- Home
- Karnataka Districts
- ಮಗನ ಕಣ್ಣೆದುರೇ ಹೆತ್ತವರ ಕೊಂದ ಕಟುಕನಿಗೆ ಗಲ್ಲು ಶಿಕ್ಷೆ: ಚಿಕ್ಕಮಗಳೂರು ಕೋರ್ಟ್ನಿಂದ ಐತಿಹಾಸಿಕ ತೀರ್ಪು!
ಮಗನ ಕಣ್ಣೆದುರೇ ಹೆತ್ತವರ ಕೊಂದ ಕಟುಕನಿಗೆ ಗಲ್ಲು ಶಿಕ್ಷೆ: ಚಿಕ್ಕಮಗಳೂರು ಕೋರ್ಟ್ನಿಂದ ಐತಿಹಾಸಿಕ ತೀರ್ಪು!
ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ 2019ರಲ್ಲಿ ನಡೆದಿದ್ದ ದಂಪತಿ ಹತ್ಯೆ ಪ್ರಕರಣಕ್ಕೆ ಐತಿಹಾಸಿಕ ತೀರ್ಪು ಪ್ರಕಟವಾಗಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ, ಎಂಟು ವರ್ಷದ ಮಗನ ಕಣ್ಣೆದುರೇ ಹೆತ್ತವರನ್ನು ಬರ್ಬರವಾಗಿ ಕೊಂದಿದ್ದ ಆರೋಪಿ ಗೋವಿಂದಪ್ಪನಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.

ಮಗನೆದುರು ಹೆತ್ತವರ ಹತ್ಯೆ ಮಾಡಿದ್ದ ಆರೋಪಿಗೆ ಮರಣದಂಡನೆ
ಚಿಕ್ಕಮಗಳೂರು (ಮಾ.13): ಎಂಟು ವರ್ಷದ ಪುಟ್ಟ ಕಂದನ ಕಣ್ಣೆದುರೇ ಆತನ ಹೆತ್ತವರನ್ನು ಮಲಗಿದ್ದಲ್ಲೇ ಭೀಕರವಾಗಿ ಕಡಿದು ಕೊಂದಿದ್ದ ನರಹಂತಕನಿಗೆ ಕೊನೆಗೂ ನ್ಯಾಯದೇವತೆ ಮರಣದಂಡನೆ ವಿಧಿಸಿದ್ದಾಳೆ. ಕಾಫಿನಾಡು ಚಿಕ್ಕಮಗಳೂರಿನ ಎನ್.ಆರ್.ಪುರ ತಾಲ್ಲೂಕಿನ ಕುಸುಬೂರಿನಲ್ಲಿ 2019ರಲ್ಲಿ ನಡೆದಿದ್ದ ಈ ದೃಶ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಅಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ದಂಪತಿಯ ಪರವಾಗಿ ಇಂದು ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕುಸುಬೂರಿನ ಸಾತ್ಕೊಳಿ ಬಳಿ 2019ರಲ್ಲಿ ಈ ಭೀಕರ ಹತ್ಯೆ ನಡೆದಿತ್ತು. ಆರೋಪಿ ಗೋವಿಂದಪ್ಪ ಎಂಬಾತ ದಂಪತಿಗಳನ್ನು ಮಲಗಿದ್ದಲ್ಲೇ ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದ. ಈ ಕೃತ್ಯದ ಹಿಂದೆ ಅಕ್ರಮ ಸಂಬಂಧದ ಕರಾಳ ಹಸ್ತವಿತ್ತು ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಮೃತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಗೋವಿಂದಪ್ಪ, ಆಕೆ ತನ್ನಿಂದ ದೂರವಾಗಿ ಪತಿಯೊಂದಿಗೆ ಸಂಸಾರ ನಡೆಸಲು ಮುಂದಾಗಿದ್ದಕ್ಕೆ ರೊಚ್ಚಿಗೆದ್ದು ಈ ಕ್ರೂರ ಕೃತ್ಯ ಎಸಗಿದ್ದ.
