ಯಲ್ಲಾಪುರದ ನಿವೃತ್ತ ಎಲ್ಐಸಿ ಏಜೆಂಟ್ ಶಿವಾನಂದ ಹೆಗಡೆ ಅವರು 'ಡಿಜಿಟಲ್ ಅರೆಸ್ಟ್' ಎಂಬ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ನಕಲಿ ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡ ವಂಚಕರು, ಉಗ್ರರೊಂದಿಗೆ ಸಂಪರ್ಕದ ಆರೋಪ ಹೊರಿಸಿ, ಅವರಿಂದ ಹಂತ ಹಂತವಾಗಿ ₹1.74 ಕೋಟಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಘಟನೆಯು ಸೈಬರ್ ವಂಚನೆಯ ಹೊಸ ಮುಖವನ್ನು ಅನಾವರಣಗೊಳಿಸಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದ ನಿವೃತ್ತ ಎಲ್ಐಸಿ ಏಜೆಂಟ್ ಶಿವಾನಂದ ತಿಮ್ಮಪ್ಪ ಹೆಗಡೆ (69) ಅವರು ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ರೀತಿಯ ಸೈಬರ್ ಮೋಸಕ್ಕೆ ಬಲಿಯಾಗಿ, ಸುಮಾರು ₹1.74 ಕೋಟಿ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಶಿವಾನಂದ ಹೆಗಡೆ ಅವರಿಗೆ +91 7502502510 ಸಂಖ್ಯೆಯಿಂದ ಕರೆ ಬಂದಿದ್ದು, ತಮ್ಮನ್ನು ಮುಂಬೈ ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತರು ಮಾತನಾಡಿದ್ದಾರೆ. ನಿಮ್ಮ ಹೆಸರಿನಲ್ಲಿ ಇರುವ ಬ್ಯಾಂಕ್ ಖಾತೆಯನ್ನು ಉಗ್ರಗಾಮಿಗಳು ಮನಿ ಲಾಂಡರಿಂಗ್ಗೆ ಬಳಸುತ್ತಿದ್ದಾರೆ. ಈ ಸಂಬಂಧ ಮುಂಬೈ ಪೊಲೀಸ್ ಠಾಣೆಯಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ನಕಲಿ ಆರೋಪ ಮಾಡಿದ್ದಾರೆ.
ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕಾಲ್
ಇದರಿಂದ ಬೆಚ್ಚಿಬಿದ್ದ ಹೆಗಡೆ ಅವರಿಗೆ, ತನಿಖೆ ಪೂರ್ಣಗೊಳ್ಳುವವರೆಗೆ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ರಿಸರ್ವ್ ಬ್ಯಾಂಕ್ಗೆ ಜಮಾ ಮಾಡಬೇಕು. ಹಾಗೆಯೇ ಪ್ರತಿದಿನ ನಿಮ್ಮ ಲೈವ್ ಲೊಕೇಶನ್ನ್ನು ನಮ್ಮಿಗೆ ಕಳುಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ತಮ್ಮ ಮಾತು ನಂಬಿಸುವ ಸಲುವಾಗಿ, ನಕಲಿ ಪೊಲೀಸರು ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕಾಲ್ ಮಾಡಿದ್ದು, ತಾವು ಮುಂಬೈನ ಡಿ.ಐ.ಜಿ ಮಟ್ಟದ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ.
ಇದಲ್ಲದೆ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ತಕ್ಷಣ ಬಂಧಿಸುವುದಾಗಿ ಬೆದರಿಕೆ ಹಾಕಿ, ಹೆಗಡೆ ಅವರನ್ನು ಸಂಪೂರ್ಣವಾಗಿ ಮಾನಸಿಕ ಒತ್ತಡಕ್ಕೆ ಒಳಪಡಿಸಿದ್ದಾರೆ. ಈ ಬೆದರಿಕೆಗೆ ಹೆದರಿದ ಶಿವಾನಂದ ಹೆಗಡೆ, ಸೂಚನೆಯಂತೆ ಹಂತ ಹಂತವಾಗಿ ಒಟ್ಟು ₹1,74,50,000 ಹಣವನ್ನು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.
ಡಿಜಿಟಲ್ ಅರೆಸ್ಟ್ ಬಗ್ಗೆ ಎಚ್ಚರವಿರಲಿ
ಆದರೆ ಬಳಿಕ ಈ ಘಟನೆ ಮೋಸ ಎಂಬುದು ತಿಳಿದುಬಂದ ತಕ್ಷಣ, ಅವರು ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.
ಈ ಘಟನೆ, ‘ಡಿಜಿಟಲ್ ಅರೆಸ್ಟ್’ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಹೊಸ ಮಾದರಿಯ ಸೈಬರ್ ಮೋಸಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕೆಂಬ ಅಗತ್ಯವನ್ನು ಮತ್ತೊಮ್ಮೆ ಪೊಲೀಸರು, ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಪೊಲೀಸ್ ಇಲಾಖೆ ಈ ರೀತಿಯಾಗಿ ಹಣ ವರ್ಗಾವಣೆ ಮಾಡುವಂತೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇಂತಹ ಕರೆಗಳು ಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.


