ಬೆಳಗಾವಿ; 'ನನ್ನ ಹೊಲದಲ್ಲಿದ್ದ ಬಾವಿ ಕಾಣೆಯಾಗಿದೆ, ಹುಡುಕಿಕೊಡಿ'
* ಭ್ರಷ್ಟಾಚಾರದ ಇನ್ನೊಂದು ಮುಖ ಅನಾವರಣ
* ಬಾವಿ ಕಾಣೆಯಾಗಿದೆ ಎಂದು ದೂರು ತಂದ ಅನ್ನದಾಥ
* ನಕಲಿ ನರೇಗಾ ಬಿಲ್ ಮಾಡಿ ಹಣ ಗುಳುಂ ಮಾಡಿದ ಅಧಿಕಾರಿಗಳು
* ಬೆಳಗಾವಿ ಜಿಲ್ಲೆಯ ಪ್ರಕರಣ ದೊಡ್ಡ ಸುದ್ದಿ
ಬೆಳಗಾವಿ(ಜು. 05) ಇವರ ಹೆಸರು ಮಲ್ಲಪ್ಪ ಕುಲಗುಡೆ ಅಂತ. ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಭೆಂಡವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಹೊಂಡ ಗ್ರಾಮದ ನಿವಾಸಿ.
ಈ ರೈತನ ಸರ್ವೆ ನಂಬರ್ 21/1 ರಲ್ಲಿ ಸರ್ಕಾರದಿಂದ ಬಾವಿ ತೋಡಲಾಗಿದೆ ಅಂತ ಭೆಂಡವಾಡ ಗ್ರಾಮ ಪಂಚಾಯತ್ನಲ್ಲಿ 77 ಸಾವಿರ ರೂಪಾಯಿ ನಕಲಿ ಬಿಲ್ ತೆಗೆದು, ಅಧಿಕಾರಿಗಳು ಆ ಹಣವನ್ನ ತಿಂದು ತೇಗಿದ್ದಾರೆ. ಆದರೆ ಮಲ್ಲಪ್ಪನ ಹೊಲದಲ್ಲಿ ಯಾವುದೇ ಬಾವಿ ತೋಡಲಾಗಿಲ್ಲ. ಇದು ಮಲ್ಲಪ್ಪನ ಗಮನಕ್ಕೆ ಬಂದಿದ್ದು, ಮಲ್ಲಪ್ಪ ಅದಕ್ಕೆ ಸಂಬಧಿಸಿದ ಬಿಲ್ ಹಿಡಿದು ಈಗ ಅಧಿಕಾರಿಗಳಿಗೆ ಬಾವಿ ಹುಡುಕಿಕೊಡಿ ಅಂತ ಮನವಿ ಸಲ್ಲಿಸಿದ್ದಾರೆ.
ವಕೀಲರ ವೇಷ ಧರಿಸಿ ಕೋರ್ಟ್ ಗೆ ಶರಣಾದರು
ಹೌದು ಅಧಿಕಾರಿಗಳು ಮಲ್ಲಪ್ಪನ ಹೊಲದಲ್ಲಿ ತೆರೆದ ಬಾವಿ ತೆಗೆಯಲಾಗಿದೆ ಅಂತ ನರೇಗಾ ಅಡಿಯಲ್ಲಿ ಕೆಲಸ ಮಾಡಿ, ನರೇಗಾ ಬಿಲ್ ಸೃಷ್ಟಿ ಮಾಡಿ 77 ಸಾವಿರ ರೂಪಾಯಿ ಗುಳುಂ ಮಾಡಿದ್ದಾರೆ ಎಂದು ಮಲ್ಲಪ್ಪ ನೀಡಿರುವ ದಾಖಲೆಗಳು ಸ್ಪಷ್ಟವಾಗಿ ಹೇಳುತ್ತಿವೆ. ಕಳೆದ ನಲವತ್ತು ವರ್ಷಗಳ ಹಿಂದೆ ಮಲ್ಲಪ್ಪನ ಹಿರಿಯರು ತೆಗೆಸಿದ ಬಾವಿಯೊಂದು ಬಿಟ್ಟು ಸರ್ಕಾರದಿಂದ ನಮ್ಮ ಗದ್ದೆಯಲ್ಲಿ ಯಾವುದೇ ಬಾವಿ ನಿರ್ಮಾಣ ಆಗಿಲ್ಲ ಅಂತ ಮಲ್ಲಪ್ಪ ಹೇಳುತ್ತಿದ್ದಾರೆ. ಈ ಬಗ್ಗೆ ಭೆಂಡವಾಡ ಗ್ರಾಮ ಪಂಚಾಯತ್ ಪಿಡಿಒ ಕೇಳಿದರೆ, ನಾನು ಈ ಪಂಚಾಯ್ತಿಗೆ ಬಂದು ಕೇವಲ ಒಂದು ವಾರ ಆಯ್ತು ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಅಂತ ಉತ್ತರ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಇಂತಹ ವಿಚಿತ್ರ ಮತ್ತು ವಿಲಕ್ಷಣ ಘಟನೆಗಳನ್ನು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಜನ ನೋಡುತ್ತಿದ್ದರು. ಆದರೆ ದುರಾದೃಷ್ಟವಶಾತ್ ಇಂತಹ ಘಟನೆ ಈಗ ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವುದು ವ್ಯವಸ್ಥೆ ಮತ್ತು ಅಧಿಕಾರಿಗಳ ಲಂಚಬಾಕತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.