Asianet Suvarna News Asianet Suvarna News

Bengaluru Traffic Police: ಹಳೆ ಬಾಕಿ ವಸೂಲಿಗೆ RTO ಕಚೇರಿ ಬಳಿ ಪೊಲೀಸರ ಠಿಕಾಣಿ

*  ನೋಟಿಸ್‌ ನೀಡಿದ್ದರೂ ದಂಡ ಕಟ್ಟದವರಿಗೆ ಬಿಸಿ
*  ವಾಹನಗಳನ್ನು ಅಡ್ಡಗಟ್ಟುವುದರಿಂದ ಅನಗತ್ಯ ಸಂಚಾರ ದಟ್ಟಣೆ ಸೃಷ್ಟಿ
*  ನೋಟಿಸ್‌ಗೆ ಬಹುತೇಕ ಮಂದಿ ನಿರ್ಲಕ್ಷ್ಯ

Bengaluru Traffic Police Master Plan to Pending  Cases in RTO grg
Author
Bengaluru, First Published Feb 5, 2022, 7:56 AM IST | Last Updated Feb 5, 2022, 7:56 AM IST

ಬೆಂಗಳೂರು(ಫೆ.05): ಹಳೇ ‘ಬಾಕಿ’ ವಸೂಲಿಗೆ ಸಂಚಾರ ಪೊಲೀಸರು(Traffic Police) ಮಾಸ್ಟರ್‌ ಪ್ಲಾನ್‌ ಮಾಡಿದ್ದು, ಇನ್ಮುಂದೆ ಸಾರಿಗೆ ಪ್ರಾದೇಶಿಕ ಕಚೇರಿಗಳ (RTO) ಬಳಿ ಹಳೇ ಪ್ರಕರಣಗಳ ದಂಡ ವಸೂಲಿಗೆ ನಿರ್ಧರಿಸಿದ್ದಾರೆ.

ಬೆಂಗಳೂರು(Bengaluru) ನಗರ ಹಾಗೂ ನಗರಕ್ಕೆ ಹೊಂದಿರುವ ಗ್ರಾಮಾಂತರ ವ್ಯಾಪ್ತಿಯಲ್ಲಿ 10 ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಅರ್ಹತಾ ಪತ್ರ ನವೀಕರಣ ಸೇರಿದಂತೆ ವಿವಿಧ ಕೆಲಸಗಳಿಗೆ ವಾಣಿಜ್ಯ ವಾಹನಗಳು ಮತ್ತು ಇತರೆ ವಾಹನಗಳು ಬರುತ್ತವೆ. ಆಗ ಆ ವಾಹನಗಳ ಮೇಲೆ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆಯ(Violation of Traffic Rules) ಪ್ರಕರಣಗಳನ್ನು ಸ್ಥಳದಲ್ಲೇ ಪರಿಶೀಲಿಸಬೇಕು. ಹಳೇ ದಂಡ ಬಾಕಿ ಉಳಿಸಿಕೊಂಡಿದ್ದರೆ ಆ ವಾಹನಗಳ ಮಾಲಿಕರಿಂದ ವಸೂಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ಡಾ.ಬಿ.ಆರ್‌.ರವಿಕಾಂತೇಗೌಡ ಸೂಚಿಸಿದ್ದಾರೆ. ಈ ಸಂಬಂಧ ಶುಕ್ರವಾರ ಮೆಮೋವನ್ನು ಠಾಣೆಗಳಿಗೆ ಜಂಟಿ ಆಯುಕ್ತರು ರವಾನಿಸಿದ್ದಾರೆ.

ಈ ದಂಡ ವಸೂಲಿ ಸಲುವಾಗಿ ಆರ್‌ಟಿಓ ಕಚೇರಿಗಳ ಬಳಿ ಸಬ್‌ ಇನ್‌ಸ್ಪೆಕ್ಟರ್‌ ಅಥವಾ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಅವರನ್ನು ಪ್ರತಿ ದಿನ ಪಾಳಿಯ ಮೇರೆಗೆ ಪಿಡಿಎ ಉಪಕರಣ ಸಹಿತ ನಿಯೋಜಿಸಬೇಕು ಹಾಗೂ ಠಾಣಾವಾರು ವಸೂಲಾದ ದಂಡ ಮೊತ್ತವನ್ನು ಜಂಟಿ ಆಯುಕ್ತರ ಕಚೇರಿಗೆ ತಿಳಿಸಬೇಕು ಎಂದು ನಿರ್ದೇಶಿಸಿದ್ದಾರೆ.

Towing Issue: ಅತಿರೇಕದ ವರ್ತನೆ ಸರಿಯಲ್ಲ, ಜನಸ್ನೇಹಿ ಮಾಡಲಿದ್ದೇವೆ: ಸಿಎಂ

ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರಕರಣಗಳನ್ನು ದಾಖಲಿಸುವುದಿಲ್ಲ. ವಾಹನಗಳನ್ನು ಅಡ್ಡಗಟ್ಟುವುದರಿಂದ ಅನಗತ್ಯ ಸಂಚಾರ ದಟ್ಟಣೆ ಸೃಷ್ಟಿಯಾಗುತ್ತದೆ. ಕಾನೂನು ಉಲ್ಲಂಘಿಸಿದ ವಾಹನಗಳಿಗೆ ಐಎಂವಿ ಕಾಯ್ದೆ 133 ಪ್ರಕಾರ ನೋಟಿಸನ್ನು ವಾಹನ ಮಾಲಿಕರಿಗೆ ನೀಡಿ ದಂಡ ಪಾವತಿಸಲು ಸೂಚಿಸಬೇಕಿದೆ. ಆದರೆ ನೋಟಿಸ್‌ ಪಡೆದ ಬೆರಳೆಣೆಕೆ ವಾಹನ ಮಾಲಿಕರು ಮಾತ್ರ ದಂಡ ಪಾವತಿಸುತ್ತಿದ್ದಾರೆ. ಬಹುತೇಕ ಮಂದಿ ನೋಟಿಸನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.

