Asianet Suvarna News Asianet Suvarna News

ಪಂಚಮಸಾಲಿ 2ಎ ಮೀಸಲಿಗೆ 2 ತಿಂಗಳ ಡೆಡ್‌ಲೈನ್‌: ಬಸವಜಯ ಮೃತ್ಯುಂಜಯ ಶ್ರೀ

2ಎ ಮೀಸಲಾತಿ ನೀಡಲು ಪಂಚಮಸಾಲಿ ಸಮಾಜ ಸರ್ಕಾರಕ್ಕೆ ಮತ್ತೆ 2 ತಿಂಗಳ ಡೆಡ್‌ಲೈನ್‌ ನೀಡಿದೆ.  25 ಲಕ್ಷ ಜನ ಸೇರಿಸಿ ಅ.23ಕ್ಕೆ ಬೆಂಗಳೂರಲ್ಲಿ ಅಂತಿಮ ಹೋರಾಟ ನಡೆಸಲಾಗುವುದು ಎಂದು ಬಸವಜಯ ಮೃತ್ಯುಂಜಯ ಶ್ರೀ ಹೇಳಿದ್ದಾರೆ.

basava jaya mruthyunjaya swamiji give 2 month deadline for Panchamasali 2A reservation gow
Author
Bengaluru, First Published Aug 25, 2022, 11:07 AM IST

ಹಾವೇರಿ (ಆ.25): 2ಎ ಮೀಸಲಾತಿ ನೀಡಲು ಪಂಚಮಸಾಲಿ ಸಮಾಜ ಸರ್ಕಾರಕ್ಕೆ ಮತ್ತೆ 2 ತಿಂಗಳ ಡೆಡ್‌ಲೈನ್‌ ನೀಡಿದೆ. ಸಚಿವ ಸಿ.ಸಿ.ಪಾಟೀಲ ಅವರು ನಡೆಸಿದ ಸಂಧಾನದ ಫಲವಾಗಿ ಮಂಗಳವಾರ ಶಿಗ್ಗಾಂವಿಯ ಸಿಎಂ ನಿವಾಸದ ಎದುರು ನಡೆಸಲು ಉದ್ದೇಶಿಸಿದ್ದ ಹೋರಾಟ ಕೈಬಿಡಲಾಗಿದ್ದು, ಅಕ್ಟೋಬರ್‌ 23ರಂದು ಬೆಂಗಳೂರಿನಲ್ಲಿ ಅಂತಿಮ ಹೋರಾಟದ ಎಚ್ಚರಿಕೆ ನೀಡಿದೆ. ಸಮಾಜಕ್ಕೆ ಮೀಸಲಾತಿ ನೀಡುವುದಾಗಿ ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದ್ದ ಗಡುವು ಸೋಮವಾರಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಶಿಗ್ಗಾಂವಿಯಲ್ಲಿ ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು. ಬಹಿರಂಗ ಸಭೆ ಬಳಿಕ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸೆ. 26ರಂದು ಶಿಗ್ಗಾಂವಿ ಪಟ್ಟಣದ ಸಿಎಂ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ಅಕ್ಟೋಬರ್‌ 23ರಂದು ಬೆಂಗಳೂರಿನ ಪ್ಯಾಲೇಸ್‌ ಮೈದಾನದಲ್ಲಿ ಹಕ್ಕೊತ್ತಾಯ ಸಭೆ ನಡೆಸಲಿದ್ದು, 25 ಲಕ್ಷ ಜನ ಭಾಗಿಯಾಗಲಿದ್ದಾರೆ. ಅಂದು ರಾಜಕೀಯ ನಿರ್ಣಯ ಕೈಗೊಳ್ಳುತ್ತೇವೆ. ಸಚಿವ ಸಿ.ಸಿ.ಪಾಟೀಲ… ಅವರ ಮನವಿ ಮೇರೆಗೆ ಕಾಲಾವಕಾಶ ನೀಡಲಾಗಿದೆ. ಸಿಎಂಗೆ ಮೀಸಲಾತಿ ಕೊಡುವ ಮನಸ್ಸಿದೆ. ಆದರೆ, ಒಬ್ಬ ವ್ಯಕ್ತಿ ಇದಕ್ಕೆ ಅವಕಾಶ ನೀಡುತ್ತಿಲ್ಲ, ಅವರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪಂಚಮಸಾಲಿ ಮೀಸಲು: ನ್ಯಾ.ಅಡಿ ಸಮಿತಿಗೆ ನೋಟಿಸ್‌, ಸಮಿತಿ ರಚನೆಯನ್ನೇ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ
ಪಂಚಮಸಾಲಿ ಉಪ ಪಂಗಡವನ್ನು ಪ್ರವರ್ಗ 3ಬಿ ವಿಭಾಗದಿಂದ ಪ್ರವರ್ಗ 2ಎ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೆಂಬ ಬೇಡಿಕೆ ಪರಿಶೀಲಿಸಿ ವರದಿ ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಅಡಿ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಸಮಿತಿಗೆ ಹೈಕೋರ್ಚ್‌ ತುರ್ತು ನೋಟಿಸ್‌ ಜಾರಿ ಮಾಡಿದೆ.

