ನಾಳೆ ತೀರ್ಥಹಳ್ಳಿಗೆ ಸಿಎಂ ಭೇಟಿ: ₹750 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ತಾಲೂಕಿಗೆ ಆಗಮಿಸಲಿದ್ದು .750 ಕೋಟಿಗೂ ಮಿಕ್ಕಿದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಹಾಗೂ ಎಲೆಚುಕ್ಕಿರೋಗ ತಗುಲಿರುವ ಒಂದೆರಡು ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿ (ನ.26) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ತಾಲೂಕಿಗೆ ಆಗಮಿಸಲಿದ್ದು .750 ಕೋಟಿಗೂ ಮಿಕ್ಕಿದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಹಾಗೂ ಎಲೆಚುಕ್ಕಿರೋಗ ತಗುಲಿರುವ ಒಂದೆರಡು ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಮುಖ್ಯಮಂತ್ರಿಗಳಾಗಿ ತಾಲೂಕಿಗೆ ಮೊದಲ ಬಾರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳನ್ನು ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಬಾಳೇಬೈಲು ಸರ್ಕಾರಿ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗುವ ಹೆಲಿಪ್ಯಾಡಿನಲ್ಲಿ ಸ್ವಾಗತಿಸಲಾಗುವುದು. ಕಾಲೇಜಿನ 10 ಕೋಟಿ ರೂ ವೆಚ್ಚದ ವಿಸ್ತರಣಾ ಕಟ್ಟಡವನ್ನು ಉದ್ಘಾಟಿಸಿದ ನಂತರ ಉಂಟೂರುಕಟ್ಟೆಸಮೀಪದ ಅಡಕೆ ತೋಟಗಳಿಗೆ ಸಿಎಂ ಭೇಟಿ ನೀಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ
ಪಪಂಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ನಂತರ ಮುಖ್ಯಮಂತ್ರಿಗಳು ಸಂಸ್ಕೃತಿ ಮಂದಿರದ ಆವರಣದಲ್ಲಿ ಮುಳುಗಡೆ ಸಂತ್ರಸ್ತರ ಮನವಿಯನ್ನು ಸ್ವೀಕರಿಸಲಿದ್ದಾರೆ. ಭೋಜನ ಮುಗಿಸಿದ ನಂತರ ಡಾ.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಸಿಎಂ ಯಡ್ಯೂರಪ್ಪ ಸೇರಿದಂತೆ ರಾಜ್ಯ ಸರ್ಕಾರದ ಹಿರಿಯ ಸಚಿವರುಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿರಿಸಿ ನಾಲ್ಕನೇ ಬಾರಿಗೆ ಗೆಲ್ಲಿಸಿದ ನಂತರ ಈ ಕ್ಷೇತ್ರಕ್ಕೆ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ಹರಿದು ಬಂದಿದೆ. ಹಿಂದಿನ ಶಾಸಕರಂತೆ ಅನುದಾನ ಇಲ್ಲದೇ ಕೇವಲ ಪ್ರಚಾರಕ್ಕಾಗಿ ಹೇಳುತ್ತಿಲ್ಲಾ. ಎಲ್ಲಾ ಕಾಮಗಾರಿಗಳಿಗೂ ಆಡಳಿತ ಮಂಜೂರಾತಿ ದೊರೆತಿದೆ. ಆಡಳಿತ ಪಕ್ಷದಲ್ಲಿರುವ ಕಾರಣ ಇಷ್ಟೊಂದು ಅನುದಾನ ತರುವುದಕ್ಕೆ ಸಾಧ್ಯವಾಗಿದೆ. ಅಧಿಕಾರದಲ್ಲಿ ಇಲ್ಲದ ಸಂಧರ್ಭದಲ್ಲೂ ಪ್ರಬಾವ ಬಳಸಿ ಸಾಕಷ್ಟುಕಾಮಗಾರಿ ತಂದಿದ್ದೇನೆ. ಅಡಕೆಗೆ ತಗುಲುತ್ತಿರುವ ರೋಗಗಳಿಗೆ ಪರಿಹಾರ ಕೊಡೊದಿಕ್ಕಿಂತ ಮುಖ್ಯವಾಗಿ ತೋಟವನ್ನು ಉಳಿಸುವ ಪ್ರಯತ್ನ ಆಗಬೇಕಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಪ್ರಯತ್ನ ನಡೆಸಿದ್ದಾರೆ ಎಂದರು.