ದಂಡ ಪಾವತಿಸದ ಕಾರಣಕ್ಕೆ ಕಠಿಣ ಕ್ರಮ ಜರುಗದೇ ಇರುವುದರಿಂದ ಕೆಲವರು ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದರಿಂದ ಅಪಘಾತಗಳಿಗೆ(Accidents) ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್‌ಟಿಓ ಕಚೇರಿಗಳ ಬಳಿ ಹಳೇ ಪ್ರಕರಣಗಳ ಬಾಕಿ ದಂಡ ವಸೂಲಿಗೆ ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್‌ಟಿಓ ಕಚೇರಿಗಳು: 

ಕೋರಮಂಗಲ, ರಾಜಾಜಿನಗರ, ಕಸ್ತೂರಿ ನಗರ, ಯಶವಂತಪುರ, ಜಯನಗರ, ರಾಜರಾಜೇಶ್ವರಿ ನಗರ, ದೇವನಹಳ್ಳಿ, ಯಲಹಂಕ, ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಕೆ.ಆರ್‌.ಪುರ ಸೇರಿ ನಗರ ವ್ಯಾಪ್ತಿಯ ಹತ್ತು ಆರ್‌ಟಿಓ ಕಚೇರಿಗಳ ಬಳಿ ಸಂಚಾರ ಪೊಲೀಸರ ದಂಡ ಪ್ರಯೋಗ ನಡೆಯಲಿದೆ.

ಟೋಯಿಂಗ್‌ ರಗಳೆ: ಸಂಚಾರ ಪೊಲೀಸರಿಗೆ ಪಾಠ

ನೋ ಪಾರ್ಕಿಂಗ್‌(No Parking) ಸ್ಥಳಗಳಲ್ಲಿ ನಿಲುಗಡೆ ಮಾಡಿದ ವಾಹನಗಳ ಟೋಯಿಂಗ್‌(Towing) ವಿಚಾರ ಸಂಬಂಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ. ಬಿ.ಆರ್‌.ರವಿಕಾಂತೇಗೌಡ ಅವರು ಸಂಚಾರ ವಿಭಾಗದ ಪೊಲೀಸರ ಸಭೆ ನಡೆಸಿ ಕರ್ತವ್ಯ ನಿರ್ವಹಣೆ ವೇಳೆ ಸಾರ್ವಜನಿಕರು ಹಾಗೂ ವಾಹನ ಸವಾರರೊಂದಿಗೆ ವರ್ತನೆ ಹೇಗಿರಬೇಕು ಎಂಬುದರ ಬಗ್ಗೆ ಪಾಠ ಮಾಡಿದ್ದಾರೆ.

ನಗರದ ಅರಮನೆ ಆವರಣದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಚಾರ ವಿಭಾಗದ ಎಎಸ್‌ಐಗಳು, ಸಬ್‌ ಇನ್‌ಸ್ಪೆಕ್ಟರ್‌ಗಳು ಹಾಗೂ ಇನ್‌ಸ್ಪೆಕ್ಟರ್‌ಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.

ಸಂಚಾರ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ: ಟೋಯಿಂಗ್‌ ವ್ಯವಸ್ಥೆ ಪುನರ್‌ಪರಿಶೀಲನೆಗೆ ಸಿಎಂ ಸಭೆ

ನಗರ ಪೊಲೀಸ್‌ ಆಯುಕ್ತರ ಸೂಚನೆ ಮೇರೆಗೆ ನಡೆದ ಈ ಸಭೆಯಲ್ಲಿ ಕರ್ತವ್ಯ ನಿರ್ವಹಣೆ ವೇಳೆ ವಾಹನ ಸವಾರರು ನಿಯಮ ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಅನುಚಿತ ವರ್ತನೆ ತೋರದೆ ಸಾರ್ವಜನಿಕರ ವಿಶ್ವಾಸ ಗಳಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಪೊಲೀಸರ ನಡವಳಿಕೆ ಉತ್ತಮವಾಗಿರಬೇಕು ಎಂದು ರವಿಕಾಂತೇಗೌಡ ಅವರು ಕಿವಿಮಾತು ಹೇಳಿದರು ಎನ್ನಲಾಗಿದೆ.

ಇಲಾಖೆ ಗೌರವಕ್ಕೆ ಧಕ್ಕೆ:

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2-3 ದಿನಗಳಲ್ಲಿ ಟೋಯಿಂಗ್‌ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಎರಡು ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ. ಯಾರೋ ಒಂದಿಬ್ಬರು ಮಾಡುವ ತಪ್ಪಿಗೆ ಪೊಲೀಸ್‌ ಇಲಾಖೆ ಗೌರವಕ್ಕೆ ಧಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
 

Latest Videos
Follow Us:
Download App:
  • android
  • ios