ಧರಂ ಸಿಂಗ್ ಸಂಬಂಧಿ ಹಂತಕ ಆತ್ಮಹತ್ಯೆ ಯತ್ನ
ಧರಂಸಿಂಗ್ ಅವರ ದೂರದ ಸಂಬಂಧಿ ಸಿದ್ಧಾರ್ಥ ದೇವೇಂದರ್ ಸಿಂಗ್ ಅವರ ಹತ್ಯೆ ಆರೋಪಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆತ ಆತ್ಮಹತ್ಯೆಗೆ ಯತ್ನಿಸಿದ್ದು ಪೊಲೀಸರೆ ರಕ್ಷಿಸಿದ್ದಾರೆ.
ಬೆಂಗಳೂರು (ಫೆ.02): ಮಾಜಿ ಮುಖ್ಯಮಂತ್ರಿ ದಿವಂಗತ ಧರಂಸಿಂಗ್ ಅವರ ದೂರದ ಸಂಬಂಧಿ ಸಿದ್ಧಾರ್ಥ ದೇವೇಂದರ್ ಸಿಂಗ್ (28) ಎಂಬವರನ್ನು ಹತ್ಯೆಗೈದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ವಿನೋದ್(34) ಎಂಬಾತನನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಾಗಿ ಆಂಧ್ರಪ್ರದೇಶದಲ್ಲಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಯಾವ ಕಾರಣಕ್ಕೆ ಹತ್ಯೆಗೈಯಲಾಗಿದೆ ಎಂಬುದು ಪ್ರಮುಖ ಆರೋಪಿಯ ಬಂಧನದ ಬಳಿಕ ಪತ್ತೆಯಾಗಬೇಕಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ವೈಯಕ್ತಿಕ ಹಾಗೂ ಉದ್ಯಮ ವಿಚಾರದಲ್ಲಿ ಕೊಲೆಯಾಗಿದೆ ಎಂದು ಹೇಳಲಾಗಿದೆ. ಸಿದ್ಧಾರ್ಥ ದೇವೇಂದರ್ ಸಿಂಗ್ ಹತ್ಯೆಗೆ ಸುಪಾರಿ ಕೊಡಲಾಗಿದೆ ಎಂಬ ಅನುಮಾನಗಳು ಮೂಡಿವೆ. ಪ್ರಕರಣದ ಮಾಸ್ಟರ್ ಮೈಂಡ್ ಸುಪಾರಿ ಹಂತಕ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಮಧ್ಯೆ ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿ ವಿನೋದ್ ಆತ್ಮಹತ್ಯೆ ಯತ್ನಿಸಿದ್ದ ಎಂದು ಮೂಲಗಳು ತಿಳಿಸಿವೆ.
ಯೋಗೇಶ್ ಗೌಡ ಹತ್ಯೆ: ವಿನಯ್ ಕುಲಕರ್ಣಿಗೆ ಸುಪ್ರೀಂನಲ್ಲೂ ಬೇಲ್ ಸಿಗೋದು ಡೌಟ್..! ...
ರೈಲಿಗೆ ತಲೆಕೊಡಲು ಯತ್ನ : ಜ.19ರಂದು ಮನೆಯಿಂದ ಹೊರಟ ಸಿದ್ಧಾರ್ಥ ದೇವೇಂದರ್ ಸಿಂಗ್ ಅವರನ್ನು ನೆಲ್ಲೂರು ಅರಣ್ಯ ಪ್ರದೇಶದಲ್ಲಿ ಹತ್ಯೆಗೈದು ಹೂತು ಹಾಕಿದ್ದ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆಗಿಳಿಸಿದ್ದರು. ಅಲ್ಲದೆ, ಆರೋಪಿ ವಿನೋದ್ ಬಂಧನಕ್ಕೂ ಮುಂದಾಗಿದ್ದರು. ತನ್ನನ್ನು ಪೊಲೀಸರು ಬಂಧಿಸಲಿದ್ದಾರೆ ಎಂದು ಆತಂಕಗೊಂಡ ಆರೋಪಿ, ಭಯದಿಂದ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವಿಚಾರ ತಿಳಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಆರೋಪಿ ಮುಖ ಮತ್ತು ಕೈ, ಕಾಲುಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾನೆ. ಇನ್ನು ಆಂಧ್ರಪ್ರದೇಶಕ್ಕೆ ತೆರಳಿರುವ ಅಮೃತಹಳ್ಳಿ ಪೊಲೀಸರ ವಿಶೇಷ ಅಲ್ಲಿಯೇ ಬೀಡುಬಿಟ್ಟಿದ್ದು, ಪ್ರಮುಖ ಆರೋಪಿಯ ಬಂಧನಕ್ಕೆ ಶೋಧ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಿಎಂ ಧರಂಸಿಂಗ್ ಸಂಬಂಧಿಯ ಅಪಹರಿಸಿ ಹತ್ಯೆ .
ಸಿದ್ಧಾರ್ಥ ಸ್ವಂತ ಉದ್ಯಮ ನಡೆಸುತ್ತಿದ್ದು, ಅಮೃತಹಳ್ಳಿಯ ದಾಸರಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಒಬ್ಬರೆ ವಾಸವಾಗಿದ್ದರು. ಜ.19ರಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ತನ್ನ ತಂದೆಗೆ ವಾಟ್ಸ್ಆ್ಯಪ್ ಮೂಲಕ ‘ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಕ್ಕೆ ಹೋಗುತ್ತಿರುವುದಾಗಿ’ ತಿಳಿಸಿದ್ದರು. ಆದರೆ, ಅಮೆರಿಕಕ್ಕೂ ಹೋಗದೆ, ವಾಪಸ್ ಮನೆಗೂ ಬಂದಿರಲಿಲ್ಲ. ಅನುಮಾನಗೊಂಡು ಆತನಿಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಆತ ನಾಪತ್ತೆ ಆಗಿರುವುದಾಗಿ ದೇವೇಂದರ್ ಅಮೃತ್ಹಳ್ಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.