ್ಲಿ ಉಡುತೊರೆಹಳ್ಳ ಜಲಾಶಯ ಒಂದು ಬಾರಿಯೂ ಕೂಡ ಬರಿದಾಗಿರಲಿಲ್ಲ. ಮಾರ್ಟಳ್ಳಿ ಭಾಗದ ಜನರ ಒತ್ತಾಯಕ್ಕೆ ಮಣಿದು ಜಲಾಶಯದಿಂದ ನೀರು ಹರಿಸಿದ್ದರು. ಬಿಡುಗಡೆ ಮಾಡಿದ ನೀರು ಆ ಭಾಗದ ರೈತರಿಗೂ ಇಲ್ಲ ಈ ಭಾಗದ ರೈತರಿಗೂ ಇಲ್ಲದೇ ಬೆಳೆಗಳು ಒಣಗ್ತಿವೆ, ಇತ್ತ ವನ್ಯಜೀವಿಗಳಿಗೂ ಕೂಡ ನೀರಿಲ್ಲದಂತಾಗಿದೆ.


