Asianet Suvarna News Asianet Suvarna News

ಅಂಗವಿಕಲ ಅಣ್ಣ ಬೇಡ ಆತನ ಆಸ್ತಿ ಬೇಕು: ಅಕ್ಕ-ತಂಗಿ ಸಂಬಂಧ ಇಷ್ಟೇನಾ?

ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯವಾಗಿದ್ದ ವ್ಯಕ್ತಿ ಬೈಕ್‌ ಅಪಘಾತದಿಂದ ಶಾಶ್ವತ ಅಂಗವಿಕಲ ಆಗಿದ್ದಾನೆ. ನೋಡಿಕೊಳ್ಳಲು ಇದ್ದ ವೃದ್ಧ ತಾಯಿ ಕೂಡ ಇತ್ತೀಚೆಗೆ ತೀರಿ ಹೋಗಿದ್ದಾಳೆ. ರಕ್ತ ಸಂಬಂಧದ ಅಕ್ಕ ತಂಗಿಯರು ಇದ್ದರೂ, ಅಣ್ಣನನ್ನು ನೋಡಿಕೊಳ್ಳುತ್ತಿಲ್ಲ. ಆದರೆ, ಅಣ್ಣನಿಗೆ ಬರುವ ಆಸ್ತಿಗಾಗಿ ಹಕ್ಕು ಚಲಾಯಿಸುತ್ತಿದ್ದಾರೆ.

Dont want disabled brother want his property relationship tragedy sat
Author
First Published Dec 15, 2022, 11:13 PM IST | Last Updated Dec 15, 2022, 11:18 PM IST

ವರದಿ- ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಡಿ.15): ಏನೇ ಆದರೂ ರಕ್ತ ಸಂಬಂಧ ಎನ್ನುವುದು ದೊಡ್ಡದು ಎನ್ನುವ ಮಾತಿದೆ. ಆದರೆ ಇಲ್ಲಿ ರಕ್ತ ಸಂಬಂಧಕ್ಕಿಂತ ಆಸ್ತಿಯೇ ದೊಡ್ಡದು ಎನ್ನುವುದೇ ಚೆನ್ನಾಗಿ ಗೊತ್ತಾಗುತ್ತದೆ. ಈ ಮಾತು ಎದ್ದು ನಡೆದಾಡಲು ಸಾಧ್ಯವಾಗದೆ ಕುಳಿತಿರುವ ಈ ವ್ಯಕ್ತಿಯನ್ನು ನೋಡಿದರೆ ಎಂಥವರಿಗಾದರೂ ಅರಿವಾಗುತ್ತದೆ. ಈ ಕುರಿತ ಕರುಣಾಜನಕ ಕಥೆ ಇಲ್ಲಿದೆ ನೋಡಿ.

ಮಾನವೀಯತೆಯೂ ಲೆಕ್ಕಕ್ಕೆ ಇಲ್ಲದೆ ಆಸ್ತಿಯ ವಿಷಯವಷ್ಟೇ ಮುಖ್ಯವಾಗಿರುವ ಈ ಅಮಾನವೀಯ ಘಟನೆಗೆ ಸಾಕ್ಷಿಯಾಗಿರುವುದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನವಗ್ರಾಮ. ಹೀಗೆ ಚೇರ್ ಮೇಲೆ ಕುಳಿತು ಮೇಲೇಳಲು ಸಾಧ್ಯವಾಗದೆ ಕುಳಿತಿರುವ ಇವರು ಗುರುಮೂರ್ತಿ. ಮಾದಮ್ಮ ಎಂಬುವರ 55 ವಯಸ್ಸಿನ ಗುರುಮೂರ್ತಿ ಕಳೆದ ಐದು ವರ್ಷಗಳ ಹಿಂದಿನವರೆಗೆ ನಮ್ಮ, ನಿಮ್ಮಂತೆಯೇ ಚೆನ್ನಾಗಿದ್ದು ಓಡಾಡಿಕೊಂಡು ಇದ್ದವರು. ಆದರೆ ಬೈಕಿನಲ್ಲಿ ಪ್ರಯಾಣ ಮಾಡುವಾಗ ಆಕಸ್ಮಿಕವಾಗಿ ಆದ ಅಪಘಾತದಲ್ಲಿ ಗಾಯಗೊಂಡ ಇವರೂ ಶಾಶ್ವತವಾಗಿ ಅಂಗ ಊನತೆಗೆ ಒಳಗಾಗಿದ್ದಾರೆ. ಈಗ ಕುಳಿತುಕೊಳ್ಳುವುದಕ್ಕೂ ಆಗಲ್ಲ, ಸ್ವತಂತ್ರ್ಯವಾಗಿ ಓಡಾಡುವುದಕ್ಕೂ ಆಗಲ್ಲ. ಎರಡೆಜ್ಜೆ ನಡೆಯಬೇಕೆಂದರೆ ಮತ್ತೊಬ್ಬರ ಸಹಾಯಬೇಕು.

