ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕುಲದೇವತೆ ಹಾಗೂ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಪತ್ನಿ ಜತೆ ಆಗಮಿಸಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು.
ಶಿಕಾರಿಪುರ (ಮೇ.01): ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕುಲದೇವತೆ ಹಾಗೂ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಪತ್ನಿ ಜತೆ ಆಗಮಿಸಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ದರ್ಶನ ಪಡೆದ ನಂತರದಲ್ಲಿ ಪತ್ರಕರ್ತರ ಜತೆ ಮಾತನಾಡಿ ಶ್ರೀ ಹುಚ್ಚರಾಯಸ್ವಾಮಿ ನಮ್ಮ ಮನೆ ದೇವರು ಆದ್ದರಿಂದ ಕುಟುಂಬ ಸಹಿತ ಬಂದು ದರ್ಶನ ಮಾಡಿದ್ದೇವೆ ಎಂದರು.
ನೀವು ಸಚಿವ ಸ್ಥಾನದ ಆಕಾಂಕ್ಷಿಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಖಂಡಿತಾ ನಾನು ಒಬ್ಬ ಪ್ರಬಲ ಆಕಾಂಕ್ಷಿ, ಮೂರು ಬಾರಿ ಶಾಸಕನಾಗಿದ್ದು ಸಚಿವ ಪದವಿ ಕೇಳುವುದು ನನ್ನ ಹಕ್ಕು, ಬಾಗಲಕೋಟೆ ಮತ್ತು ದಾವಣಗೆರೆ ಎರಡು ಉಪಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಿಸುವ ಸಾಧ್ಯತೆ ಹೆಚ್ಚಾಗಿದ್ದು ಎರಡುವರೆ ವರ್ಷದ ನಂತರ ಹೊಸಬರಿಗೆ ಸಚಿವ ಸ್ಥಾನ ಕೊಡಬೇಕು ಆದರೆ ಈಗ 3 ವರ್ಷ ಪೂರ್ಣಗೊಳ್ಳುತ್ತಿದೆ. ಆದ್ದರಿಂದ ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.
ಸಾಗರ ತಾಲೂಕಿನ ಬೇಸೂರಿನಲ್ಲಿ ಅಣು ಸ್ಥಾವರ ನಿರ್ಮಾಣದ ಬಗೆಗಿನ ಪ್ರಶ್ನೆಗೆ ಈ ಯೋಜನೆ ಯಿಂದ ಸ್ಥಳೀಯರು ತಮ್ಮ ಮನೆ ಮಠ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದು ಕೇಂದ್ರ ಸರ್ಕಾರದ ಯೋಜನೆ. ಇದನ್ನು ತಡೆಯುವಲ್ಲಿ ಶಿವಮೊಗ್ಗದ ಸಂಸದ ಬಿ. ವೈ. ರಾಘವೇಂದ್ರ ಜವಾಬ್ದಾರಿ ಇದೆ. ರಾಜ್ಯದಲ್ಲಿ ನಾವು ಕೇಂದ್ರದಲ್ಲಿ ಸಂಸದರು ಯೋಜನೆ ನಿಲ್ಲಿಸಲು ಎಲ್ಲ ರೀತಿ ಯಲ್ಲಿ ಪ್ರಯತ್ನಿಸಬೇಕಾಗಿದೆ ಎಂದರು.
ಇನ್ನು ನ್ಯಾಯ ಸಿಕ್ಕಿಲ್ಲ
ಸಾಗರ ತಾಲೂಕಿಗೆ ಹೊಸ ಯೋಜನೆಗಳು ಬಂದಾಗಲೆಲ್ಲ ಜನ ಹೆದರುತ್ತಿದ್ದಾರೆ. ಉದಾಹರಣೆಗೆ ಮಡೆನೂರು ಡ್ಯಾಮ್, ಶರಾವತಿ ಮುಳುಗಡೆ ಸಂಸತ್ರರಿಗೆ ಇನ್ನು ನ್ಯಾಯ ಸಿಕ್ಕಿಲ್ಲ. ಜನ ಈಗಲೂ ತತ್ತರಿಸು ತ್ತಿದ್ದಾರೆ ಅಲ್ಲದೆ ಇದೀಗ ಒಂದು ಮೊರಾರ್ಜಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಕೊಡಲು ಜಾಗವಿಲ್ಲ. ನಿವೃತ್ತ ಸೈನಿಕರಿಗೆ ಕೊಡಲು ಜಾಗವಿಲ್ಲ ಇಂತಹ ಸಂದರ್ಭದಲ್ಲಿ ಮಲೆನಾಡು ಪ್ರದೇಶದಲ್ಲಿ ಅಣುಸ್ಥಾವರ ತರಲು ನಮ್ಮ ಜನ ಒಪ್ಪುವುದಿಲ್ಲ ಎಂದರು.
ಹೆಲಿಕ್ಯಾಪ್ಟರಲ್ಲಿ ಸರ್ವೆ ಮಾಡಿದ ತಕ್ಷಣ ಕೆಲಸ ಪ್ರಾರಂಭವಾಗೋದಿಲ್ಲ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮುಖ್ಯ ಮಂತ್ರಿಗಳ ಜತೆ ಮಾತನಾಡಿ ಮನವಿ ಮಾಡುವುದಾಗಿ ತಿಳಿಸಿ ಈಗಾಗಲೇ ಶರಾವತಿ ನಿರಾಶ್ರಿತರು ಸಂಕಷ್ಟದಲ್ಲಿದ್ದು ಪದೇ ಪದೇ ಕಷ್ಟ ಕೊಡಬಾರದು ತಕ್ಷಣ ಈ ಯೋಜನೆ ಉದ್ದೇಶದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

