Bengaluru Kambala: ಅರಮನೆ ಮೈದಾನ ಸುತ್ತಮುತ್ತ ಸಂಚಾರ ಮಾರ್ಗ ಬದಲಾವಣೆ, ವಿವರ ಇಲ್ಲಿದೆ ನೋಡಿ!
ನವೆಂಬರ್ 25 ಮತ್ತು 26ರಂದು ಕಂಬಳ ವೀಕ್ಷಿಸಲು ಲಕ್ಷಾಂತರ ಜನ ಅರಮನೆ ಮೈದಾನದಲ್ಲಿ ಸೇರುವ ನಿರೀಕ್ಷೆ ಇದ್ದು ಬೆಂಗಳೂರು ಸಂಚಾರ ಪೊಲೀಸರು, ಸುಗಮ ಸಂಚಾರ ಏರ್ಪಡಿಸಲು ಸೂಕ್ತ ಸಂಚಾರ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದಾರೆ.
ಬೆಂಗಳೂರು (ನ.24): ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯಲು ಸಿದ್ಧತೆ ನಡೆಸಲಾಗಿದೆ. ನವೆಂಬರ್ 24 ರಿಂದ 26ರವರೆಗೆ ನಗರದ ಅರಮನೆ ಮೈದಾನದಲ್ಲಿ'ಬೆಂಗಳೂರು ಕಂಬಳ-ನಮ್ಮ ಕಂಬಳ' ಕಾರ್ಯಕ್ರಮ ನಡೆಯಲಿದೆ. ನವೆಂಬರ್ 25 ಮತ್ತು 26ರಂದು ಕಂಬಳ ವೀಕ್ಷಿಸಲು ಲಕ್ಷಾಂತರ ಜನ ಅರಮನೆ ಮೈದಾನದಲ್ಲಿ ಸೇರುವ ನಿರೀಕ್ಷೆ ಇದ್ದು ಬೆಂಗಳೂರು ಸಂಚಾರ ಪೊಲೀಸರು, ಸುಗಮ ಸಂಚಾರ ಏರ್ಪಡಿಸಲು ಸೂಕ್ತ ಸಂಚಾರ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಪ್ರವೇಶ, ವಾಹನ ನಿಲುಗಡೆ ಸ್ಥಳ ಮತ್ತು ಬದಲೀ ಮಾರ್ಗಗಳ ಬಗ್ಗೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಪ್ರವೇಶ ಮತ್ತು ವಾಹನ ನಿಲುಗಡೆ: ಸಿಬಿಡಿ ಏರಿಯಾ ದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಮೇಕ್ರಿ ಸರ್ಕಲ್ ಬಳಿ ಯು ತಿರುವು ಪಡೆದು ಮೇಕ್ರಿ ಸರ್ಕಲ್ ಗೇಟ್ ನಂ-01 (ಕೃಷ್ಣವಿಹಾರ್) ರಲ್ಲಿ ಪ್ರವೇಶಿಸಿ, ವಾಹನಗಳನ್ನು ಪಾರ್ಕ್ ಮಾಡಿ ನಂತರ ಕಾರ್ಯಕ್ರಮದ ಸ್ಥಳಕ್ಕೆ ನಡೆದುಕೊಂಡು ಹೋಗಲು ಸೂಚಿಸಲಾಗಿದೆ. ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಕ್ರಿ ಸರ್ಕಲ್ ಅಂಡರ್ ಪಾಸ್ ನಲ್ಲಿ ಬಂದು ಗೇಟ್ ನಂ-01 ಕೃಷ್ಣವಿಹಾರ್ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾರ್ಯಕ್ರಮದ ಸ್ಥಳವನ್ನು ನಡೆದು ತಲುಪುವುದು.
ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಅಧಿಕಾರದಲ್ಲಿರುವುದು ಅನುಮಾನ: ಆರ್.ಅಶೋಕ್
ಯಶವಂತಪುರ ಕಡೆಯಿಂದ ಬರುವ ವಾಹನಗಳು ಜಂಕ್ಷನ್-ಮೇಕ್ರಿ ಸರ್ಕಲ್ ಬಲ ತಿರುವು ಪಡೆದು ಗೇಟ್ ನಂ-01 ಕೃಷ್ಣ ವಿಹಾರ್ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾರ್ಯಕ್ರಮದ ಸ್ಥಳ ತಲುಪುವುದು. ಕ್ಯಾಬ್ ಸೇವೆಯನ್ನು ಬಳಸಿಕೊಳ್ಳುವವರು ಗೇಟ್ ನಂ-02 ರಲ್ಲಿ ಪ್ರವೇಶಿಸಿ ನಿಗದಿತ ಸ್ಥಳದಲ್ಲಿ ಇಳಿದು ಗೇಟ್ ನಂ-03 ಮುಖಾಂತರ ಕ್ಯಾಬ್ಗಳು ಹೊರ ಹೋಗಬಹುದಾಗಿದೆ. ಕಾರ್ಯಕ್ರಮದಿಂದ ವಾಪಸ್ಸು ಹೋಗುವಾಗ ಎಲ್ಲಾ ವಾಹನಗಳು ಕಡ್ಡಾಯವಾಗಿ ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮುಖಾಂತರ ನಿರ್ಗಮಿಸುವಂತೆ ಸೂಚನೆ ನೀಡಲಾಗಿದೆ.
