*  ಮುಷ್ಕರದಲ್ಲಿ ಭಾಗಿಯಾಗದಿದ್ರೂ ಕೆಲಸದಿಂದ ವಜಾ*  ದಯಾಮರಣ ಕೊಡಿ ಎಂದು ಬರೆದ ಪತ್ರ *  ಯಾವುದೇ ಆತುರದ ನಿರ್ಧಾರ ಕೈಗೊಳ್ಳಬೇಡಿ ನಾನು ನಿಮ್ಮೊಂದಿಗೆ ಇದ್ದೇ‌ನೆ: ಶ್ರೀರಾಮುಲು 

ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಮೇ.10): ಸಾರಿಗೆ ನೌಕರರು ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಎರಡು ಬಾರಿ ಮುಷ್ಕರ ಮಾಡಿದ್ರು ಸರ್ಕಾರ ಮಾತ್ರ ಸೊಪ್ಪು ಹಾಕಲೇ ಇಲ್ಲ. ಇತ್ತ ನಿಗಮಗಳು ಮಾತ್ರ ಡಿಸ್ಮಿಸ್ ಮಾಡಿ ನೌಕರರನ್ನು ಗೇಟ್ ಪಾಸ್ ‌ನೀಡಿತ್ತು. ಆದರೆ ಕೇವಲ ಟ್ರೈನಿ ಡ್ರೈವರ್‌ಗಳನ್ನು ಮಾತ್ರ ನಿಗಮ ವಾಪಸ್ ಕರೆಸಿಕೊಳ್ತಿದೆ. ಇತ್ತ ವಜಾಗೊಂಡ ನೌಕರರನ್ನು ವಾಪಸ್ ಕರೆಸಿಕೊಳ್ತಿಲ್ಲ. ಈ ಹಿನ್ನೆಲೆಯಲ್ಲಿ ವಜಾಗೊಂಡ ಡ್ರೈವರ್ ಒಬ್ಬ ರಾಷ್ಟ್ರಪತಿ, ಪ್ರಧಾನಿ ಮೋದಿಗೆ ಪತ್ರ ಬರೆದು ದಯಾಮರಣ ಕೇಳಿದ್ದಾನೆ. 

ಸಾರಿಗೆ ನೌಕರರಿಗೆ ಸರ್ಕಾರಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 2021ರ ಏಪ್ರಿಲ್ ತಿಂಗಳಲ್ಲಿ ಪ್ರತಿಭಟನಾನಿರತರು ಮುಷ್ಕರವನ್ನ ನಡೆಸಿ ದೊಡ್ಡ ಸಮಸ್ಯೆ ಸೃಷ್ಟಿಯಾಗಿತ್ತು. ಬರೋಬ್ಬರಿ 14 ದಿನಗಳ ಕಾಲ ನಡೆದ ಮುಷ್ಕರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುವಂತೆ ಮಾಡಿತ್ತು. ಇದರಿಂದ ಸಾರಿಗೆ ನೌಕರರ ವಿರುದ್ಧ ಕೆಂಡಮಂಡಲವಾಗಿದ್ದ ಸರ್ಕಾರ ಮುಷ್ಕರದಲ್ಲಿ ಭಾಗಿಯಾಗಿದ್ದ 4 ಸಾವಿರಕ್ಕೂ ಹೆಚ್ಚು ನೌಕರರನ್ನು ವಜಾ ಮಾಡಿತ್ತು. ಬಿಎಂಟಿಸಿ ಒಂದರಲ್ಲೇ 2 ಸಾವಿರ ನೌಕರರನ್ನು ವಜಾ ಮಾಡಿದ್ದು, ಅದರಲ್ಲಿ ಬಿಎಂಟಿಸಿಯ 800 ತರಬೇತಿ ನೌಕರರನ್ನು ವಾಪಸ್ ಕರೆಸಿಕೊಂಡಿದ್ದಾರೆ. ಇನ್ನುಳಿದ 1200 ನೌಕರರಿಗೆ ಕೆಲಸ ಇಲ್ಲದೆ ಈವರೆಗೂ ಕೆಲಸವಿಲ್ಲದೆ ಪರದಾಡ್ತಿದ್ದಾರೆ. 

