ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದ ದುರಂತದ ಬೆನ್ನಲ್ಲೇ, 9ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ  ಸಮಯಪ್ರಜ್ಞೆಯಿಂದ ಮತ್ತೊಂದು ಅನಾಹುತವನ್ನು ತಪ್ಪಿಸಿದ್ದಾಳೆ. ಅಪಾಯಕಾರಿಯಾಗಿ ಅಲುಗಾಡುತ್ತಿದ್ದ ವಿದ್ಯುತ್ ಕಂಬದ ಕೆಳಗೆ ನಿಂತಿದ್ದ ಲಿಖಿತ್ ಎಂಬ ಬಾಲಕನನ್ನು ಕ್ಷಣಾರ್ಧದಲ್ಲಿ ಎಳೆದು ರಕ್ಷಿಸಿದ್ದಾಳೆ.

ಬಂಟ್ವಾಳ (ದಕ್ಷಿಣ ಕನ್ನಡ) (ಜು.24): ಶಾಲಾ ವಾಹನದ ಮೇಲೆ ಬುಧವಾರ ಮರ ಬಿದ್ದು ಪುಟ್ಟ ಬಾಲಕಿ ಮೃತಪಟ್ಟ ದುರ್ಘಟನೆಯ ಕೆಲ ಸಮಯದ ಹಿಂದೆಯೇ ಮತ್ತೊಂದು ಅನಾಹುತ ಆಗುವುದನ್ನು ಅದೇ ಬಸ್‌ನಲ್ಲಿದ್ದ ವಿದ್ಯಾರ್ಥಿನಿ ತಪ್ಪಿಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಬಂಟ್ವಾಳ ತಾಲೂಕಿನ ಬರಿಮಾರ್‌ ಸಮೀಪ ಕಲ್ಲೆಟ್ಟಿ ದೈವಸ್ಥಾನದ ಬಳಿ ಬುಧವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 9ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ತನ್ನ ಅಕ್ಕಪಕ್ಕದ ಮಕ್ಕಳೊಂದಿಗೆ ಮರ ಬಿದ್ದ ಅದೇ ಶಾಲಾ ಬಸ್‌ನಿಂದ ಘಟನೆ ಆಗುವ ಮುಂಚೆಯೆ ಇಳಿದಿದ್ದಳು.

ಶಾಲಾ ಬಸ್ ದುರಂತಕ್ಕೆ ಮುನ್ನ ನಡೆದಿದ್ದೇನು?

 ಶ್ರೇಯಾ ಜೊತೆಗೆ ಇಳಿದಿದ್ದ ಲಿಖಿತ್ ತನ್ನ ಶಾಲಾ ಬ್ಯಾಗನ್ನು ಅಣ್ಣನಿಗೆ ನೀಡಿ ಮನೆಯತ್ತ ಓಡಲು ಮುಂದಾಗಿದ್ದ. ಅಷ್ಟರಲ್ಲಿ ಭಾರೀ ಶಬ್ದ ಕೇಳಿಬಂದಿದ್ದು, ಸಮೀಪದ ವಿದ್ಯುತ್ ಕಂಬ ಅಪಾಯಕಾರಿಯಾಗಿ ಅಲುಗಾಡುತ್ತಿರುವುದನ್ನು ಗಮನಿಸಿದ ಶ್ರೇಯಾ ಕ್ಷಣಾರ್ಧದಲ್ಲಿ ಓಡಿ ಹೋಗಿ ಲಿಖಿತ್‌ನ ಕೈ ಹಿಡಿದು ಹಿಂದೆ ಎಳೆದಿದ್ದಾಳೆ. ಲಿಖಿತ್ ನಿಂತಿದ್ದ ಅದೇ ಸ್ಥಳಕ್ಕೆ ವಿದ್ಯುತ್ ಕಂಬ ಧರೆಗುರುಳಿದೆ. ಶ್ರೇಯಾಳ ಸಮಯಪ್ರಜ್ಞೆಯಿಂದ ಮತ್ತೊಂದು ಜೀವಹಾನಿ ತಪ್ಪಿದೆ ಎಂದಸ್ಥಳೀಯರು, ತನ್ನ ಮಗನ ಪ್ರಾಣ ಉಳಿಸಿದ ಲಿಖಿತ್‌ನ ತಂದೆ ಕರುಣಾಕರ ಬಾಲಕಿಗೆ ಕೃತಜ್ಞತೆ ಸಲ್ಲಿಸಿದ್ದು, ಸಾರ್ವಜನಿಕರಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕಂಬ ಅಲುಗಾಡುವುದನ್ನು ನೋಡಿದೆ. ತಕ್ಷಣ ಆ ಕಡೆ ಓಡಿ ಹೋಗುತ್ತಿದ್ದ ಲಿಖಿತ್‌ನ ಕೈ ಹಿಡಿದು ಎಳೆದೆ. ಕ್ಷಣಮಾತ್ರದಲ್ಲೇ ಅವನು ನಿಂತಿದ್ದ ಸ್ಥಳಕ್ಕೆ ವಿದ್ಯುತ್ ಕಂಬ ಬಿತ್ತು.

-ಶ್ರೇಯಾ, ಸಮಯಪ್ರಜ್ಞೆ ಮೆರೆದ ಬಾಲಕಿ.

-ಬಂಟ್ವಾಳ ಸಮೀಪ ಘಟನೆ । ವಿದ್ಯಾರ್ಥಿನಿ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