ಟೌನ್‌ಶಿಪ್ ಮಾಡಲು ಬಿಡದಿಯಲ್ಲಿ ರೈತರಿಗೆ ಎಕರೆಗೆ ₹2.07 ಕೋಟಿ ನೀಡುವಾಗ, ವಿಂಡ್ ಪವರ್ ಕಂಪನಿಗಳಿಗೆ ಜಮೀನು ನೀಡಿದ ಆಳಂದ ರೈತರಿಗೆ ಕೇವಲ ₹2-4 ಲಕ್ಷ ನೀಡುವುದು ತಾರತಮ್ಯ ಅಲ್ಲವೇ? ಮುಖ್ಯಮಂತ್ರಿಗಳೇ ಬಿಡದಿಗೊಂದು ನ್ಯಾಯ, ಆಳಂದ ರೈತರಿಗೊಂದು ನ್ಯಾಯವಾ? ಎಂದು ಬಿಜೆಪಿ ಮುಖಂಡ ಪ್ರಶ್ನಿಸಿದ್ದಾರೆ.

-ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಸಿದ್ದು ಹಿರೋಳಿ ಪ್ರಶ್ನೆ

----

 ಆಳಂದ (ಜು.2): ರೈತರ ಜಮೀನು ಖರೀದಿಸುವಲ್ಲಿ ಸರ್ಕಾರ ಬಿಡದಿಗೊಂದು ನ್ಯಾಯ ಆಳಂದಗೊಂದು ನ್ಯಾಯ ಪದ್ಧತಿ ಅನುಸರಿಸುತ್ತಿರುವುದು ಸರಿಯೇ ಎಂದು ಕಲಬುರಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಸಿದ್ದು ಹಿರೋಳಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧುವಾರ ಆಳಂದ ತಹಸೀಲದಾರ್‌ರ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಹಲವು ವಿಷಯ ಪ್ರಸ್ತಾಪಿಸುರುವ ಅವರು, ಆಳಂದ ತಾಲೂಕಿನಲ್ಲಿ ವಿಂಡ್ ಪವರ್ ಕಂಪನಿಗಳಿಂದ ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಗಡಿಭಾಗದ ಬಡ ರೈತರಿಗೆ ನ್ಯಾಯ ದೊರಕಿಸಿ ಕೊಡಲು ಒತ್ತಾಯಿಸಿದ್ದಾರೆ.

ಆಳಂದ ತಾಲೂಕಿನಲ್ಲಿ 2-3 ವರ್ಷಗಳಿಂದ ವಿಂಡ್ ಪವರ್ ಕಂಪನಿಯವರು ರೈತರ ಜಮೀನಿಗಳಲ್ಲಿ ಪವನ ವಿದ್ಯುತ್ ಉತ್ಪಾದನಾ ಘಟಕಗಳನ್ನು ಕೂಡಿಸುತ್ತಿದ್ದಾರೆ. ಒಂದು ಘಟಕಕ್ಕೆ 10.00 ಎಕರೆ ಜಮೀನು ಖರೀದಿಸಬೇಕೆಂಬ ನಿಯಮವಿದ್ದರೂ ಕಂಪನಿಯವರು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ದಲ್ಲಾಳಿಗಳ ಮುಖಾಂತರ ಮನಸೋ ಇಚ್ಚೇ ರೈತರ ಜಮೀನು ಕಬಳಿಸುತ್ತಿದ್ದಾರೆ. ರೈತರ ಗೋಳು ಕೇಳುವರ್ಯಾರು? ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿಗೆ ಬಾಗಲಕೋಟೆ ಉಪಚುನಾವಣೆಗೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗುವ ನೀರಾವರಿ ಜಮೀನಿಗೆ ₹40.00 ಲಕ್ಷ ಪ್ರತಿ ಎಕರೆಗೆ ಒಣ ಬೇಸಾಯ ಜಮೀನಿಗೆ ₹30 ಲಕ್ಷ. ಪ್ರತಿ ಎಕರೆಗೆ ನೀಡುವುದಾಗಿ ಸರ್ಕಾರದ ನಿರ್ಧಾರ ತಿಳಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಬಿಡದಿ ಟೌನಶಿಪ್‍ನಲ್ಲಿ ಜಮೀನು ಕಳೆದುಕೊಳ್ಳುತ್ತಿರುವ ರೈತರಿಗೆ ಒಂದು ಎಕರೆಗೆ ₹2.07 ಕೋಟಿ ಚೆಕ್‌ ಗಳನ್ನು ರೈತರಿಗೆ ನೀಡುತ್ತಿರುವುದು ನೋಡಿ ನಮ್ಮ ಬಾಯಿಗೆ ನೀರು ಬರುತ್ತಿದೆ ಎಂದು ಹೇಳಿದ್ದಾರೆ.

ಹಾಗಾದರೇ ಕಲ್ಯಾಣ ಕರ್ನಾಟಕದ ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಆಳಂದ ತಾಲೂಕಿನ ನಾವುಗಳು ಕೇವಲ 2.00 ಲಕ್ಷ, 4.00 ಲಕ್ಷ ಪ್ರತಿ ಎಕರೆಗೆ ಪಡೆದುಕೊಂಡು ಜಮೀನು ನೀಡಲು ನಾವುಗಳು ಪಾಪಿಗಳೇ, ದಿಕ್ಕಿಲ್ಲದವರೇ ಎಂಬ ವ್ಯಥೆ ನಮ್ಮ ರೈತರನ್ನು ಕಾಡುತ್ತಿದೆ. ಆದ್ದರಿಂದ, ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಭಾಗದ ರೈತರಿಗೆ ಪ್ರತಿ ಎಕರೆಗೆ 2 ಕೋಟಿ ನೀಡುವಂತೆ ವಿನಂತಿಸಿಕೊಂಡಿದ್ದಾರೆ.

ನಿಯೋಗದಲ್ಲಿ ಮುಖಂಡರಾದ ಅಜಿತ್‌ ಕುಲಕರ್ಣಿ, ಈರಣ್ಣಾ ಹತ್ತರಕಿ, ಮಹೇಶ ಕೋರಳ್ಳಿ, ಮನೋಜ ಸಿಂಗೆ, ಮಹೇಶ ಪವಾರ, ಶೀರಿಷ್ ವರ್ಧಮಾನೆ, ಮೌಲಾಲಿ ಆಳಂದ, ಬಸವರಾಜ ವಾಡೇದ ಇದ್ದರು.