ಟಿಪ್ಪು ಜಯಂತಿಗೆ ನನ್ನನ್ನು ಕರೀಬೇಡಿ..!
ನ.10 ಕ್ಕೆ ರಾಜ್ಯಾದ್ಯಂತ ಟಿಪ್ಪು ಜಯಂತಿ; ಬಿಜೆಪಿಯಿಂದ ವಿರೋಧ; ಆಹ್ವಾನ ಪತ್ರದಲ್ಲಿ ತಮ್ಮ ಹೆಸರು ಹಾಕದಂತೆ ಬಿಜೆಪಿ ಶಾಸಕರ ಮನವಿ
ಮಂಗಳೂರು: ನವೆಂಬರ್ 10ರಂದು ರಾಜ್ಯಾದ್ಯಂತ ನಡೆಸಲು ಉದ್ದೇಶಿಸಿರುವ ಸರ್ಕಾರಿ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ನನ್ನನ್ನು ಆಹ್ವಾನಿಸಬೇಡಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ದ.ಕ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ವಿನಂತಿಸಿದ್ದಾರೆ.
ಸರ್ಕಾರಿ ಆದೇಶದಂತೆ ದ.ಕ ಜಿಲ್ಲೆಯಲ್ಲೂ ಟಿಪ್ಪು ಜಯಂತಿ ಆಚರಿಸಲು ಉದ್ದೇಶಿಸಲಾಗಿದ್ದು, ಶಿಷ್ಟಾಚಾರದಂತೆ ಎಲ್ಲಾ ಶಾಸಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುವುದು ನಿಯಮ. ಆದ್ರೆ ಇದೀಗ ಡಿಸಿಗೆ ಪತ್ರ ಬರೆದಿರುವ ಶಾಸಕ ಹರೀಶ್ ಪೂಂಜಾ, ಟಿಪ್ಪು ಹಿಂದೂಗಳು ಮತ್ತು ಕ್ರೈಸ್ತರನ್ನು ಕೊಲೆ ಮಾಡಿರುವ ವ್ಯಕ್ತಿ. ಅಲ್ಲದೇ ಹೈಕೋರ್ಟ್ ಕೂಡ ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದಿದೆ, ಎಂದು ತಿಳಿಸಿದ್ದಾರೆ.
ಹೀಗಿರುವಾಗ ರಾಜ್ಯ ಸರ್ಕಾರ ವೋಟ್ ಬ್ಯಾಂಕ್ ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಶಿಷ್ಟಾಚಾರ ಬದಿಗೊತ್ತಿ ನನ್ನ ಹೆಸರು ಮತ್ತು ಬೆಳ್ತಂಗಡಿ ಶಾಸಕನಾದ ನನ್ನ ಹುದ್ದೆಯನ್ನು ಬಳಸದಂತೆ ಹಾಗೂ ಕಾರ್ಯಕ್ರಮಕ್ಕೂ ತನ್ನನ್ನು ಆಹ್ವಾನಿಸದಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಬೇಡ: ಅನಂತ್ ಹೆಗಡೆ
ಅಲ್ಲದೇ ಜಿಲ್ಲೆಯ ಉಳಿದ ಆರು ಬಿಜೆಪಿ ಶಾಸಕರು ಕೂಡ ಇದೇ ರೀತಿ ಪತ್ರ ಬರೆಯುವ ಸಾಧ್ಯತೆಯಿದೆ. ಈ ಹಿಂದೆ ಮೈಸೂರು ಸಂಸದ ಪ್ರತಾಪ ಸಿಂಹ ಕೂಡಾ ತಮ್ಮ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕದಂತೆ ಮನವಿ ಮಾಡಿದ್ದರು.
ಪ್ರತಿ ವರ್ಷದಂತೆ ನ. 10ಕ್ಕೆ ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಿಸಲು ಸರ್ಕಾರ ಮುಂದಾಗಿದ್ದು, ಬಿಜೆಪಿಯು ವಿರೋಧ ವ್ಯಕ್ತಪಡಿಸಿದೆ.