ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ನಿಂದಾಗಿ ನೂರಾರು ಎಕರೆ ಕಬ್ಬು, ಅಡಿಕೆ ಹಾಗೂ ತೆಂಗಿನ ತೋಟಗಳು ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಕೊಳೇನಹಳ್ಳಿ, ಹದಡಿ ಹಾಗೂ ಆರನೇ ಮೈಲುಕಲ್ಲು ಗ್ರಾಮಗಳ ಸುತ್ತಮುತ್ತ ಸೋಮವಾರ ಸಂಭವಿಸಿದೆ.

ದಾವಣಗೆರೆ (ಡಿ.6) : ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ನಿಂದಾಗಿ ನೂರಾರು ಎಕರೆ ಕಬ್ಬು, ಅಡಿಕೆ ಹಾಗೂ ತೆಂಗಿನ ತೋಟಗಳು ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಕೊಳೇನಹಳ್ಳಿ, ಹದಡಿ ಹಾಗೂ ಆರನೇ ಮೈಲುಕಲ್ಲು ಗ್ರಾಮಗಳ ಸುತ್ತಮುತ್ತ ಸೋಮವಾರ ಸಂಭವಿಸಿದೆ.

ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳಿಗೆ ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಯು ವ್ಯಾಪಿಸಿದೆ. ಇತರೆ ಬೆಳೆಗಳು ಬೆಂಕಿಗಾಹುತಿಯಾದರೆ ಬೆಂಕಿ ನಂದಿಸಲು ರೈತರು ಇನ್ನಿಲ್ಲದ ವ್ಯರ್ಥ ಪ್ರಯತ್ನ ನಡೆಸಿದರು. ಕಬ್ಬಿನ ಹೊಲದಲ್ಲಿ ಮೊದಲಿಗೆ ಕಾಣಿಸಿಕೊಂಡ ಬೆಂಕಿಯು ನಿಧಾನವಾಗಿ ಇತರೆಡೆ ಹರಡಿತು. ಗದ್ದೆಯಲ್ಲಿ ಬೆಂಕಿ ಆರಂಭದಲ್ಲಿ ಕಾಣಿಸಿಕೊಂಡಾಗಲೇ ಕೆಲ ರೈತರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಹಾಗೂ ಗ್ರಾಮಸ್ಥರಿಗೆ ಕರೆ ಮಾಡಿ, ಮಾಹಿತಿ ತಲುಪಿಸಿದ್ದಾರೆ. ತಮ್ಮ ಕೈಲಾದಷ್ಟುಆರಂಭದಲ್ಲೇ ಬೆಂಕಿ ನಂದಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ. ಕೆಲವರಂತೂ ಬೆಂಕಿ ನಂದಿಸಲು ಮುಂದಾಗಿದ್ದ ವೇಳೆ ಬತ್ತ, ಕಬ್ಬು, ತೆಂಗು, ಅಡಿಕೆ ಬೆಳೆಗೆ ತಗುಲಿದ್ದ ಬೆಂಕಿಯ ಜ್ವಾಲೆಯ ಝಳ ಹಾಗೂ ಅಲ್ಲಲ್ಲಿ ಎದ್ದಿದ್ದ ಹೆಜ್ಜೇನುಗಳ ದಾಳಿಗೆ ಹೆದರಿ ದೂರಕ್ಕೆ ಓಡಿ ಹೋಗಿ, ಅಸಹಾಯಕರಾಗಿ ಬೆಳೆಗಳು ಬೆಂಕಿಗೆ ಆಹುತಿಯಾಗುವುದನ್ನು ಕಣ್ಣೀರು ಹಾಕುತ್ತಾ, ನೋಡುತ್ತಾ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೈಕ್‌ಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಪೊಲೀಸ್ ಬಸ್: ಮೂವರು ಬೈಕರ್‌ಗಳು ಸಾವು

ರೈತರಿಗೆ ತಲೆನೋವು:

ರೈತರಿಗೆ ಲಕ್ಷಾಂತರ ರು.ಗಳಷ್ಟುನಷ್ಟವಾಗಿದ್ದರೂ, ಕಬ್ಬಿಗೆ ಬೆಳೆ ವಿಮೆ ಸೌಲಭ್ಯ ಸಿಗುವುದಿಲ್ಲವೆಂಬ ಮಾತು ಕೇಳಿ ಬರುತ್ತಿದೆ. ನೂರಾರು ಎಕರೆ ಬೆಳೆ ನಾಶವಾಗಿದೆ. ಕಬ್ಬು ಪ್ರತಿ ಎಕರೆಗೆ 3 ಲಕ್ಷ ರು.ನಷ್ಟವಾಗಿದೆ. ಸಮೀಪದ ಕುಕ್ಕವಾಡ ಗ್ರಾಮದ ಸಮೀಪದ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಬೆಳೆದಿದ್ದು, ಈಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ಅನೇಕ ರೈತರು ಕಬ್ಬು ಬೆಳೆದಿದ್ದರು.

