- Home
- Karnataka Districts
- ಗ್ರೇಟರ್ ಬೆಂಗಳೂರು ಸಾಧನೆ: ಕೋಟಿ ಲೂಟಿ ಮಾಡುವ ಭ್ರಷ್ಟರ ಬಿಟ್ಟು, ಕಸ ಎಸೆದ ಜನರ ವಿರುದ್ಧ ಎಫ್ಐಆರ್ ದಾಖಲು!
ಗ್ರೇಟರ್ ಬೆಂಗಳೂರು ಸಾಧನೆ: ಕೋಟಿ ಲೂಟಿ ಮಾಡುವ ಭ್ರಷ್ಟರ ಬಿಟ್ಟು, ಕಸ ಎಸೆದ ಜನರ ವಿರುದ್ಧ ಎಫ್ಐಆರ್ ದಾಖಲು!
ಬೆಂಗಳೂರಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಿಬ್ಬಂದಿ ಸ್ವಚ್ಛಗೊಳಿಸಿದ್ದ ಸ್ಥಳದಲ್ಲಿಯೇ ಮತ್ತೆ ಕಸ ಎಸೆದ ನಾಲ್ವರು ನಿವಾಸಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ದಂಡ ಪಾವತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಘನತ್ಯಾಜ್ಯ ವಿಲೇವಾರಿ ವಿಭಾಗವು ಈ ಕ್ರಮ ಕೈಗೊಂಡಿದೆ.

ಕಳೆದ ಒಂದು ತಿಂಗಳಿನಿಂದ ಶ್ರಮ ವಹಿಸಿ ಕಸ ತೆರವುಗೊಳಿಸಿ ಸ್ವಚ್ಛಗೊಳಿಸಿದ್ದ ಸ್ಥಳಗಳಿಗೆ ಮತ್ತೆ ಕಸ ಹಾಕಿ ಪರಿಸರ ಹಾಳು ಮಾಡಿದ ನಾಲ್ಕು ಮಂದಿ ನಿವಾಸಿಗಳ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಣಸವಾಡಿಯ ರೋಷನ್, ಚಿಕನ್ ರಸ್ತೆಯ ಕಾಮರಾಜ್, ಜೈ ಜೀವನ್ ನಗರದ ವಾಸಿ ರುದ್ರ, ಕುಳ್ಳಪ್ಪ ಸರ್ಕಲ್ ನ ಮಣಿ ಎಂಬುವರ ವಿರುದ್ಧ ಸರ್ವಜ್ಞನಗರ ವಿಭಾಗದ ಘನತ್ಯಾಜ್ಯ ವಿಲೇವಾರಿ ವಿಭಾಗದ ಉಪಪ್ರಧಾನ ವ್ಯವಸ್ಥಾಪಕಿ ಶ್ವೇತಾ ಅವರು ಭಾರತೀಯ ನ್ಯಾಯ ಸಂಹಿತೆ 280ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಉತ್ತರ ಪಾಲಿಕೆ ಆಯುಕ್ತರು ಶನಿವಾರ 100 ಬ್ಲಾಕ್ ಸ್ಪಾಟ್ಗಳನ್ನು ನಿರ್ಮೂಲನೆ ಮಾಡಿ 100ನೇ ಜಾಗಕ್ಕೆ ಸಚಿವ ಕೃಷ್ಣ ಬೈರೇಗೌಡ ಆಗಮಿಸಿ ಬಣ್ಣ ಬಳಿದು ಸೌಂದರ್ಯ ಹೆಚ್ಚಿಸಿದ್ದರು. ಇಂತಹ 100 ಸ್ಥಳಗಳಲ್ಲಿ ಮತ್ತೆ ಕಸ ಹಾಕದಂತೆ ತಡೆಯಲು ಮಾರ್ಷಲ್ ಗಳನ್ನು ನಿಯೋಜಿಸಲಾಗಿದೆ. ಮಾರ್ಷಲ್ ಗಳ ಕಣ್ಣಿಗೆ ಬಿದ್ದ ನಾಲ್ಕು ಮಂದಿಯನ್ನು ಹಿಡಿದು ಕಸ ಹಾಕಬಾರದು.
ಅಲ್ಲದೆ, ಈಗ ಕಸ ಹಾಕಿರುವುದಕ್ಕೆ ದಂಡ ಪಾವತಿಸಬೇಕು ಎಂದು ತಿಳಿಸಿದ್ದಾರೆ. ಆದರೆ, ಆರೋಪಿಗಳು ಕಸ ತೆರವುಗೊಳಿಸಿದ ಸ್ಥಳದಲ್ಲಿಯೇ ಕಸ ಹಾಕಿದ್ದಲ್ಲದೆ, ದಂಡ ಪಾವತಿಸಲು ನಿರಾಕರಿಸಿದ್ದಾರೆ ಎಂದು ದೂರು ತಿಳಿಸಲಾಗಿದೆ.
ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸವನ್ನು ಶಾಶ್ವತವಾಗಿ ತೆರವುಗೊಳಿಸಿ ಸೌಂದರ್ಯ ಹೆಚ್ಚಿಸುತ್ತಿದ್ದರೆ ಅದೇ ಜಾಗದಲ್ಲಿ ಪುನಃ ಕಸ ಎಸೆದರೆ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ಹಾಗೂ ಸಾರ್ವಜನಿಕ ಸ್ವಚ್ಛತೆಗೆ ಧಕ್ಕೆ ಉಂಟುಮಾಡಿದಂತಾಗುತ್ತದೆ. ಇಂತಹವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಮುಂದುವರಿಸಲಾಗುವುದು ಎಂದು ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರ ಆಕ್ರೋಶ:
ಬೆಂಗಳೂರು ಆಡಳಿತ ಸಂಸ್ಥೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿಯಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ ಮಾಡುವ ಅಧಿಕಾರಗಳ ವಿರುದ್ಧ ಯಾವುದೇ ಕೇಸು ದಾಖಲಾಗಿಲ್ಲ. ಪ್ರಾಧಿಕಾರದ ಆಸ್ತಿ ಒತ್ತುವರಿ ಮಾಡಿಕೊಂಡವರ ಮೇಲೆ ಕೇಸು ದಾಖಲಾಗಿಲ್ಲ. ಕೋಟಿ, ಕೋಟಿ ಆಸ್ತಿ ತೆರಿಗೆ ವಂಚನೆ ಮಾಡಿದವರು ಹಾಗೂ ಆಸ್ತಿ ಬಾಕಿ ಉಳಿಸಿಕೊಂಡವರ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ. ಆದರೆ ಕಸ ಎಸೆದವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಕ್ಕೆ ಕೆಲವು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