ಅಂಗವಿಕಲ ಗುರುಮೂರ್ತಿ ಒಬ್ಬಂಟಿ ಬದುಕು: ಇಂತಹ ಸ್ಥಿತಿಯಲ್ಲಿರುವ ಇವರಿಗೆ ತಂದೆ, ತಾಯಿ, ಹೆಂಡತಿ ಮತ್ತು ಮಕ್ಕಳು ಕೂಡ ಇಲ್ಲ. ತನ್ನೊಂದಿಗೆ ಕಳೆದ ನಾಲ್ಕು ವರ್ಷಗಳವರೆಗೆ ತಾಯಿ ಮಾದಮ್ಮ ಇದ್ದರು. ಆದರೆ ವಯೋಸಹಜವಾಗಿ ಅವರು ಸಾವಪ್ಪಿದ ಬಳಿಕ ಒಬ್ಬಂಟಿಯಾಗಿ ಬದುಕುತ್ತಿದ್ದಾರೆ. ಇವರ ಪಾಲಿಗೆ ಈಗ ಇರುವುದು ಈ ಚಿಕ್ಕ ಮನೆ ಮಾತ್ರ. ಈ ಚಿಕ್ಕ ಮನೆಯ ಮೇಲೂ ಅಕ್ಕ ತಂಗಿಯರು ಕಾನೂನು ಪ್ರಕಾರ ನಮಗೂ ಭಾಗ ಬರಬೇಕು ಎಂದು ವಕ್ರದೃಷ್ಟಿ ಬೀರಿದ್ದಾರೆ. ಇದು ವಿಕಲಾಂಗರಾಗಿರುವ ಗುರುಮೂರ್ತಿ ಅವರ ಜಂಗಾಬಲವೇ ಹುದುಗಿಹೋಗುವಂತೆ ಮಾಡಿದೆ.

ತಮಿಳುನಾಡಿನಲ್ಲಿ ಎಲ್ಲಾ ದಿವ್ಯಾಂಗರಿಗೆ ಶೀಘ್ರದಲ್ಲೇ ವರ್ಕ್‌ ಫ್ರಂ ಹೋಮ್‌!

ನೆರವಾಗದ ಅಕ್ಕ ತಂಗಿಯರು: ನಾಲ್ಕು ಜನರು ಅಕ್ಕ ತಂಗಿಯರು ಸಮೀಪದಲ್ಲೇ ಬೇರೆ ಬೇರೆ ಮನೆಗಳನ್ನು ನಿರ್ಮಿಸಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಆದರೂ ಎದ್ದು ಓಡಾಡಲು ಸಾಧ್ಯವಿಲ್ಲದ ಗುರುಮೂರ್ತಿಗೆ ಕನಿಷ್ಠ ಊಟವನ್ನು ಕೊಡುವುದಿಲ್ಲ. ಬಟ್ಟೆ ತೊಳೆದುಕೊಡುವುದಾಗಲಿ, ಸ್ನಾನ ಮಾಡಿಸುವುದಾಗಲಿ ಯಾವ ಕಷ್ಟ ಸುಖವನ್ನೂ ನೋಡುವುದಿಲ್ಲ. ಆದರೆ ಕಾನೂನು ಪ್ರಕಾರ ತಮ್ಮ ತಾಯಿಯ ಆಸ್ತಿ ನಮಗೂ ಬರಬೇಕು ಎಂದು ಹಠ ಹಿಡಿದು ಕುಳಿತ್ತಿದ್ದಾರೆ. ಇರುವ ಸಣ್ಣ ಮನೆಯನ್ನು ಭಾಗಮಾಡಿ ನೀಡಿದಲ್ಲಿ ನಾನು ಬೀದಿಗೆ ಬೀಳಬೇಕಾಗುತ್ತದೆ ಎನ್ನುವ ಆತಂಕವನ್ನು ಗುರುಮೂರ್ತಿ ಅವರು ಎದುರಿಸುತ್ತಿದ್ದಾರೆ. 

