*  ಅಗತ್ಯ ಅನುದಾನ ಕೂಡಲೇ ಬಿಡುಗಡೆ ಮಾಡಲು ಮನವಿ*  ಉಡಾನ್‌ ಯೋಜನೆ ಕೊಪ್ಪಳಕ್ಕೆ ಮಂಜೂರಿಯಾದ ವಿಮಾನ ನಿಲ್ದಾಣ *  ಹಣಕಾಸಿನ ಲಭ್ಯತೆ ನೋಡಿಕೊಂಡು ತೀರ್ಮಾನ: ಸಿಎಂ ಬೊಮ್ಮಾಯಿ   

ಕೊಪ್ಪಳ(ಆ.26): ಉಡಾನ್‌ ಯೋಜನೆ ಕೊಪ್ಪಳಕ್ಕೆ ಮಂಜೂರಿಯಾಗಿದ್ದರೂ ವಿಮಾನ ನಿಲ್ದಾಣ ಇಲ್ಲದೆ ಅದು ಇನ್ನು ಜಾರಿಯಾಗಿಲ್ಲವಾದ್ದರಿಂದ ಈಗಾಗಲೇ ಪ್ರಸ್ತಾಪಿತ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಕಾರ್ಯವನ್ನು ಬೇಗನೆ ಕೈಗೆತ್ತಿಕೊಳ್ಳುವ ಆದೇಶ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೊಪ್ಪಳ ಚುನಾಯಿತ ಪ್ರತಿನಿಧಿಗಳ ನಿಯೋಗ ಆಗ್ರಹಿಸಿದೆ.

Add Asianetnews Kannada as a Preferred SourcegooglePreferred

ಈಗಾಗಲೇ ಇರುವ ಖಾಸಗಿ ವಿಮಾನ ನಿಲ್ದಾಣದಲ್ಲಿಯೇ ಯೋಜನೆಯನ್ನು ಜಾರಿ ಮಾಡಲು ಯತ್ನಿಸಿದರೂ ಅದು ಪ್ರಯೋಜನವಾಗಲಿಲ್ಲ ಮತ್ತು ಖಾಸಗಿ ವಿಮಾನ ನಿಲ್ದಾಣದವರು ನೂರೆಂಟು ಷರತ್ತು ವಿಧಿಸಿದ್ದರಿಂದ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾವನೆ ಈಗಾಗಲೇ ಸರ್ಕಾರದ ಹಂತದಲ್ಲಿದೆ. ಇದಕ್ಕೆ ಅಗತ್ಯ ಅನುದಾನವನ್ನು ನೀಡುವ ಮೂಲಕ ಮುಖ್ಯಮಂತ್ರಿ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಆಗ್ರಹಿಸಲಾಯಿತು.

ಬೆಂಗಳೂರಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಬಳಿ ಬ್ರಿಜ್‌ ನಿರ್ಮಾಣ ಕಾಮಗಾರಿ ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರದ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣಕ್ಕೆ ಬೈಪಾಸ್‌ ರಸ್ತೆ ನಿರ್ಮಾಣ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು.

4 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೊಪ್ಪಳ ಏರ್‌ಪೋರ್ಟ್‌ಗೆ ಮರುಜೀವ..!

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್‌, ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮನವಳ್ಳಿ, ಬಸವರಾಜ ದಢೇಸೂಗೂರು, ಅಮರೇಗೌಡ ಬಯ್ಯಾಪುರ, ಕುರಿ ಮತ್ತು ಉಣ್ಣೆ ನಿಗಮ ಅಧ್ಯಕ್ಷ ಶರಣು ತಳ್ಳಿಕೇರಿ ಉಪಸ್ಥಿತರಿದ್ದರು.

ಸಿಎಂ ಭರವಸೆ:

ನಿಯೋಗಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಕಾರ್ಯಗತ ಮಾಡುವ ದಿಸೆಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಇದರ ಅಗತ್ಯತೆಯ ಮನವರಿಕೆಯಾಗಿದ್ದು, ಕೂಡಲೇ ಈ ದಿಸೆಯಲ್ಲಿ ಹಣಕಾಸಿನ ಲಭ್ಯತೆಯನ್ನು ನೋಡಿಕೊಂಡು, ತೀರ್ಮಾನಿಸಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಲ್ಲಿಯೂ ವಿಮಾನ ನಿಲ್ದಾಣ ಹೊಂದುವುದು ತೀರಾ ಅಗತ್ಯವಾಗಿದೆ. ಹೀಗಾಗಿ, ಈ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದಿದ್ದಾರೆ.