Asianet Suvarna News Asianet Suvarna News

ಮೈಸೂರು: ಕಬ್ಬು ಬೆಳೆಗಾರರಿಂದ ಬಾರುಕೋಲು ಚಳವಳಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅನ್ನದಾತರು..!

ಸರ್ಕಾರ ಮಾರ್ವಾಡಿಗಳ ಬಂಡವಾಳಶಾಹಿಗಳ ರಿಮೋಟ್‌ ಕಂಟ್ರೋಲ್‌ ರೀತಿ ಕಾರ್ಯ ನಿರ್ವಹಿಸುತ್ತಿರುವುದರಿಂದ ರೈತರು ಬಲಿಪಶುಗಳಾಗುತ್ತಿದ್ದಾರೆ: ಕುರುಬೂರು ಶಾಂತಕುಮಾರ್‌ 

Barukolu Movement by Sugarcane Growers in Mysuru grg
Author
First Published Nov 8, 2022, 10:30 PM IST

ಮೈಸೂರು(ನ.08): ಕಬ್ಬಿನ ಎಫ್‌ಆರ್‌ಪಿ ದರ ಪುನರ್‌ ಪರಿಶೀಲನೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಯು ಸೋಮವಾರ ಒಂದು ವಾರ ಪೂರೈಸಿತು. 8ನೇ ದಿನದ ಹೋರಾಟದಲ್ಲಿ ಕಬ್ಬು ಬೆಳೆಗಾರರ ರೈತರು ಬಾರುಕೋಲು ಚಳವಳಿ ಹಮ್ಮಿಕೊಳ್ಳುವ ಮೂಲಕ ಸಚಿವರು, ಶಾಸಕರು, ಸಂಸದರಿಗೆ ಚಾಟಿ ಏಟಿನಿಂದ ಎಚ್ಚರಿಕೆ ನೀಡುವ ಅಣಕು ಪ್ರದರ್ಶನ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಎಂಎಲ್‌ಎ, ಎಂಪಿ ಮಂತ್ರಿ, ಮಂತ್ರಿಗಳ ವೇಷದಾರಿಗಳಿಗೆ ಬಾರುಕೋಲಿನಿಂದ ಬಾರಿಸಲು ಯತ್ನಿಸಿದಾಗ, ರೈತರಿಗೆ ಹೆದರಿ ರಕ್ಷಣೆಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ಅಣಕ ಮಾಡಲಾಯಿತು. ನೀವು ಬಂಡವಾಳ ಶಾಹಿಗಳು, ಮಾರವಾಡಿಗಳ ಪರ ಇದ್ದು, ರೈತಪರ ಕೆಲಸ ಮಾಡದೆ ಇರುವುದು ಎಮ್ಮೆ ಕಾಯಲು ಲಾಯಕ್ಕು ಎಂದು ಚಾಟಿ ಏಟಿನಿಂದ ಹೊಡೆಯುವ ಮೂಲಕ ಅಣಕು ಪ್ರದರ್ಶನ ಮಾಡಿ, ಮುಂದಿನ ಚುನಾವಣೆಯಲ್ಲಿ ನಮ್ಮ ಬಳಿ ಬಂದರೆ ಇದೇ ರೀತಿ ಚಾಟಿ ಕೊಟ್ಟು ಮನೆಗೆ ಕಳುಹಿಸುವುದಾಗಿ ರೈತರು ಎಚ್ಚರಿಸಿದರು.