ಸರ್ಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವೆಂಕಟರಾಮಯ್ಯ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪ್ರಾರಂಭದಲ್ಲೇ ಐದು ಪೀಠಗಳ ಮಾಡುವ ಚಿಂತನೆ: ಬಿ.ಸಿ.ಉಮಾಪತಿ

ಕೆಲ ಕಾಲ ವಿಚಾರಣೆ ನಡೆಸಿದ ಬಳಿಕ ಅರ್ಜಿಯಲ್ಲಿ ನ್ಯಾಯಮೂರ್ತಿ ಸುಭಾಷ್‌ ಅಡಿ ಅವರನ್ನು ಅವರ ಹೆಸರಿನಲ್ಲಿ ಪ್ರತಿವಾದಿ ಮಾಡಲಾಗಿದೆ. ಬದಲಾಗಿ ಅಧ್ಯಕ್ಷ ಹೆಸರಿನಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಪ್ರತಿವಾದಿ ಮಾಡುವುದು ಸೂಕ್ತ. ಅದರಂತೆ ಅಧ್ಯಕ್ಷರ ಹೆಸರಿನಲ್ಲಿ ಸಮಿತಿಯನ್ನು ಪ್ರತಿವಾದಿ ಮಾಡುವಂತೆ ಅರ್ಜಿದಾರರಿಗೆ ನ್ಯಾಯಪೀಠ ಸೂಚಿಸಿತು.

ಸಿಎಂ ಬೊಮ್ಮಾಯಿಗೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಗಡುವು ನೆನಪಿಸಿದ ಕಾಶಪ್ಪನವರ

ನಂತರ ಅರ್ಜಿ ಕುರಿತು ಉತ್ತರಿಸುವಂತೆ ಸೂಚಿಸಿ ಉನ್ನತ ಮಟ್ಟದ ಸಮಿತಿಗೆ ತುರ್ತು ನೋಟಿಸ್‌ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ನ್ಯಾಯಪೀಠ, ಅರ್ಜಿಯ ಮುಂದಿನ ಆದೇಶದವರೆಗೆ ಪ್ರಕರಣದಲ್ಲಿ ಮುಂದುವರಿಯದಂತೆ ಉನ್ನತ ಮಟ್ಟದ ಸಮಿತಿಗೆ ಸೂಚಿಸಿ ಆ.12ರಂದು ಹೊರಡಿಸಿದ ಮಧ್ಯಂತರ ಆದೇಶವನ್ನು ವಿಸ್ತರಿಸಿತು.

Follow Us:
Download App:
  • android
  • ios