ಜಾಲತಾಣದ ಪ್ರಭಾವಿ ಇನ್ಫ್ಲೂಯೆನ್ಸರ್ ಹಾಗೂ ವಿಷಯ ರಚನಾಕಾರ ಮಹಾಮಾನವ ಮೋದಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಓಡಾಡುತ್ತಿದ್ದರು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಮೋದಿ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಕಲಬುರಗಿ (ಜೂ.02): ಒಂದು ಕಡೆ ಇಡೀ ದೇಶ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಹಾಗೂ ಡಿಸೇಲ್ ಕೊರತೆ ಎದುರಿಸುತ್ತಿದ್ದಾಗ, ಮತ್ತೊಂದು ಕಡೆ ಭಾರತದ ಸಾಮಾಜಿಕ ಜಾಲತಾಣದ ಪ್ರಭಾವಿ ಇನ್ಫ್ಲೂಯೆನ್ಸರ್ ಹಾಗೂ ವಿಷಯ ರಚನಾಕಾರ ಮಹಾಮಾನವ ಮೋದಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಓಡಾಡುತ್ತಿದ್ದರು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಮೋದಿ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ದಿ ವೈರ್ ವೆಬ್ ಸೈಟ್ ನ್ಯೂಸ್ ಪೋರ್ಟಲ್ ನಲ್ಲಿ ಪ್ರಕಟವಾದ ಸುದ್ದಿಯ ಲಿಂಕ್ ನ್ನು ಎಕ್ಸ್ ನಲ್ಲಿ ಹಂಚಿಕೊಂಡು ಬರೆದುಕೊಂಡಿರುವ ಖರ್ಗೆ, ಇಂಧನ ಉಳಿಸುವಂತೆ ಮೇ 10ರಂದು ಸಾರ್ವಜನಿಕರಿಗೆ ಕರೆ ನೀಡಿದ್ದ ಮೋದಿ ಪ್ರತಿಯೊಬ್ಬರು ಕಾರ್ ಬಳಸುವ ಬದಲು ಸಾರ್ವಜನಿಕ ಸಾರಿಗೆ ಬಳಸುವ ಮೂಲಕ ಇಂಧನ ಉಳಿಸುವಂತೆ ಹೇಳಿದ್ದರು.
ಆದರೆ, ಯುದ್ದ ಪ್ರಾರಂಭವಾದ 70 ದಿನಗಳ ನಂತರವೂ, ಮೋದಿ ದೇಶದ 12 ರಾಜ್ಯಗಳ 53 ನಗರಗಳಿಗೆ ಭೇಟಿ ನೀಡಿ 25 ರೋಡ್ ಶೋ ಗಳು ಸೇರಿದಂತೆ 81 ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಈ 81ರಲ್ಲಿ ಕೇವಲ 13 ಸಮಾರಂಭಗಳು ಮಾತ್ರ ಸರ್ಕಾರಿ ಕಾರ್ಯಕ್ರಮಗಳಾಗಿವೆ ಎಂದಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ
ಏರುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಿಂದಾಗಿ ವ್ಯಾಪಾರ ವ್ಯವಹಾರಗಳು ನಿಂತುಹೋಗಿ, ಜನರು ಅಡುಗೆ ಅನಿಲ ಪಡೆದುಕೊಳ್ಳಲು ಸರದಿಯಲ್ಲಿ ನಿಂತಿರುವಾಗ, ಮೋದಿ ಅವರು ತಮ್ಮ ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಆಯೋಜಿಸಲಾದ ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ ಪ್ರದರ್ಶನ ಮತ್ತು ಹೆಲಿಕಾಪ್ಟರ್ ಪುಷ್ಪ ವೃಷ್ಟಿಯನ್ನು ನೋಡಿ ಆನಂದಿಸುತ್ತಿದ್ದರು ಎಂದು ಕುಟುಕಿದ್ದಾರೆ.
ಚುನಾವಣೆ ಫಲಿತಾಂಶ ಘೋಷಣೆಯಾದ ನಂತರದ 10 ದಿನಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರಗಳನ್ನು ನಾಲ್ಕು ಸಲ ಏರಿಸಲಾಯಿತು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಪದೇ ಪದೇ ಮಾಡುತ್ತಿರುವ ಹೆಚ್ಚಳ ಸಾಮಾನ್ಯ ಜನರ ಮೇಲೆ ಬಿಜೆಪಿ ನಡೆಸುತ್ತಿರುವ ವಂಚನೆ ಹಾಗೂ ಕ್ರೌರ್ಯಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.