MYSURU MURDER CASE: ನಿವೃತ್ತಿ ಅಧಿಕಾರಿಯ ಹಿಟ್ ಅಂಡ್ ರನ್ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, ಸರ್ಕಾರ ಮಾರ್ವಾಡಿಗಳ ಬಂಡವಾಳಶಾಹಿಗಳ ರಿಮೋಟ್‌ ಕಂಟ್ರೋಲ್‌ ರೀತಿ ಕಾರ್ಯ ನಿರ್ವಹಿಸುತ್ತಿರುವುದರಿಂದ ರೈತರು ಬಲಿಪಶುಗಳಾಗುತ್ತಿದ್ದಾರೆ. ಟನ್‌ ಕಬ್ಬಿಗೆ . 7500 ಹೆಚ್ಚು ಆದಾಯ ಇದೆ. ಒಂದು ಟನ್‌ ಕಬ್ಬಿನಿಂದ ನೂರು ಲೀಟರ್‌ ಯಥನಾಲ್‌ ಬರುತ್ತದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರ ಲೀಟರಿಗೆ . 65 ಹಾಗೂ ಕಬ್ಬಿನ ಸಿಪ್ಪೆಯಿಂದ 144 ಯೂನಿಟ್‌ ವಿದ್ಯುತ್‌ ಉತ್ಪಾದನೆಯಾಗುತ್ತದೆ. ನಂತರ ಮಡ್ಡಿಯಿಂದ ಗೊಬ್ಬರ ಉತ್ಪಾದಿಸಲಾಗುತ್ತದೆ. ಎಲ್ಲಾ ಸೇರಿ . 7500 ಆದಾಯ ಬರುತ್ತದೆ. ವರ್ಷಕಾಲ ಕಷ್ಟಪಟ್ಟು ಬೆಳೆದ ರೈತನಿಗೆ . 3000 ಮಾತ್ರ, ಯಾಕೆ ಈ ರೀತಿ ಅನ್ಯಾಯ ಎಂದು ಪ್ರಶ್ನಿಸಿದರು.

60- 70 ವರ್ಷಗಳಿಂದ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ರೈತರ ಜಮೀನುಗಳನ್ನು ಕಿತ್ತುಕೊಳ್ಳಲು ಗಣಕಿಕರಣವಾಗುವಾಗ, ದಳ್ಳಾಳಿಗಳು ರಿಯಲ್‌ ಎಸ್ಟೇಟ್‌ ಮಾಫಿಯಾದವರು ದಾಖಲಾತಿಗಳನ್ನು ಸೃಷ್ಟಿಮಾಡಿ ರಾಜ್ಯದಲ್ಲಿ ಲಕ್ಷಾಂತರ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನ ಮಾಡುತ್ತಿದ್ದಾರೆ. ನಿಜವಾಗಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಅವರು ಆಗ್ರಹಿಸಿದರು.

Mysuru : 'ಶಾಸಕರಾದವರು ಕೇವಲ ರಾಜಕೀಯ ಹೇಳಿಕೆ ನೀಡುತ್ತಾ ಕೆಲಸ ಮಾಡಿಲ್ಲ'

ಶಾಸಕರು, ಸಚಿವರು, ಸಂಸದರು ಜನಸೇವೆಗಾಗಿ ಬಂದು ಜನರನ್ನ ಮರೆತಿದ್ದಾರೆ. ಅದಕ್ಕಾಗಿ ಎಚ್ಚರಿಸಲು ಬಾರುಕೋಲ್‌ ಚಳವಳಿ ನಡೆಸಲಾಗುತ್ತಿದೆ. ಇನ್ನು ಮುಂದೆಯೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಹಳ್ಳಿಗಳಿಗೆ ಬಂದಾಗ ರೈತರು ಬಾರ್ಕೋಲ್‌ ಮೂಲಕವೇ ಉತ್ತರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್‌, ಮುಖಂಡರಾದ ಕೆರೆಹುಂಡಿ ರಾಜಣ್ಣ, ಹಾಡ್ಯ ರವಿ, ಅಂಬಳೆ ಮಂಜುನಾಥ್‌, ಲಕ್ಷ್ಮೀಪುರ ವೆಂಕಟೇಶ್‌, ವರಕೂಡು ಜಯರಾಮು, ಟಿ. ರಾಮೇಗೌಡ, ಸೋನಹಳ್ಳಿ ದೊರೆಸ್ವಾಮಿ, ಬಸವಣ್ಣ, ಮಂಜುನಾಥ್‌, ಕುರುಬೂರು ಮಂಜು, ಮಾರ್ಬಳ್ಳಿ ನೀಲಕಂಠಪ್ಪ, ಚುಂಚರಾಯನಹುಂಡಿ ತಮ್ಮಯಪ್ಪ, ಮಲ್ಲಪ್ಪ, ಮಹದೇವಸ್ವಾಮಿ, ಮುದ್ದಹಳ್ಳಿ ಶಿವಣ್ಣ, ದಿನೇಶ್‌ ಮೊದಲಾದವರು ಇದ್ದರು.
 

Follow Us:
Download App:
  • android
  • ios