ಕಬ್ಬಿಗೆ ವಿಮೆ ಸಿಗಲ್ಲ; ಬೆಸ್ಕಾಂ, ಕಾರ್ಖಾನೆಯವರು ಪರಿಹಾರ ನೀಡಲಿ:

ಫಸಲ್‌ ವಿಮಾ ಯೋಜನೆ ವ್ಯಾಪ್ತಿಯಲ್ಲಿ ಕಬ್ಬಿನ ಬೆಳೆ ಇಲ್ಲ. ಹಾಗಾಗಿ ಕಬ್ಬಿನ ಬೆಳೆ ಕಳೆದುಕೊಂಡ ರೈತರ ಪೈಕಿ ಯಾರೊಬ್ಬರಿಗೂ ನಯಾ ಪೈಸೆ ಬೆಳೆ ವಿಮೆ ಸಿಗುವುದಿಲ್ಲ. ಇದರಿಂದ ರೈತರಿಗೆ ತೀವ್ರ ನಷ್ಟವಾಗುತ್ತಿದೆ. ಇಂತಹ ಬೆಂಕಿ ಅವಘಡಗಳು ಸಂಭವಿಸಿದಾಗ ಸರ್ಕರೆ ಕಾರ್ಖಾನೆಗಳು ತಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸುವ ಜೊತೆಗೆ ರೈತರು ಆರ್ಥಿಕ ನಷ್ಟಕ್ಕೆ ತುತ್ತಾದರೂ ಯಾವುದೇ ರೀತಿ ತಲೆ ಕೆಡಿಸಿಕೊಳ್ಳುವುದಿಲ್ಲ. ಬೆಸ್ಕಾಂ ಮತ್ತು ಸಕ್ಕರೆ ಕಾರ್ಖಾನೆಯವರು ಸೂಕ್ತ ಪರಿಹಾರ ನೀಡಬೇಕು. ಕಬ್ಬಿನ ಬೆಳೆಯನ್ನು ಫಸಲ್‌ ವಿಮಾ ಯೋಜನೆ ವ್ಯಾಪ್ತಿಗೆ ತರುವಂತೆ ಸರ್ಕಾರಕ್ಕೆ ಸತೀಶ ಕೊಳೇನಹಳ್ಳಿ ಒತ್ತಾಯಿಸಿದ್ದಾರೆ.

ನಿರ್ವಹಣೆ ಸರಿ ಇಲ್ಲದ್ದೇ ಅವಘಡಕ್ಕೆ ಕಾರಣ

ಹೊಲಗಳಲ್ಲಿ ಅಳವಡಿಸಿರುವ ವಿದ್ಯುತ್‌ ಮಾರ್ಗಗಳ ನಿರ್ವಹಣೆ ಸರಿಯಾಗಿಲ್ಲದ್ದರಿಂದ ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ ಆಗುತ್ತಿರುತ್ತದೆ. ಇಂದು ಹೀಗೆ ಆದ ಸಂದರ್ಭದಲ್ಲಿ ಕಿಡಿಗಳು ಸಣ್ಣದಾಗಿ ಹೊತ್ತಿಕೊಂಡು ನೂರಾರು ಎಕರೆಗೆ ವಿಸ್ತರಿಸಿ, ಲಕ್ಷಾಂತರ ರು. ಬೆಳೆಗಳನ್ನು ಸುಟ್ಟು ಕರಕಲು ಮಾಡಿವೆ. ಪದೇಪದೇ ಹದಡಿ, ಆರನೇ ಮೈಲಿಕಲ್ಲು ಗ್ರಾಮದ ಸುತ್ತಮುತ್ತ ಇಂತಹ ಬೆಂಕಿ ಅವಘಡ ಪದೇಪದೇ ಸಂಭವಿಸಿ, ರೈತರಿಗೆ ತೀವ್ರಆರ್ಥಿಕ ಸಂಕಷ್ಟತಂದೊಡ್ಡುತ್ತಿವೆ ಎನ್ನುತ್ತಾರೆ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ.

ಪುಣೆಯಲ್ಲಿ ಓಲಾ ಇಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ: ವಿಡಿಯೋ ವೈರಲ್

ಬೆಂಕಿ ಅವಘಡಗಳು ಸಂಭವಿಸಿದ ತಕ್ಷಣ ಬೆಂಕಿ ನಂದಿಸಲು ಅವಕಾಶವಾಗುವಂತೆ ಅಗ್ನಿಶಾಮಕ ವಾಹನಗಳನ್ನು ಶುಗ​ರ್‍ಸ್ ಕಂಪನಿಯವರು ವ್ಯವಸ್ಥೆ ಮಾಡಿಕೊಂಡು, ರೈತರ ನೆರವಿಗೆ ಧಾವಿಸಬೇಕು. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.

ಬಿ.ಎಂ.ಸತೀಶ ಕೊಳೇನಹಳ್ಳಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