ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರೈತ ಚಂದ್ರಪ್ಪ ಅವರು ಬೆಳೆದಿದ್ದ 1500 ಬಾಳೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕತ್ತರಿಸಿ ನಾಶಪಡಿಸಿದ್ದಾರೆ. ಸುಮಾರು 15 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದ ರೈತ, ಈ ದುಷ್ಕೃತ್ಯದಿಂದ ಕಂಗಾಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು (ಮಾ.31): ಸಾಲಸೋಲ ಮಾಡಿ, ಮಗುವಿನಂತೆ ಸಾಕಿ ಬೆಳೆಸಿದ್ದ ಬಾಳೆಯ ಬೆಳೆ ಕೈಗೆ ಬರುವ ಸಂದರ್ಭದಲ್ಲಿ ಕಿಡಿಗೇಡಿಗಳು ನಡೆಸಿದ ಅಮಾನವೀಯ ಕೃತ್ಯಕ್ಕೆ ರೈತನೊಬ್ಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಡಿ.ಕಾರೇಹಳ್ಳಿ ಗ್ರಾಮದಲ್ಲಿ ಇಂತಹದೊಂದು ಘೋರ ಘಟನೆ ನಡೆದಿದ್ದು, ಸುಮಾರು 2 ಎಕರೆಯಲ್ಲಿದ್ದ 1,500 ಬಾಳೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕತ್ತರಿಸಿ ನಾಶಪಡಿಸಿದ್ದಾರೆ.
ಘಟನೆಯ ವಿವರ:
ಡಿ.ಕಾರೇಹಳ್ಳಿ ಗ್ರಾಮದ ರೈತ ಚಂದ್ರಪ್ಪ ಎಂಬುವವರು ತಮ್ಮ 2 ಎಕರೆ ಜಮೀನಿನಲ್ಲಿ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿ ಬಾಳೆ ಬೆಳೆದಿದ್ದರು. ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು 1500 ಬಾಳೆ ಗಿಡಗಳನ್ನು ಪೋಷಿಸಿದ್ದರು. ಶ್ರಾವಣ ಮಾಸದ ಹಬ್ಬಗಳ ಸಂದರ್ಭದಲ್ಲಿ ಬಾಳೆಯನ್ನು ಮಾರುಕಟ್ಟೆಗೆ ತಂದು ಲಾಭ ಪಡೆಯಬೇಕೆಂಬ ದೊಡ್ಡ ಕನಸನ್ನು ಚಂದ್ರಪ್ಪ ಹೊಂದಿದ್ದರು. ನಿನ್ನೆ ಸಂಜೆಯವರೆಗೂ ಸಮೃದ್ಧವಾಗಿ ಬೆಳೆದು ನಿಂತಿದ್ದ ಬಾಳೆ ತೋಟ, ಇಂದು ಬೆಳಗಾಗುವಷ್ಟರಲ್ಲಿ ಸ್ಮಶಾನದಂತಾಗಿದೆ.
15 ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತ:
ಬಾಳೆ ಗಿಡಗಳು ಈಗಾಗಲೇ ಗೊನೆಯೊಡೆದು ಸಮೃದ್ಧವಾಗಿ ಬೆಳೆಯುತ್ತಿದ್ದವು. ಈ ಬೆಳೆಯಿಂದ ಸುಮಾರು 10 ರಿಂದ 15 ಲಕ್ಷ ರೂಪಾಯಿ ಆದಾಯ ಬರುವ ನಿರೀಕ್ಷೆಯಲ್ಲಿ ರೈತ ಚಂದ್ರಪ್ಪ ಇದ್ದರು. ಆದರೆ, ಕಿಡಿಗೇಡಿಗಳು 1500 ಗಿಡಗಳಲ್ಲಿ ಒಂದೇ ಒಂದು ಗಿಡವನ್ನೂ ಬಿಡದಂತೆ ಬುಡಕ್ಕೇ ಕತ್ತರಿಸಿ ಹಾಕಿ ವಿಕೃತಿ ಮೆರೆದಿದ್ದಾರೆ. ಇಡೀ ತೋಟದಲ್ಲಿ ಬಾಳೆ ಗಿಡಗಳು ನೆಲಕ್ಕುರುಳಿ ಬಿದ್ದಿರುವ ದೃಶ್ಯವನ್ನು ಕಂಡು ಅನ್ನದಾತ ಚಂದ್ರಪ್ಪ ಸ್ಥಳದಲ್ಲೇ ಕುಳಿತು ಗೋಳಾಡಿದ್ದಾರೆ.
ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು:
ತನ್ನ ಕಷ್ಟದ ಬೆಳೆ ನಾಶವಾಗಿರುವುದನ್ನು ಕಂಡು ಕಂಗಾಲಾಗಿರುವ ರೈತ ಚಂದ್ರಪ್ಪ, ಕೂಡಲೇ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯಾರ ಜೊತೆಗಿನ ವೈಷಮ್ಯ ಅಥವಾ ಇನ್ಯಾವುದೇ ಕಾರಣಕ್ಕೆ ಈ ಕೃತ್ಯ ನಡೆದಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕಣ್ಣೆದುರೇ ಮಗುವಿನಂತೆ ಬೆಳೆಸಿದ ಬೆಳೆ ನಾಶವಾಗಿರುವುದು ರೈತನ ಕುಟುಂಬವನ್ನು ಆಘಾತಕ್ಕೆ ತಳ್ಳಿದೆ.
ಗ್ರಾಮಸ್ಥರ ಆಕ್ರೋಶ:
ಕಿಡಿಗೇಡಿಗಳ ಈ ದುಷ್ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ರೈತರು ಕಷ್ಟಪಟ್ಟು ಬೆಳೆ ಬೆಳೆದರೆ ಅದನ್ನು ನಾಶಪಡಿಸುವ ಇಂತಹ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಸಾಲ ಮಾಡಿ ಬೆಳೆ ಬೆಳೆದಿದ್ದ ರೈತನಿಗೆ ಈಗ ದಿಕ್ಕೇ ತೋಚದಂತಾಗಿದೆ. ಸರ್ಕಾರ ಮತ್ತು ಕೃಷಿ ಇಲಾಖೆ ತಕ್ಷಣವೇ ಸ್ಪಂದಿಸಿ ರೈತನಿಗೆ ಸೂಕ್ತ ಪರಿಹಾರ ನೀಡಬೇಕು' ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಒಟ್ಟಾರೆಯಾಗಿ, ರೈತನ ಬದುಕಿನ ಜೊತೆ ಚೆಲ್ಲಾಟವಾಡಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರಿಗೆ ಕಾನೂನಿನ ಅಡಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.