ಸಾರಿಗೆ ನೌಕರರಿಗೆ ಗುಡ್‌ನ್ಯೂಸ್: ಸಂಬಳ ಏರಿಕೆಗೆ ಮುಂದಾದ ಸರ್ಕಾರ

ಬೇಸತ್ತ ಸಾರಿಗೆ ನೌಕರರ ಆತ್ಮಹತ್ಯೆ ಪ್ರಕರಣಗಳು ಸುದ್ದಿಯಾಗ್ತಾನೆ ಇದೆ. ಇದೀಗ ಬೇಸತ್ತ ನೌಕರನೊಬ್ಬ ಪ್ರಧಾನಿಗೆ ದಯಾಮರಣ ಪತ್ರ ಬರೆದಿದ್ದಾರೆ. ತಿನ್ನೋಕೆ ಒಪ್ಪೊತ್ತಿನ ಊಟಕ್ಕೂ ಕಾಡಿ ಬೇಡಿ ತಿನ್ನುವಂತಾಗಿದೆ. ಕಳೆದ ಒಂದು ವರ್ಷದಿಂದ ನೌಕರಿ ಇಲ್ಲದೆ ನರಕ ಅನುಭವಿಸುವಂತಾಗಿದೆ. ಪ್ರತಿಭಟನೆ, ಮುಷ್ಕರದಲ್ಲಿ ನಾನು ಭಾಗಿಯಾಗಿಲ್ಲದಿದ್ದರೂ ನನ್ನ ಕೆಲಸ ಹೋಗಿದೆ. ಹೀಗಾಗಿ ಸಾವು ಬಿಟ್ಟರೆ ಬೇರೆ ದಾರಿ ಇಲ್ಲ, ಮುಷ್ಕರದಲ್ಲಿ ಭಾಗಿಯಾದ ಕೆಲವರಿಗೆ ಮತ್ತೆ ಕೆಲಸ ಸಿಕ್ಕಿ ಅವರ ಬದುಕು ಚೆನ್ನಾಗಿದೆ ಆದ್ರೆ ನನಗ್ಯಾಕೆ ಇಂತಹ ಶಿಕ್ಷೆ ಎಂದು ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ. ಇದೀಗ ನನಗೆ ಬೇರೆ ದಾರಿಯಿಲ್ಲ, ದಯವಿಟ್ಟು ದಯಾಮರಣ ಕಲ್ಪಿಸಿ ಎಂದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸೇರಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾರಿಗೆ ಸಚಿವ ಶ್ರೀರಾಮುಲು, ರಾಜಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರಿಗೆ ವಜಾಗೊಂಡ ಶಂಬುಲಿಂಗಯ್ಯ ಮಠ ಎಂಬುವವರು ಪತ್ರ ಬರೆದಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ರಾಜ್ಯಾದ್ಯಂತ ರಿಯಾಯಿತಿ ದರದಲ್ಲಿ ಬಸ್‌ ಪಾಸ್‌!

ಅಲ್ಲದೆ ವಜಾಗೊಂಡ ನೌಕರ ಶಂಭುಲಿಂಗಯ್ಯ ನಾನು ಸತ್ತರೆ ಸರ್ಕಾರ ಮತ್ತು ಬಿಎಂಟಿಸಿ ಹೊಣೆ. ಒಂದು ವರ್ಷದಿಂದ ಕೆಲಸವಿಲ್ಲದೆ ನೊಂದಿದ್ದು, ಮರು ಕೆಲಸಕ್ಕಾಗಿ ಅಲೆಯದ ಕಚೇರಿ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಕೊನೆಯದಾಗಿ ಸಾವೇ ದಾರಿ ಎಂದು ನಿರ್ಣಯಿಸಿರುವ ಇವರು ದಯಾಮರಣಕೋರಿ, ಪತ್ರ ಬರೆದಿದ್ದಾರೆ. ಸದ್ಯ ಅಂತಿಮವಾಗಿ ನಾನು ಏನಾದ್ರು ಪ್ರಾಣಬಿಟ್ಟರೆ ನನ್ನ ಸಾವಿಗೆ ಸರ್ಕಾರ ಮತ್ತು ಬಿಎಂಟಿಸಿಯೇ ನೇರ ಹೊಣೆ ಎಂದು ದೂರಿದ್ದಾರೆ.

ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ಶ್ರೀ ರಾಮುಲು, ಈ ಪತ್ರ ನನಗೆ ತಲುಪಿದೆ. ನಾನು ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಯಾವುದೇ ಆತುರದ ನಿರ್ಧಾರ ಕೈಗೊಳ್ಳಬೇಡಿ ನಾನು ನಿಮ್ಮೊಂದಿಗೆ ಇದ್ದೇ‌ನೆ ಎಲ್ಲರನ್ನೂ ವಾಪಸ್ ಕರೆಸಿಕೊಳ್ತಿನಿ‌ ಎಂದು ಭರವಸೆ ನೀಡಿದ್ದಾರೆ.