ಚಾಮರಾಜನಗರ ಜಿಲ್ಲೆಯ ಪಣ್ಯದಹುಂಡಿ ಬಳಿ ರೈಲು ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿವಾದಕ್ಕೆ ಗುರಿಯಾಗಿದೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಜು.06): ಚಾಮರಾಜನಗರ ಜಿಲ್ಲೆಯ ಪಣ್ಯದಹುಂಡಿ ಬಳಿ ರೈಲು ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿವಾದಕ್ಕೆ ಗುರಿಯಾಗಿದೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶ ಹೊರಹಾಕಿ ವಿರೋಧ ವ್ಯಕ್ತಪಡಿಸಿದರೂ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಕಾಮಗಾರಿ ಆರಂಭಿಸಲಾಗಿದೆ. ಅಷ್ಟಕ್ಕು ಗ್ರಾಮಸ್ಥರ ವಿರೋಧಕ್ಕೆ ಕಾರಣವೇನು ಅವರ ಒತ್ತಾಯವೇನು ಈ ಸ್ಟೋರಿ ನೋಡಿ.
ಹೌದು, ಚಾಮರಾಜನಗರ-ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಗ್ರಾಮದಲ್ಲಿ ಭಾರೀ ಹೈಡ್ರಾಮವೇ ಸೃಷ್ಟಿಯಾಗಿದೆ. ಈ ರಸ್ತೆಯ ನಡುವೆ ಇರುವ ರೈಲು ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಾಣದ ಕಾಮಗಾರಿಯನ್ನು ಸುತ್ತಮುತ್ತಲ ಗ್ರಾಮಸ್ಥರ ವಿರೋಧದ ನಡುವೆಯು ಭಾರೀ ಪೋಲಿಸ್ ಬಂದೋ ಬಸ್ತ್ನೊಂದಿಗೆ ಆರಂಭಿಸಲಾಯಿತು. ಆದರೆ ಸರ್ಕಾರದ ನಡೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ರೊಚ್ಚಿಗೆದ್ದ ಪಣ್ಯದಹುಂಡಿ ಹಾಗೂ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಮೈಸೂರು-ಚಾಮರಾಜನಗರ ಮುಖ್ಯ ರಸ್ತೆಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರ ಮುಖ್ಯ ಬೇಡಿಕೆ ಏನೆಂದರೆ, ಇಲ್ಲಿ ಮೊದಲು ಅಂಡರ್ ಪಾಸ್ (Underpass) ನಿರ್ಮಿಸಬೇಕು, ಆನಂತರವಷ್ಟೇ ಮೇಲ್ಸೇತುವೆ ಕಾಮಗಾರಿ ಆರಂಭಿಸಬೇಕು ಎಂಬುದು. ಒಂದು ವೇಳೆ ಅಂಡರ್ ಪಾಸ್ ನಿರ್ಮಾಣ ಮಾಡದೇ ಕೇವಲ ಮೇಲ್ಸೇತುವೆ ನಿರ್ಮಿಸಿದರೆ, ಪಣ್ಯದಹುಂಡಿ, ದಾಸನೂರು, ತೊರವಳ್ಳಿ, ಹೊಮ್ಮ, ಪಿ.ಮರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಏಳೆಂಟು ಗ್ರಾಮಗಳಿಗೆ ಇರುವ ಪ್ರಮುಖ ಸಂಪರ್ಕವೇ ಕಡಿತಗೊಳ್ಳುವ ಆತಂಕ ಎದುರಾಗಿದೆ. ಅಷ್ಟೇ ಅಲ್ಲದೇ, ಪಕ್ಕದ ಬೇರೆ ಬೇರೆ ಗ್ರಾಮಗಳಿಗೆ ಹೋಗಬೇಕಾದರೂ ಜನರು 5 ರಿಂದ 6 ಕಿಲೋಮೀಟರ್ ಸುತ್ತಿ ಬಳಸಿ ಹೋಗಬೇಕಾಗುತ್ತದೆ ಎಂದು ಗ್ರಾಮಸ್ಥರ ಅಳಲಾಗಿದೆ..
ಗ್ರಾಮಸ್ಥರ ಆಕ್ರೋಶ ಕೇವಲ ರಸ್ತೆ ಸಂಪರ್ಕಕ್ಕೆ ಮಾತ್ರ ಸೀಮಿತವಾಗಿಲ್ಲ. ಭೂಸ್ವಾಧೀನ ಪ್ರಕ್ರಿಯೆಯಲ್ಲೂ ಅಧಿಕಾರಿಗಳು ಭಾರೀ ತಾರತಮ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರೈಲ್ವೆ ಮೇಲ್ಸೇತುವೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ಪಕ್ಕದಲ್ಲೇ ಇರುವ ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಒಂದು ಗುಂಟೆ ಜಮೀನಿಗೆ 7 ಲಕ್ಷ ರೂಪಾಯಿ ನಿಗದಿಪಡಿಸಿದ್ದರೆ, ಇಲ್ಲಿ ರೈತರ ಜಮೀನಿಗೆ ಕೇವಲ 1 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಈ ತಾರತಮ್ಯ ನೀತಿಯನ್ನು ಖಂಡಿಸಿರುವ ಗ್ರಾಮಸ್ಥರು, ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ..
ಸದ್ಯ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದರೂ, ಗ್ರಾಮಸ್ಥರು ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮದ ಸಂಪರ್ಕವನ್ನೇ ಕಡಿತಗೊಳಿಸಲು ಹೊರಟಿರುವ ಅಧಿಕಾರಿಗಳ ವಿರುದ್ದ ಮತ್ತು ಭೂಸ್ವಾಧೀನ ಪ್ರಕ್ರಿಯೆಯ ತಾರತಮ್ಮ ನೀತಿ ವಿರುದ್ದ ಜನಾಕ್ರೋಶ ವ್ಯಕ್ತವಾಗಿದ್ದು ಹೋರಾಟ ತೀವ್ರಗೊಳಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.


