ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 10ನೇ ಬಾರಿಗೆ ಗರ್ಭ ಧರಿಸಿದ್ದ ಸುವರ್ಣ ಆನೆ, ಹೆರಿಗೆ ನೋವಿನಿಂದ ಬಳಲಿ ಶುಕ್ರವಾರ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.

ಬೆಂಗಳೂರು (ಏ.21): ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬರೋಬ್ಬರಿ 9 ಮರಿಗಳಿಗೆ ಜನ್ಮ ನೀಡಿದ್ದ ಹಿರಿಯಾನೆ ಸುವರ್ಣ ಪ್ರಸವ ಸಂದರ್ಭದಲ್ಲಿಯೇ ಸಮಸ್ಯೆ ಕಾಣಿಸಿಕೊಂಡು ಕೊನೆಯುಸಿರೆಳೆದ ಕರುಣಾಜನಕ ಘಟನೆ ಇಂದು ನಡೆದಿದೆ. ಈ ಘಟನೆಯಿಂದ ಇಡೀ ಜೈವಿಕ ಉದ್ಯಾನದ ಸಿಬ್ಬಂದಿಯಲ್ಲಿ ಮೌನ ಮಡುಗಟ್ಟಿತ್ತು.

Add Asianetnews Kannada as a Preferred SourcegooglePreferred

ದೇಶದ ಕೃತಕ ರಾಷ್ಟ್ರೀಯ ಉದ್ಯಾನಗಳಲ್ಲಿ ಒಂದಾಗಿರುವ ಬೆಂಗಳೂರಿನ ಹೊರ ವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ (BannerghattaBiologicalPark) ಸಿಗೇಕಟ್ಟೆ ಸಫಾರಿಯಲ್ಲಿದ್ದ ಸುವರ್ಣ (47) ಆನೆ ಹೆರಿಗೆ ಸಂದರ್ಭದಲ್ಲಿ ಉಂಟಾದ ಸಮಸ್ಯೆಯಿಂದ ಮೃತಪಟ್ಟಿದೆ. ಈಗಾಗಲೇ ಉದ್ಯಾನದಲ್ಲಿ ಬರೋಬ್ಬರಿ 9 ಮರಿಗಳಿಗೆ ಜನ್ಮ ನಿಡಿದ್ದ ಈ ಸುವರ್ಣ ಆನೆ ಮಹಾತಾಯಿ ಎನಿಸಿಕೊಂಡಿತ್ತು. ಆದರೆ, ಇತ್ತೇಚೆಗೆ ಹತ್ತನೇ ಬಾರಿಗೆ ಗರ್ಭ ಧರಿಸಿತ್ತು. ಹೆರಿಗೆಗೂ ಮುನ್ನವೇ ತನ್ನ ಹೊಟ್ಟೆಯಲ್ಲಿದ್ದ ಮರಿಯಾನೆ ಸಾವನ್ನಪ್ಪಿದ್ದು, ಸುಸೂತ್ರವಾಗಿ ಹೆರಿಗೆಯಾಗದೇ ನೋವನ್ನು ಅನುಭವಿಸಿ ಪ್ರಾಣವನ್ನೇ ಬಿಟ್ಟಿದೆ.

ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಮೇಲೆ ನೀತಿಸಂಹಿತೆ ಕರಿಛಾಯೆ!

ಇನ್ನು ಸುವರ್ಣ ಆನೆ ಹತ್ತನೇ ಬಾರಿಗೆ ಗರ್ಭ ಧರಿಸಿದ್ದು, ನಿನ್ನೆ ಆನೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ವೈದ್ಯರು ಪರೀಕ್ಷೆ ಮಾಡಿದಾಗ ಗರ್ಭದಲ್ಲಿಯೇ ಮರಿಯಾನೆ ಸಾವನ್ನಪ್ಪಿರುವುದು ತಿಳಿದುಬಂದಿದೆ. ಗರ್ಭದಲ್ಲಿ ಮೃತಪಟ್ಟ ಮರಿಯಾನೆಯನ್ನ ಹೊರತೆಗೆಯಲು ವೈದ್ಯರ ಹರಸಾಹಸ ಮಾಡಿದ್ದಾರೆ. ಆನೆಯ ಹೊಟ್ಟೆಯೊಳಗೆ ಬರೋಬ್ಬರಿ 150 ಕೆಜಿಗಿಂತ ಅಧಿಕ ತೂಕವಿದ್ದ ಮರಿಯಾನೆ ಸತ್ತು ಹೋಗಿದ್ದು, ಹೆರಿಗೆ ಆಗುವುದಿಲ್ಲ ಎಂದು ಖಚಿತಪಡಿಸಿಕೊಂಡ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಮರಿಯನ್ನು ಹೊರಗೆ ತೆಗೆಯಲು ಮುಂದಾಗಿದ್ದಾರೆ.

ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರು ಆನೆಯ ನರಳಾಟವನ್ನು ನೋಡಲಾಗದೇ ಶಸ್ತ್ರಚಿಕಿತ್ಸೆಯನ್ನೂ ಮಾಡಿ ಹೊಟ್ಟೆಯೊಳಗೆ ಪ್ರಾಣಬಿಟ್ಟಿದ್ದ ಮರಿ ಆನೆಯನ್ನು ಹೊರಗೆ ತೆಗೆದಿದ್ದಾರೆ. ಆದರೆ, ಮರಿ ಆನೆ ಗರ್ಭದೊಳಗೆ ಒಂದು ವಾರದ ಹಿಂದೆಯೇ ಸಾವನ್ನಪ್ಪಿ ಕೊಳೆತು ಹೋಗುವ ಸ್ಥಿತಿಗೆ ತಲುಪಿತ್ತು. ಇದರಿಂದಾಗಿ ತಾಯಿ ಆನೆಗೆ ತೀವ್ರ ಸಮಸ್ಯೆ ಉಂಟಾಗಿದ್ದು, ಆರೋಗ್ಯದಲ್ಲಿಯೂ ತೀವ್ರ ಏರುಪೇರು ಉಂಟಾಗಿದೆ. ಇನ್ನು ಆಪರೇಶಷನ್‌ ಮಾಡಿದರೂ ತಾಯಿ ಆನೆಯನ್ನು ಬದುಕುಳಿಸಲು ಆಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಉದ್ಯಾನದ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವಾಯ್ತಾ?: ಬನ್ನೇರುಘಟ್ಟ ಜೈವಿಕ ಉದ್ಯಾನವನದ (Bannerghatta National Park) ವೈದ್ಯರ ತಂಡ ಸರಿಯಾದ ರೀತಿಯಲ್ಲಿ ಕಾಳಜಿ ವಹಿಸದೆ ಎಡವಟ್ಟು ಸಂಭವಿಸಿದೆ ಎಂದು ಉದ್ಯಾನದ ಸಿಬ್ಬಂದಿ ಆರೋಪ ಮಾಡುತ್ತಿದ್ದಾರೆ. ಆನೆಯ ಗರ್ಭದಲ್ಲಿ ಸಾವನ್ನಪ್ಪಿದ್ದ ಮರಿಯಾನೆಯ ಜೊತೆಗೆ ಗರ್ಭಕೋಶ ಹೊಟ್ಟೆಯಲ್ಲಿ ಕೊಳೆತು ಹೋಗಿತ್ತು. ಇನ್ನು ಗರ್ಭಕೋಶದ ಸಮೇತ ಕೊಳೆತ ಮಾಂಸವನ್ನು ಹೊರೆತೆಗೆದು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುವರ್ಣ ಆನೆ ಇಹಲೋಕವನ್ನು ತ್ಯಜಿಸಿದೆ.

ಮಳೆಯ ನಡುವೆಯೇ ಪ್ರಧಾನಿಯ ಕಟೌಟ್‌ ಒರೆಸುತ್ತಾ ನಿಂತ ಅಭಿಮಾನಿ, ಮೋದಿನೇ ನಮ್ಮ ದೇವರೆಂದ!

ಆನೆಯ ಹಿಂಡಿನಲ್ಲಿ ಗರ್ಭ ಧರಿಸಿದ ಆನೆ ಬಿಟ್ಟಿದ್ದೇಕೆ?: ಇನ್ನು ಸಾಮಾನ್ಯ ಆನೆಗಳಿಗೂ ಗರ್ಭ ಧರಿಸಿದ ಆನೆಗಳಿಗೂ ಸ್ವಲ್ಪ ವ್ಯತ್ಯಾಸ ಇರುತ್ತದೆ. ಸಾಮಾನ್ಯ ಆನೆಗಳಂತೆ ಗರ್ಭ ಧರಿಸಿದ ಆನೆಗಳನ್ನು ಹಿಂಡಿನಲ್ಲಿ ಬಿಟ್ಟರೆ, ಅವುಗಳ ತಳ್ಳಾಟ ಮತ್ತು ಇತರೆ ಕಾರ್ಯಗಳಿಂದ ಸಮಸ್ಯೆ ಉಮಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ, ಸುವರ್ಣ ಆನೆ ಗರ್ಭಧರಿಸಿದರು ಉದ್ಯಾನದ ವೈದ್ಯರು ಹಾಗೂ ಆಡಳಿತ ವರ್ಗ ಕಾಳಜಿ ವಹಿಸಿರಲಿಲ್ಲ. ಎಲ್ಲಾ ಆನೆಗಳ ರೀತಿ ಗರ್ಭ ಧರಿಸಿದ್ದ ಸುವರ್ಣ ಆನೆಯನ್ನ ಗುಂಪು ಗೂಡಿಸಲಾಗಿತ್ತು. ಹೀಗಾಗಿ, ಆನೆಯ ಹಿಂಡಿನಲ್ಲಿ ಇರುವಾಗ ಸುವರ್ಣ ಆನೆಗೆ ಗರ್ಭಕ್ಕೆ ಹೊಡೆತ ಬಿದ್ದು ಮರಿಯಾನೆ ಸಾವನ್ನಪ್ಪಿ, ಕೊಳೆತು ಈಗ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹಿರಿಯಾನೆಯೇ ಇಲ್ಲದಂತಾಗಿದೆ.