ಐತಿಹಾಸಿಕ ತೀರ್ಪು ನೀಡಿದ ನ್ಯಾಯಾಲಯ
ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಚಿಕ್ಕಮಗಳೂರಿನ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಅವರು ಇಂದು ಮಹತ್ವದ ತೀರ್ಪು ನೀಡಿದ್ದಾರೆ. ಆರೋಪಿ ಗೋವಿಂದಪ್ಪನಿಗೆ ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಆದೇಶಿಸಿದ್ದಾರೆ. ಕೇವಲ ಮರಣದಂಡನೆ ಮಾತ್ರವಲ್ಲದೆ, 20 ಸಾವಿರ ರೂಪಾಯಿ ದಂಡವನ್ನೂ ವಿಧಿಸುವ ಮೂಲಕ ಕಾನೂನು ತನ್ನ ಚಾಟಿ ಬೀಸಿದೆ. ಸರ್ಕಾರಿ ಅಭಿಯೋಜಕಿ ಪಿ. ವೀಣಾ ಅವರು ಸಂತ್ರಸ್ತರ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.
ಮಗನ ಕಣ್ಣೆದುರೇ ನಡೆದಿದ್ದ ರಕ್ತಪಾತ
ಈ ಪ್ರಕರಣದ ಅತ್ಯಂತ ಕರುಣಾಜನಕ ಸಂಗತಿಯೆಂದರೆ, ಹಂತಕ ಗೋವಿಂದಪ್ಪ ಎಂಟು ವರ್ಷದ ಪುಟ್ಟ ಬಾಲಕನ ಕಣ್ಣೆದುರೇ ಆತನ ತಂದೆ-ತಾಯಿಯನ್ನು ಕಡಿದು ಹಾಕಿದ್ದ. ಅಂದು ತಂದೆ-ತಾಯಿಯನ್ನು ಉಳಿಸಿಕೊಳ್ಳಲು ಆ ಪುಟ್ಟ ಕಂದ ಅದೆಷ್ಟು ಗೋಳಾಡಿದ್ದರೂ, ಮನ ಕರಗದ ಆ ಕಟುಕ ರಾಕ್ಷಸನಂತೆ ವರ್ತಿಸಿದ್ದ. ಅಂದಿನಿಂದ ಇಂದಿನವರೆಗೆ ನಡೆದ ಸುದೀರ್ಘ ಕಾನೂನು ಹೋರಾಟದಲ್ಲಿ ಇಂದು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಇದೊಂದು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ (Rarest of Rare Case) ಎಂದು ಪರಿಗಣಿಸಿ ಆರೋಪಿಗೆ ಗಲ್ಲು ಶಿಕ್ಷೆಯನ್ನೇ ಅಂತಿಮಗೊಳಿಸಿದೆ.
ನ್ಯಾಯ ಸಿಕ್ಕ ಸಂಭ್ರಮ:
ಈ ತೀರ್ಪು ಹೊರಬರುತ್ತಿದ್ದಂತೆ ಸಂತ್ರಸ್ತ ಕುಟುಂಬಕ್ಕೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ. ಪುಟ್ಟ ಬಾಲಕನ ಬದುಕನ್ನೇ ಕಸಿದುಕೊಂಡಿದ್ದ ಆ ನರಹಂತಕನಿಗೆ ಸಿಕ್ಕ ಗಲ್ಲು ಶಿಕ್ಷೆಯು ಸಮಾಜದಲ್ಲಿ ಕ್ರೂರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಅಕ್ರಮ ಸಂಬಂಧದ ವ್ಯಸನಕ್ಕೆ ಬಿದ್ದು ಒಂದು ಸುಂದರ ಕುಟುಂಬವನ್ನೇ ಸರ್ವನಾಶ ಮಾಡಿದ ಕಾಮಾಂಧನಿಗೆ ಕಾನೂನು ತಕ್ಕ ಶಾಸ್ತಿ ಮಾಡಿದೆ. ಐದು ವರ್ಷಗಳ ಹಿಂದಿನ ಆ ರಕ್ತಸಿಕ್ತ ಅಧ್ಯಾಯಕ್ಕೆ ಈಗ ನ್ಯಾಯಾಲಯದ ತೀರ್ಪಿನ ಮೂಲಕ ನ್ಯಾಯಯುತ ಅಂತ್ಯ ಸಿಕ್ಕಿದೆ. ಈ ಐತಿಹಾಸಿಕ ತೀರ್ಪು ಸಮಾಜದಲ್ಲಿ ಸೈತಾನನಂತೆ ವರ್ತಿಸುವವರಿಗೆ ಪಾಠವಾಗಲಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

