ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು
ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಲಕ್ಷಾಂತರ ಮೌಲ್ಯದ ಗಿರ್ ಹಸುಗಳ ಕಳ್ಳತನ! ಕಳ್ಳರು ಒಂದು ಹಸುವಿನ ಕತ್ತು ಕೊಯ್ದು ಕ್ರೌರ್ಯ ಮೆರೆದಿದ್ದಾರೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ವಿವರ ತಿಳಿಯಿರಿ.

ಗುಜರಾತಿನ ಗಿರ್ ತಳಿಯ ಹಸು ಕಳ್ಳತನ
ಬೆಂಗಳೂರು ಗ್ರಾಮಾಂತರ (ಡಿ.08): ಗುಜರಾತಿನಿಂದ ತಂದು ಪ್ರೀತಿಯಿಂದ ಸಾಕಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೂರು ಗಿರ್ ಹಸುಗಳನ್ನು ಖತರ್ನಾಕ್ ಕಳ್ಳರು ಕಳ್ಳತನ ಮಾಡಿರುವ ಹಾಗೂ ಒಂದು ದೊಡ್ಡ ಹಸುವಿನ ಕುತ್ತಿಗೆಯನ್ನು ಕತ್ತರಿಸಿ ಕ್ರೌರ್ಯವನ್ನು ಮೆರೆದ ವಿಕೃತಿಯ ಘಟನೆ ನೆಲಮಂಗಲ ಬಳಿಯ ಗೌಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೌಡಹಳ್ಳಿ ಗ್ರಾಮದ ನಿವಾಸಿ ವಿಜಯಲಕ್ಷ್ಮಿ ಎಂಬುವವರು ಈ ಹಸುಗಳನ್ನು ಸಾಕಿದ್ದರು. ಇವರು ಗುಜರಾತ್ನಿಂದ ತಂದಿದ್ದ ಗಿರ್ ತಳಿಯ ಈ 3 ಹಸುಗಳು ಸುಮಾರು 4 ಲಕ್ಷ ರೂಪಾಯಿಗಳಷ್ಟು ಬೆಲೆ ಬಾಳುತ್ತಿದ್ದವು ಎನ್ನಲಾಗಿದೆ.
ಕುತ್ತಿಗೆ ಕೊಯ್ದು ಕ್ರೌರ್ಯ
ಕಳ್ಳರು ಈ ಹಸುಗಳನ್ನು ಕಳವು ಮಾಡುವಾಗ ಒಂದು ಹಸುವಿನ ಕುತ್ತಿಗೆಯನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಕಳ್ಳರಿಂದ ಹೇಗೋ ತಪ್ಪಿಸಿಕೊಂಡು ಹಿಂತಿರುಗಿರುವ ಒಂದು ಚಿಕ್ಕ ಗಿರ್ ಹಸುವಿನ ಕತ್ತಿನ ಭಾಗದಲ್ಲಿ ಸುಮಾರು ಎರಡು ಇಂಚುಗಳಷ್ಟು ಆಳದ ಗಾಯವಾಗಿದ್ದು, ರಕ್ತಸ್ರಾವವಾಗಿರುವುದು ಕಂಡುಬಂದಿದೆ.
ಅಧಿಕ ಹಾಲು ಕೊಡುವ ಗಿರ್ ತಳಿ
ಕಳ್ಳರು ಹಸುವಿನ ಕೊರಳನ್ನು ಕೊಯ್ದು ಗಾಯಗೊಳಿಸಿರುವ ರೀತಿ ಸ್ಥಳೀಯರಲ್ಲಿ ಆಕ್ರೋಶ ಮತ್ತು ಆತಂಕ ಮೂಡಿಸಿದೆ. ಕಳವು ಮಾಡಿ ಕತ್ತು ಕೊಯ್ದು ವಿಕೃತಿ ಮೆರೆದಿರುವ ಕುರಿತು ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಲಾಗಿದೆ. ವಿಜಯಲಕ್ಷ್ಮಿ ಅವರು ಪ್ರೀತಿಯಿಂದ ಸಾಕಿದ್ದ, ಅಧಿಕ ಹಾಲು ನೀಡುವ ಈ ತಳಿಯ ಹಸುಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.
ತನಿಖೆ ಆರಂಭಿಸಿದ ಪೊಲೀಸರು
ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳ್ಳತನಕ್ಕೆ ಯತ್ನಿಸಿದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಹಸುವಿನ ಕೊರಳನ್ನು ಕಳ್ಳರು ಕ್ರೂರವಾಗಿ ಕೊಯ್ದಿದ್ದಾರೆಯೇ ಅಥವಾ ಯಾವುದಾದರೂ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಸು ಕಳ್ಳತನ ಮೊದಲೇನಲ್ಲ
ಈ ಹಿಂದೆ ಕೂಡ ರಾಜ್ಯದ ಹಲವು ಕಡೆ ಇಂತಹ ಬೆಲೆ ಬಾಳುವ ತಳಿಯ ಹಸುಗಳ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಲಾಗಿದೆ. ಮೂರು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಹಸುಗಳ ಕಳ್ಳತನ ಮತ್ತು ಕತ್ತು ಕೊಯ್ದು ಕ್ರೌರ್ಯ ಮೆರೆದಿರುವ ಈ ಘಟನೆಯು ಗೌಡಹಳ್ಳಿ ಗ್ರಾಮದ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

