ಚಿಕ್ಕಮಗಳೂರಿನಲ್ಲಿ 'ಡಿಜಿಟಲ್ ಅರೆಸ್ಟ್' ಎಂಬ ಹೊಸ ಮಾದರಿಯ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ಸಿಬಿಐ ಅಧಿಕಾರಿಗಳೆಂದು ನಂಬಿಸಿ, 71 ವರ್ಷದ ವೃದ್ಧರೊಬ್ಬರನ್ನು ಮಾನಸಿಕವಾಗಿ ಬಂಧಿಸಿ, ಅವರಿಂದ 48.50 ಲಕ್ಷ ರೂಪಾಯಿಗಳನ್ನು ವಂಚಕರು ದೋಚಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿಕ್ಕಮಗಳೂರು (ಮಾ.27): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಇದೀಗ ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ತಂತ್ರದ ಮೂಲಕ ವಂಚಕರು ಮತ್ತೊಮ್ಮೆ ದೊಡ್ಡ ಮಟ್ಟದ ಮೋಸ ನಡೆಸಿರುವ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸಿಬಿಐ ಅಧಿಕಾರಿ ಎಂದು ಹೇಳಿ ವಂಚನೆ:

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಆಸಂದಿ ಗ್ರಾಮದ ನಿವಾಸಿ 71 ವರ್ಷದ ಎ.ಆರ್. ಲೋಕೇಶಪ್ಪ ಅವರು ಈ ಬಗ್ಗೆ ದೂರು ನೀಡಿದ್ದಾರೆ. ಮಾರ್ಚ್ 15ರ ಬೆಳಿಗ್ಗೆ ಇವರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನನ್ನು ಸಿಬಿಐ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ.ವೃದ್ದನಿಗೆ 'ನೀವು ನರೇಶ್ ಗೋಯೆಲ್ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ' ಎಂದು ಹೇಳಿ ಭಯ ಹುಟ್ಟಿಸಿದ್ದಾನೆ. ಬಳಿಕ ಇನ್ನೂ ಹಲವಾರು ಸಂಖ್ಯೆಯಿಂದ ಕರೆ ಮಾಡಿ, ಲೋಕೇಶಪ್ಪ ಅವರಿಗೆ ಮನೋಭಾವದ ಒತ್ತಡ ತಂದಿದ್ದಾರೆ.ವಂಚಕರು 'ನೀವು ಒಂದು ಕೊಠಡಿಯಿಂದ ಹೊರಗೆ ಬರಬಾರದು, ಯಾರೊಂದಿಗೂ ಮಾತನಾಡಬಾರದು' ಎಂದು ಸೂಚನೆ ನೀಡಿ, ಮಾನಸಿಕವಾಗಿ ಒಂಟಿಯಾಗುವಂತೆ ಮಾಡಿ ವಂಚಿಸಿದ್ದಾರೆ.

ತನಿಖೆ ನಡೆಯುವ ತನಕ ಹಣ ವರ್ಗಾವಣೆ ಮಾಡುವಂತೆ ಒತ್ತಡ:

ಪರಿಶೀಲನೆ ಮುಗಿಯುವವರೆಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು’ ಎಂದು ನಂಬಿಸಲಾಗಿದೆ. ಸರ್ಕಾರದ ಸಂಸ್ಥೆಯ ಹೆಸರನ್ನು ಬಳಸಿಕೊಂಡು ವಿಶ್ವಾಸ ಮೂಡಿಸುವ ಮೂಲಕ ವಂಚನೆ ನಡೆದಿದೆ.ಈ ಮಾತುಗಳನ್ನು ನಂಬಿದ ಲೋಕೇಶಪ್ಪ ಅವರು ಹಂತ ಹಂತವಾಗಿ ಒಟ್ಟು 48 ಲಕ್ಷ 50 ಸಾವಿರ ರೂಪಾಯಿಯನ್ನು ವಂಚಕರ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ನಂತರ ಅನುಮಾನ ಬಂದು ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ, ತಾವು ‘ಡಿಜಿಟಲ್ ಅರೆಸ್ಟ್’ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿದೆ.ಪ್ರಸ್ತುತ, ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಲಾಗಿದೆ.

ಪೊಲೀಸರ ಎಚ್ಚರಿಕೆ:

  • ಯಾವುದೇ ಸರ್ಕಾರಿ ಅಧಿಕಾರಿ ಫೋನ್ ಮೂಲಕ ಹಣ ವರ್ಗಾವಣೆ ಕೇಳುವುದಿಲ್ಲ.
  • ಅಪರಿಚಿತ ಕರೆಗಳಿಗೆ ವೈಯಕ್ತಿಕ ಅಥವಾ ಬ್ಯಾಂಕ್ ಮಾಹಿತಿಯನ್ನು ನೀಡಬಾರದು.
  • ಬೆದರಿಕೆ ಅಥವಾ ತುರ್ತು ಒತ್ತಡ ತರುವ ಕರೆಗಳನ್ನು ನಂಬಬಾರದು.
  • ಸಂಶಯಾಸ್ಪದ ಕರೆ ಬಂದರೆ ತಕ್ಷಣವೇ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಬೇಕು.
  • ಇಂತಹ ಸೈಬರ್ ಮೋಸಗಳಿಂದ ತಪ್ಪಿಸಿಕೊಳ್ಳಲು ಜಾಗ್ರತೆ ಅತ್ಯಗತ್ಯ ಎಂದು ಪೊಲೀಸರು ಮನವಿ ಮಾಡಿದ್ದಾರೆ.