ಬದಲೀ ಮಾರ್ಗದ ಮಾಹಿತಿ: ಕಾರ್ಯಕ್ರಮವನ್ನು ಹೊರತುಪಡಿಸಿ, ಇತರೆ ಸ್ಥಳಗಳಿಗೆ ಹೋಗುವ ರಸ್ತೆ ಬಳಕೆದಾರರು ಈ ಕೆಳಕಂಡ ರಸ್ತೆಗಳನ್ನು ಬಳಸದೇ ಬದಲೀ ಮಾರ್ಗದಲ್ಲಿ ಸಂಚರಿಸಲು ಕೋರಿದೆ.
ಅರಮನೆ ರಸ್ತೆ: ಮೈಸೂರು ಬ್ಯಾಂಕ್ ಸರ್ಕಲ್ನಿಂದ ವಸಂತನಗರ ಅಂಡರ್ ಪಾಸ್ವರೆಗೆ.
ಎಂ.ವಿ ಜಯರಾಮ ರಸ್ತೆ : ಅರಮನೆ ರಸ್ತೆ, ಬಿ.ಡಿ.ಎ. ಜಂಕ್ಷನ್ ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ಪಾಸ್ ನಿಂದ ಹಳೆ ಉದಯ ಟಿವಿ ಜಂಕ್ಷನ್ವರೆಗೆ (ಎರಡು ದಿಕ್ಕಿನಲ್ಲಿ).
ಬಳ್ಳಾರಿ ರಸ್ತೆ: ಮೇಕ್ರಿ ವೃತ್ತ ದಿಂದ ಎಲ್.ಆರ್.ಡಿ.ಇ ಜಂಕ್ಷನ್ವರೆಗೆ
ಕನ್ನಿಂಗ್ಹ್ಯಾಂ ರಸ್ತೆ: ಬಾಳೇಕುಂದ್ರಿ ಸರ್ಕಲ್ ನಿಂದ ಲೀ-ಮೆರಿಡಿಯನ್ ಅಂಡರ್ ಪಾಸ್ವರೆಗೆ.
ಮಿಲ್ಲರ್ಸ್ ರಸ್ತೆ: ಹಳೆ ಉದಯ ಟಿ.ವಿ ಜಂಕ್ಷನ್ ನಿಂದ ಎಲ್.ಆರ್.ಡಿ.ಇ ಜಂಕ್ಷನ್ ವರೆಗೆ.
ಜಯಮಹಲ್ ರಸ್ತೆ: ಜಯಮಹಲ್ ರಸ್ತೆ ಹಾಗೂ ಬೆಂಗಳೂರು ಅರಮನೆ ಸುತ್ತಮುತ್ತಲ ರಸ್ತೆಗಳು.
ಸಮಾಜ ಒಡೆಯುವುದು ಕಾಂಗ್ರೆಸ್ ಸರ್ಕಾರದ ಉದ್ದೇಶ: ಎಚ್.ಡಿ.ಕುಮಾರಸ್ವಾಮಿ
ಪಾರ್ಕಿಂಗ್ ನಿಷೇಧಿಸಿರುವ ರಸ್ತೆಗಳು: ಪ್ಯಾಲೇಸ್ ರಸ್ತೆ, ವಸಂತನಗರ ರಸ್ತೆ, ನಂದಿದುರ್ಗ ರಸ್ತೆ, ಎಂ.ವಿ ಜಯರಾಮ್ ರಸ್ತೆ, ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ, ಸಿ.ವಿ.ರಾಮನ್ರಸ್ತೆ, ರಮಣ ಮಹರ್ಷಿ ರಸ್ತೆ, ತರಳಬಾಳು ರಸ್ತೆ, ಮೌಂಟ್ ಕಾರ್ಮಲ್ ಕಾಲೇಜು ರಸ್ತೆ. ಭಾರೀ ಸರಕು ಸಾಗಾಣಿಕಾ ವಾಹನಗಳ ಸಂಚಾರವನ್ನು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ & ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಂಟೋನ್ ಮೆಂಟ್ ರೈಲ್ವೆ ಸ್ಟೇಷನ್, ಹೆಬ್ಬಾಳ ಜಂಕ್ಷನ್, ಕಾವೇರಿ ಥಿಯೇಟರ್ ಜಂಕ್ಷನ್, ಬಿ.ಹೆಚ್.ಇ.ಎಲ್, ಐಐಎಸ್ಸಿ ಜಂಕ್ಷನ್, ಬಸವೇಶ್ವರ ಜಂಕ್ಷನ್ ನಲ್ಲಿ ಭಾರೀ ಸರಕು ಸಾಗಾಣಿಕಾ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗುತ್ತದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.