ಅಣ್ಣನ ಆಸ್ತಿಗಾಗಿ ಸಹೋದರಿಯರ ಪಟ್ಟು: ಕಳೆದ 25 ವರ್ಷಗಳ ಹಿಂದೆಯೇ ಗುರುಮೂರ್ತಿ ಅವರ ಅಕ್ಕ ತಂಗಿಯರ ಮದುವೆಯಾಗಿದ್ದು, 2001ರಲ್ಲಿ ಗುರುಮೂರ್ತಿಯವರ ತಾಯಿ ಮಾದಮ್ಮ ಅವರಿಗೆ ಸರ್ಕಾರ, ಈ ಮೂರುವರೆ ಸೆಂಟ್ ಜಾಗವನ್ನು ಮಂಜೂರು ಮಾಡಿತ್ತು. ಮಾದಮ್ಮ ಮೃತಪಟ್ಟಿರುವುದರಿಂದ ತಮ್ಮ ತಾಯಿಯ ಹೆಸರಿನಲ್ಲಿ ಇರುವ ಮನೆಯನ್ನು ತಮ್ಮ ಹೆಸರಿಗೆ ಖಾತೆ ವರ್ಗಾಯಿಸಿಕೊಡುವಂತೆ ಕಂದಾಯ ಇಲಾಖೆ, ಪಂಚಾಯಿತಿಗೆ ಗುರುಮೂರ್ತಿ ಅಲೆದಾಡುತ್ತಲೇ ಇದ್ದಾರೆ. ಆದರೆ ಅವರ ಅಕ್ಕ ತಂಗಿಯರು ತಮಗೂ ಮನೆಯಲ್ಲಿ ಪಾಲು ಬೇಕು ಎಂದು ಕೇಳುತ್ತಿರುವುದರಿಂದ ಅವರ ಒಪ್ಪಿಗೆ ಪಡೆದುಕೊಂಡು ಬನ್ನಿ ಎಂದು ಅಧಿಕಾರಿಗಳು ವಾಪಸ್ ಕಳುಹಿಸುತ್ತಿದ್ದಾರೆ. ಇವರಿಗೆ ಅಕ್ಕ ತಂಗಿಯರು ಸೇರಿದಂತೆ ದೊಡ್ಡ ಕುಟುಂಬವೇ ಇದೆ. ಆದರೆ ಯಾರೂ ಇವರ ಕಷ್ಟ ಸುಖ ನೋಡುವುದಿಲ್ಲ. 

Vijay Thalapathy ಅಂಗವಿಕಲ ಅಭಿಮಾನಿಯನ್ನು ಎತ್ತಿಕೊಂಡ ವಿಜಯ್; ಧರಿಸಿದ್ದ ಚಪ್ಪಲಿ ರೇಟ್ ಕೇಳಿ ಶಾಕ್

ವಾರಕ್ಕೆರಡು ಬಾರಿ ಸ್ನಾನ: ಗುರುಮೂರ್ತಿ ಅವರ ತಾಯಿ ತೀರಿ ಹೋದ ನಂತರ ನಾನೇ ಬಂದು ವಾರದಲ್ಲಿ ಎರಡು ಬಾರಿ ಸ್ನಾನ ಮಾಡಿಸುವುದು, ಬಟ್ಟೆ ತೊಳೆದುಕೊಡುವ ಕೆಲಸ ಮಾಡುತ್ತಿದ್ದೇನೆ. ಸಣ್ಣ ಮನೆಯೊಂದರಲ್ಲಿ ಒಬ್ಬಂಟಿಯಾಗಿ ಆಶ್ರಯ ಪಡೆದಿರುವ ಗುರುಮೂರ್ತಿ ಅವರಿಗೆ ಇನ್ನು ಮುಂದಾದರೂ ಅವರ ಅಕ್ಕ ತಂಗಿಯರು ಪ್ರೀತಿ ವಿಶ್ವಾಸ ತೋರಿಸಬೇಕಾಗಿದೆ. ಆಸ್ತಿಗಾಗಿ ಬರುವವರು ಅಣ್ಣನಿಗಾಗಿ ಯಾಕೆ ಬರುತ್ತಿಲ್ಲ ಎಂದು ಗುರುಮೂರ್ತಿ ಅವರನ್ನು ಪೋಷಣೆ ಮಾಡುತ್ತಿರುವ ಶ್ರೀಧರ್‌ ಬೇಸರ ವ್ಯಕ್ತಪಡಿಸಿದರು. 

Latest Videos
Follow Us:
Download App:
  • android
  • ios