ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಖಾಸಗಿ ಶಾಲೆ ಮತ್ತು ಟ್ರಸ್ಟ್‌ನಲ್ಲಿ ₹4 ಕೋಟಿ ಮೊತ್ತದ ಹಣಕಾಸು ವಂಚನೆ ನಡೆದಿದೆ. ಶಾಲಾ ಶುಲ್ಕವನ್ನು ತಮ್ಮ ಸ್ವಂತ ಖಾತೆಗೆ ವರ್ಗಾಯಿಸಿಕೊಂಡ ಆರೋಪದ ಮೇಲೆ ಐವರು ಸಿಬ್ಬಂದಿಗಳ ವಿರುದ್ಧ ಸಿಸಿಬಿ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದೆ.

ಬೆಂಗಳೂರು: ನಗರದಲ್ಲಿ ಖಾಸಗಿ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ಬರೋಬ್ಬರಿ ₹4 ಕೋಟಿ ಮೊತ್ತದ ಭಾರೀ ಹಣಕಾಸು ವಂಚನೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಿಸಿಬಿ (ಕೇಂದ್ರ ಅಪರಾಧ ಶಾಖೆ) ಪೊಲೀಸ್ ಠಾಣೆಯಲ್ಲಿ ಐವರು ಉದ್ಯೋಗಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸದ್ಯ ಇಬ್ಬರನ್ನು ಬಂಧಿಸಿದ್ದು, ಮಿಕ್ಕವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಶಾಲೆ ಹಾಗೂ ಅದಕ್ಕೆ ಸಂಬಂಧಿಸಿದ ಟ್ರಸ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಾಗರ್, ಮುರುಳಿ, ಮನೋಜ್, ಮೋಹನ್ ಹಾಗೂ ಕಿಶೋರ್ ಎಂಬವರು ಆರೋಪಿಗಳಾಗಿದ್ದಾರೆ. ಈ ಐವರೂ ಶಾಲೆ ಮತ್ತು ಟ್ರಸ್ಟ್‌ನ ವಿವಿಧ ವಿಭಾಗಗಳಲ್ಲಿ ಅಕೌಂಟೆಂಟ್‌ಗಳು ಹಾಗೂ ಸಾರಿಗೆ (ಟ್ರಾನ್ಸ್‌ಪೋರ್ಟ್) ಇನ್‌ಚಾರ್ಜ್‌ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಶಾಲೆಯಲ್ಲಿ ಸಿಬ್ಬಂದಿಗಳಾಗಿದ್ದ ಆರೋಪಿಗಳು

2017ರಿಂದ ಆರಂಭಿಸಿ ಹಲವು ವರ್ಷಗಳ ಕಾಲ ಶಾಲೆ ಮತ್ತು ಟ್ರಸ್ಟ್‌ಗೆ ಸೇರಿದ ಹಣವನ್ನು ದುರುಪಯೋಗಪಡಿಸಿಕೊಂಡು ಒಟ್ಟು ಸುಮಾರು ₹4 ಕೋಟಿ ರೂ. ವಂಚನೆ ನಡೆಸಿರುವುದು ಆರೋಪವಾಗಿದೆ. ವಿದ್ಯಾರ್ಥಿಗಳು ಪಾವತಿಸಿದ್ದ ಶುಲ್ಕದ ಹಣವನ್ನು ಶಾಲೆಯ ಖಾತೆಗೆ ಜಮಾ ಮಾಡದೆ, ತಮ್ಮ ಸ್ವಂತ ಬಳಕೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ. ಈ ವಂಚನೆ ಪ್ರಕರಣದ ಬಗ್ಗೆ ಶಾಲೆ ಹಾಗೂ ಶಿಕ್ಷಣ ಸಂಸ್ಥೆಯ ನಿರ್ದೇಶಕರು ಸಿಸಿಬಿ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಿದ್ದರು. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಮೂವರಿಗಾಗಿ ತೀವ್ರ ಶೋಧ

ಪ್ರಸ್ತುತ ತನಿಖೆಯ ಭಾಗವಾಗಿ ಆರೋಪಿ ಸಾಗರ್ ಹಾಗೂ ಮನೋಜ್ ಅವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇವರಿಂದ ಮಹತ್ವದ ಮಾಹಿತಿ ಲಭಿಸುವ ನಿರೀಕ್ಷೆ ಇದೆ. ಇನ್ನುಳಿದ ಆರೋಪಿಗಳಾದ ಮುರುಳಿ, ಮೋಹನ್ ಮತ್ತು ಕಿಶೋರ್ ಅವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶಾಲಾ ಶುಲ್ಕದ ಹಣವನ್ನು ದುರ್ಬಳಕೆ ಮಾಡಿ ಶಿಕ್ಷಣ ಸಂಸ್ಥೆಗೆ ಭಾರೀ ನಷ್ಟ ಉಂಟು ಮಾಡಿದ ಈ ಪ್ರಕರಣವು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿವರಗಳು ಹೊರಬೀಳುವ ಸಾಧ್ಯತೆ ಇದೆ.