Asianet Suvarna News Asianet Suvarna News

ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಮೇಲೆ ನೀತಿಸಂಹಿತೆ ಕರಿಛಾಯೆ!

ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ ಕಾರ್ಯಕ್ರಮದ ಮೇಲೆ ಕರ್ನಾಟಕ ವಿಧಾನಸಭಾ ನೀತಿ ಸಂಹಿತೆ ಕರಿನೆರಳು ಬೀರಿದ್ದು, ಸರಳವಾಗಿ ಕಾರ್ಯಕ್ರಮ ಆಚರಿಸಲು ಮಠದ ಆಡಳಿತ ಮಂಡಳಿ ಮುಂದಾಗಿದೆ. 

Code of Conduct casts shadow over coronation of successor of Tumakuru Siddaganga Mutt sat
Author
First Published Apr 21, 2023, 8:03 PM IST | Last Updated Apr 21, 2023, 8:03 PM IST

ತುಮಕೂರು (ಏ.21): ದೇಶದ ತ್ರಿವಿಧ ದಾಸೋಹದ (ಊಟ, ವಸತಿ, ಶಿಕ್ಷಣ) ನೀಡುತ್ತಿರುವ ಮಠಗಳಲ್ಲಿ ಪ್ರಸಿದ್ಧವಾದ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಏ.23ರ ಶುಕ್ರವಾರ ನಡೆಯಬೇಕಿದ್ದ ನೂತನ ಉತ್ತರಾಧಿಕಾರಿಗೆ ಪಟ್ಟಾಭಿಷೇಕ ಕಾರ್ಯಕ್ರಮದ ಮೇಲೆ ಕರ್ನಾಟಕ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯ ಕರಿಛಾಯೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸರಳವಾಗಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಸಲು ಮಠದ ಆಡಳಿತ ಮಂಡಳಿಯು ನಿರ್ಧರಿಸಿದೆ.

ತುಮಕೂರಿನ ಐತಿಹಾಸಿಕ ಸಿದ್ದಗಂಗಾ ಮಠದ ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಶ್ರೀಗಳ ಶಿಷ್ಯ ಮನೋಜ್‌ ಕುಮಾರ್‌ ಅವರನ್ನು ಸಿದ್ದಗಂಗಾ ಮಠದ ಉತ್ತರಾಧಿಕಾರಿಯನ್ನಾಗಿ  ನೇಮಿಸಲಾಗಿದೆ. ಭಾನುವಾರ ಬೆಳಗ್ಗೆ 5 ಗಂಟೆಯಿಂದ ಸಿದ್ದಗಂಗಾ ಮಠದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ಆರಂಭವಾಗಲಿದೆ. ಇನ್ನು ಸಿದ್ದಗಂಗಾ ಹಳೆಯ ಮಠದ ಆವರಣದಲ್ಲಿ ಸಮಾರಂಭ ನಡೆಸಲಾಗುತ್ತಿದ್ದು, ಕೆಲವರಿಗೆ ಮಾತ್ರ ಆಹ್ವಾನವಿದೆ. ಮಠದ ಭಕ್ತಾದಿಗಳು, ಸಾರ್ವಜನಿಕರು ಹಾಗೂ ಹಿತೈಷಿಗಳು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸರಳವಾಗಿ ಈ ಸಮಾರಂಭ ಆಯೋಜನೆ ಮಾಡಲಾಗುತ್ತಿದ್ದು, ಮಠದ ಭಕ್ತಾದಿಗಳು ಸಹಕಾರ ನೀಡಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿಯಿಂದ ಮನವಿ ಮಾಡಿದೆ. 

ತುಮಕೂರಿನ ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ: ಶ್ರೀ ಶಿವಕುಮಾರ ಸ್ವಾಮೀಜಿ ಶಿಷ್ಯನ ಆಯ್ಕೆ

ತ್ರಿವಿಧ ದಾಸೋಹಿ ಮಠ:  ವಿಶ್ವವ್ಯಾಪಿ ತ್ರಿವಿಧ ದಾಸೋಹಿ ಮಠವೆಂದೇ ಪ್ರಸಿದ್ಧಿ ಪಡೆದಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಉತ್ತರಾಧಿಕಾರಿಯಾಗಿ ಸಿದ್ದಲಿಂಗ ಸ್ವಾಮೀಜಿ ಆಡಳಿತ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ನಡೆದಾಡುವ ದೇವರು ಶಿವಕುಮಾರ ಶ್ರೀಗಳ ಶಿಷ್ಯ ಮನೋಜ್‌ ಕುಮಾರ್‌ ಅವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇವರನ್ನು ಅಕ್ಷಯ ತೃತೀಯ ದಿನ ಏ.23ರ ಭಾನುವಾರ ನಿರಂಜನ ಪಟ್ಟಾಧಿಕಾರ ಮತ್ತು ಉತ್ತರಾಧಿಕಾರಿ ನೇಮಕ ಮಾಡಲಾಗುವುದು ಎಂದು ಮಠದ ಕಾರ್ಯದರ್ಶಿ ತಿಳಿಸಿದ್ದಾರೆ.

