* ಬಿಎಂಟಿಸಿ ವ್ಯಾಪ್ತಿಯ ರಿಯಾಯಿತಿ ಬಸ್‌ ಪಾಸ್‌ ರಾಜ್ಯಕ್ಕೆ ವಿಸ್ತರಣೆ* ಕಟ್ಟಡ ಕಾರ್ಮಿಕರಿಗೆ ರಾಜ್ಯಾದ್ಯಂತ ರಿಯಾಯಿತಿ ದರದಲ್ಲಿ ಬಸ್‌ ಪಾಸ್‌* ಬಜೆಟ್‌ ಘೋಷಣೆಗೆ ಅನುಷ್ಠಾನಕ್ಕೆ ಸರ್ಕಾರ ಆದೇಶ

ಬೆಂಗಳೂರುಏ.25): ರಾಜ್ಯ ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿ (ಬೆಂಗಳೂರು) ವ್ಯಾಪ್ತಿಯಲ್ಲಿ ನೀಡುತ್ತಿದ್ದ ರಿಯಾಯಿತಿ ದರದ ಬಸ್‌ ಪಾಸ್‌ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಯೋಜನೆ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.

Add Asianetnews Kannada as a Preferred SourcegooglePreferred

ಬಜೆಟ್‌ನಲ್ಲಿ ಘೋಷಿಸಿದಂತೆ ರಾಜ್ಯಾದ್ಯಂತ ಬಸ್‌ ಪಾಸ್‌ ಯೋಜನೆ ವಿಸ್ತರಿಸಲು ಆರ್ಥಿಕ ಇಲಾಖೆಯು ಏ.16 ರಂದು ಅನುಮೋದನೆ ನೀಡಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಕಟ್ಟಡ ಕಾರ್ಮಿಕರು ಪ್ರಯಾಣಿಸಲು ರಿಯಾಯಿತಿ ದರದ ಬಸ್‌ ಪಾಸು ನೀಡಬಹುದು. ಆದರೆ ರಾಜ್ಯ ಸರ್ಕಾರದಿಂದ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಇಟ್ಟಿಲ್ಲ. ಹೀಗಾಗಿ ಕಾರ್ಮಿಕ ಕಲ್ಯಾಣ ಮಂಡಳಿಯ ಅನುದಾನವನ್ನೇ ಬಳಸಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಷರತ್ತು ಬದ್ಧ ಒಪ್ಪಿಗೆ ನೀಡಲಾಗಿದೆ.

ಈ ವೇಳೆ ಕೆಟಿಟಿಪಿ ಕಾಯಿದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯೋಜನೆಯನ್ನು ಜಾರಿಗೊಳಿಸುವ ವೆಚ್ಚವನ್ನು ಮಂಡಳಿ ನಿಧಿಯಿಂದ ಭರಿಸಬೇಕು. 10 ಕೋಟಿ ರು.ಗೂ ಹೆಚ್ಚು ಮೊತ್ತ ವೆಚ್ಚವಾದರೆ ಸಚಿವ ಸಂಪುಟದಿಂದ ಅನುಮೋದನೆ ಪಡೆಯಬೇಕು. ಯೋಜನೆಗೆ ಬಾಹ್ಯ ವ್ಯಕ್ತಿಗಳಿಂದ (ಥರ್‌್ಡ ಪಾರ್ಟಿ) ಪರಿಶೀಲನೆಗೆ ಒಳಪಡಿಸಬೇಕು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದ್ದು, ಇದರಂತೆ ಕ್ರಮ ಕೈಗೊಂಡು ಯೋಜನೆ ಅನುಷ್ಠಾನಗೊಳಿಸುವಂತೆ ಕಾರ್ಮಿಕ ಇಲಾಖೆಯು ಕಾರ್ಮಿಕರ ಕಲ್ಯಾಣ ಮಂಡಳಿಗೆ ಸೂಚನೆ ನೀಡಿದೆ.