10 ಕೋಟಿ ವೆಚ್ಚದ ಸರ್ಕಾರಿ ಕಾಲೇಜಿನ ಕಟ್ಟಡ ಹಾಗೂ 4.05 ಕೋಟಿ ರೂಗಳ ಪಪಂ ನೂತನ ಕಟ್ಟಡದ ಉದ್ಘಾಟನೆ, 344 ಕೋಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು, 110 ಕೋಟಿ ಜಲ ಜೀವನ ಮಿಷನ್ ಯೋಜನೆ, 107 ಕೋಟಿ ಗ್ರಾಮೀಣ ರಸ್ತೆಗಳು, 26 ಕೋಟಿ ರೂಗಳ ಹೊಸಳ್ಳಿ ತೂದೂರು ರಸ್ತೆ, 24 ಕೋಟಿ ವೆಚ್ಚದ ಬಿಲ್ಸಾಗರ್ ಸೇತುವೆ, 15 ಕೋಟಿ ರೈತರ ಜಮೀನುಗಳಿಗೆ ತಡೆಗೋಡೆ ನಿರ್ಮಾಣ, 8 ಕೋಟಿ ಭಾರತೀಪುರ ಕೆಸರೆ ಬದಲಿ ರಸ್ತೆ, ತಲಾ 6.50 ಕೋಟಿ ರೂಗಳ ಪೋಲಿಸ್ ವಸತಿ ಸಂಕೀರ್ಣ, ಅಮೃತ ನಗರೋತ್ಥಾನ ಕಾಮಗಾರಿ ಹಾಗೂ ಆಯುಷ್ ಆಸ್ಪತ್ರೆ ನಿರ್ಮಾಣ, ತಲಾ 5 ಕೋಟಿ ಸರ್ಕಾರಿ ನೌಕರರ ವಸತಿ ಮತ್ತು ಪ್ರವಾಸಿ ಮಂದರಿದ ಅಭಿವೃದ್ದಿ, ತಲಾ 3 ಕೋಟಿ ರೂಗಳ ಪೋಲಿಸ್ ಸ್ಟೇಷನ್ ಹಾಗೂ ಅಗ್ನಿಶಾಮಕದಳ ಘಟಕ ಇನ್ನೂ ಮುಂತಾದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಶೀಘ್ರ ನಿರ್ಧಾರ: ಸಿಎಂ ಬೊಮ್ಮಾಯಿ
ಕುವೆಂಪು ಅನಂತಮೂರ್ತಿಯವರು ಸೇರಿದಂತೆ ಮಹಾನ್ ವ್ಯಕ್ತಿಗಳು ಜನಿಸಿರುವ ಈ ತಾಲೂಕಿಗೆ ಭಯೋತ್ಪಾದಕ ಚಟುವಟಿಕೆಯಿಂದ ಕೆಟ್ಟಹೆಸರು ಬಂದಿರುವುದು ಗೃಹ ಸಚಿವನಾಗಿ ನನಗೆ ಬೇಸರದ ಸಂಗತಿಯಾಗಿದೆ. ಇದನ್ನು ಖಂಡಿತವಾಗಿಯೂ ಮುಲೋತ್ಪಾಟನೆ ಮಾಡುತ್ತೇವೆ. 94 ಸಿ ಮುಂತಾದ ಸರ್ಕಾರದ ಯೋಜನೆಗಳಿಂದ ಫಲಾನುಭವಿಗಳಿಗೆ ನೀಡುವ ಹಕ್ಕುಪತ್ರದ ಆಧಾರದಲ್ಲಿ ಮಂಜೂರಾತಿ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಲು ಸಾಲ ದೊರೆಯದಿರುವುದು ಮತ್ತು ಪೂರ್ಣ ಹಕ್ಕು ನೀಡದಿದ್ದರೆ ಹಕ್ಕು ಪತ್ರವನ್ನು ಸುಟ್ಟು ಹಾಕೋದು ಸೂಕ್ತ ಎಂದೂ ಪ್ರಶ್ನೆಯೊಂದಕ್ಕೆ ಬೇಸರದಿಂದ ಉತ್ತರಿಸಿದರು. ರಾಜ್ಯ ಕಾಂಪೋಸ್ಟ್ ನಿಗಮದ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್, ತಾಲೂಕು ಬಿಜೆಪಿ ಅದ್ಯಕ್ಷ ರಾಘವೇಂದ್ರ ನಾಯಕ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಹೆದ್ದೂರು ನವೀನ್, ಪ್ರಶಾಂತ್ ಕುಕ್ಕೆ ಹಾಗೂ ಬೇಗುವಳ್ಳಿ ಕವಿರಾಜ್ ಇದ್ದರು.