10 ಸಾವಿರ ವಿದ್ಯಾರ್ಥಿಗಳಿಗೆ ಆಸರೆ: ನಮ್ಮ ದೇಶದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಭಾರಿ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ಸ್ವತಂತ್ರ ಪೂರ್ವ ಅವಧಿಯಿಂದಲೂ ಮಕ್ಕಳಿಗೆ ಶಿಕ್ಷಣ ಪ್ರಸಾರ ಮಾಡುವ ನಿಟ್ಟಿನಲ್ಲಿ ಧಾರ್ಮಿಕ ಮಠಗಳು, ಮಂದಿರಗಳು ಹಾಗೂ ಸಂಸ್ಥೆಗಳು ಕೂಡ ತಮ್ಮ ಸೇವೆಯನ್ನು ನಿರಂತರವಾಗಿ ಸಲ್ಲಿಸುತ್ತಾ ಬಂದಿವೆ. ಹೀಗೆ, ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ಪೂರ್ವದಿಂದಲೂ ಊಟ, ವಸತಿ ಹಾಗೂ ಶಿಕ್ಷಣ ಸೇರಿ ತ್ರಿವಿಧ ದಾಸೋಹ ನೆರವೇರಿಸುತ್ತಾ ಬಂದಿರುವ ತುಮಕೂರಿನ ಸಿದ್ದಗಂಗಾ ಮಠ ದೇಶದಲ್ಲಿಯೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈಗ ಸುಮಾರು 10 ಸಾವಿರ ವಿದ್ಯಾರ್ಥಿಗಳು ಮಠದಲ್ಲಿ ಅಭ್ಯಾಸ ಮಾಡತ್ತಿದ್ದಾರೆ.

ನಡೆದಾಡುವ ದೇವರ ಜಾಗಕ್ಕೆ ಬರುವವರಾರು?: ನಡೆದಾಡುವ ದೇವರೆಂದೇ ಖ್ಯಾತರಾದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸುಮಾರು 70ಕ್ಕೂ ಅಧಿಕ ವರ್ಷಗಳ ಕಾಲ ಸಿದ್ದಗಂಗಾ ಮಠದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದರೆ, ಅವರು ಲಿಂಗೈಕ್ಯರಾದ ನಂತರ ಉತ್ತರಾಧಿಕಾರಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಠದ ಮುಖ್ಯಸ್ಥರಾಗಿ ಆಡಳಿತ ಮಾಡುತ್ತಿದ್ದಾರೆ. ಐತಿಹಾಸಿಕ ಸಿದ್ದಗಂಗಾ ಮಠಕ್ಕೆ ಇತ್ತೀಚೆಗೆ ಉತ್ತರಾಧಿಕಾರಿಯನ್ನಾಗಿ ಮನೋಜ್‌ ಕುಮಾರ್‌ ಎಂಬುವವರನ್ನು ನಿಯೋಜನೆ ಮಾಡಲಾಗಿದೆ. ಈಗ ಏ.23ರ ಭಾನುವಾರ ಬಸವ ಜಯಂತಿ ದಿನದಂದು ಉತ್ತರಾಧಿಕಾರಿ ಪಟ್ಟಾಭಿಷೇಕ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರನ್ನು ಸೇರಿಸಲು ನೀತಿ ಸಂಹಿತೆ ಅಡ್ಡಿಯಾಗುತ್ತಿದೆ. ಆದ್ದರಿಂದ, ಸರಳವಾಗಿ ಪಟ್ಟಾಭಿಷೇಕ ಸಮಾರಂಭ ಮಾಡಲು ನಿರ್ಧರಿಸಲಾಗಿದೆ ಮಠದ ಆಡಳಿತ ಕಾರ್ಯದರ್ಶಿ ತಿಳಿಸಿದ್ದಾರೆ.

ಮಳೆಯ ನಡುವೆಯೇ ಪ್ರಧಾನಿಯ ಕಟೌಟ್‌ ಒರೆಸುತ್ತಾ ನಿಂತ ಅಭಿಮಾನಿ, ಮೋದಿನೇ ನಮ್ಮ ದೇವರೆಂದ!

ಮೂರು ಮಠಗಳಿಗೆ ಉತ್ತರಾಧಿಕಾರಿಗಳ ನೇಮಕ: ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ಮನೋಜ್ ಕುಮಾರ್ ಅವರನ್ನು, ಸಿದ್ದಗಂಗಾ ಮಠದ ಶಾಖಾ ಮಠಗಳಾದ ರಾಮನಗರ ಜಿಲ್ಲೆ‌ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ ಉತ್ತರಾಧಿಕಾರಿಯಾಗಿ ಹರ್ಷಾ ಅವರನ್ನು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದ ಬಸವಕಲ್ಯಾಣ ಮಠದ ಉತ್ತರಾಧಿಕಾರಿ ಗೌರಿಶಂಕರ್ ಅವರನ್ನ ಉತ್ತರಾಧಿಕಾರಿಗಳನ್ನಾಗಿ ಸಿದ್ದಗಂಗಾ ಮಠದ ಆಡಳಿತ ಮಂಡಳಿ ನೇಮಕ ಮಾಡಿತ್ತು. ಈಗ ಸಿದ್ದಗಂಗಾ ಮಠದ ಹಳೆ ಮಠದ ಆವರಣದಲ್ಲಿ ಸರಳವಾಗಿ ಕಾರ್ಯಕ್ರಮ ನಡೆಸಲು ತಿರ್ಮಾನಿಸಲಾಗಿದೆ.

Latest Videos
Follow Us:
Download App:
  • android
  • ios