ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಚಕ್ರ ಹರಿದು ಬೈಕ್ ಸವಾರ ಸಾವು
ಜೀವನಭೀಮಾನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ: ಬಸ್ ಚಾಲಕನನ್ನು ವಶಕ್ಕೆ ಪಡೆದು ಪೊಲೀಸ್ ವಿಚಾರಣೆ
ಬೆಂಗಳೂರು(ನ.25): ಕೆಎಸ್ಆರ್ಟಿಸಿ ಬಸ್ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರನ ತಲೆ ಮೇಲೆ ಬಸ್ ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜೀವನಭೀಮಾನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಅರೀಸ್ (26) ಮೃತ ಸವಾರ. ನಗರದ ವೈಟ್ಫೀಲ್ಡ್ನಲ್ಲಿ ಪಾದರಕ್ಷೆ ಅಂಗಡಿ ಇರಿಸಿಕೊಂಡಿರುವ ಅರೀಸ್, ಬುಧವಾರ ಸಂಜೆ 6.45ರ ಸುಮಾರಿಗೆ ಹಳೇ ವಿಮಾನ ನಿಲ್ದಾಣ ರಸ್ತೆಯ ನಿರ್ಗಮನ ದ್ವಾರದ ಬಳಿ ಹೋಗುವಾಗ ಈ ದುರ್ಘಟನೆ ನಡೆದಿದೆ.
Udupi: ಮದುವೆ ಮನೆಯಲ್ಲಿ ಯುವತಿ ಸಾವು: ದುರ್ಘಟನೆಗೆ ಕಂಬನಿ ಮಿಡಿದ ಜನತೆ
ಎಚ್ಎಎಲ್ ಕಡೆಯಿಂದ ಇಸ್ರೋ ಕಡೆಗೆ ಅತಿವೇಗವಾಗಿ ಬಂದ ಬಸ್, ಹಿಂದಿನಿಂದ ಅರೀಸ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಯ ಎಡಭಾಗಕ್ಕೆ ಸವಾರ ಅರೀಸ್ ಬಿದ್ದಿದ್ದಾನೆ. ಈ ವೇಳೆ ಬಸ್ನ ಮುಂಭಾಗದ ಬಲ ಚಕ್ರ ಅರೀಸ್ನ ತಲೆ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತಕ್ಕೆ ಕೆಎಸ್ಆರ್ಟಿಸಿ ಬಸ್ನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಬಸ್ನ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಜೀವನಭೀಮಾನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.