ಸಿದ್ದಾಪುರದಲ್ಲಿ ನಡೆದ ಕೊಲೆ ಮತ್ತು ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಾಳು ಪತಿ ಮಹೇಶ್ ನಾಯ್ಕ್ ಆಸ್ಪತ್ರೆಯಿಂದಲೇ ಘಟನೆಯ ವಿವರ ನೀಡಿದ್ದಾರೆ. ಜ್ಯೋತಿಷಿಯೊಂದಿಗೆ ತನ್ನ ಪತ್ನಿಗಿದ್ದ ಸಂಬಂಧ ಹಾಗೂ ಮಗಳನ್ನು ಮನೆಗೆ ಕರೆತಂದಿದ್ದೇ ಈ ಕೃತ್ಯಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. 

ಕಾರವಾರ (ಫೆ.3): ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಕೊಲೆ ಮತ್ತು ಚಾಕು ಇರಿತದ ಪ್ರಕರಣದ ಬಗ್ಗೆ, ಚಾಕು ಇರಿತದಿಂದ ಗಾಯಗೊಂಡಿರುವ 37 ವರ್ಷದ ಮಹೇಶ್‌ ಜಟ್ಯಾ ನಾಯ್ಕ್‌, ಶಿವಮೊಗ್ಗದ ಸರ್ಕಾರಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದಲೇ ಮಾತನಾಡಿರುವ ಅವರ, 15 ವರ್ಷಗಳ ಹಿಂದೆ ಸಿದ್ದಾಪುರ ಹೊಸೂರಿನ ಸುಚಿತ್ರ ಎಂಬುವರ ಜೊತೆ ಪ್ರೀತಿಸಿ ಮದುವೆಯಾಗಿದ್ದೆ. ನಮಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ . ನನ್ನ ಪತ್ನಿ ಕಳೆದ ಐದು ತಿಂಗಳಿಂದ ಜ್ಯೋತಿಷಿ ಕಮಲಾಕರ್ ಭಟ್ ಜೊತೆ ಶಿವಮೊಗ್ಗದಲ್ಲಿ ವಾಸವಾಗಿದ್ದಳು. ಮೊನ್ನೆ ಒಂದನೇ ತಾರೀಕು ನನ್ನ ಮಗಳು ಅಪ್ಪ ಅಮ್ಮನ ಜೊತೆ ಇರಲು ಆಗುತ್ತಿಲ್ಲ ಕರೆದುಕೊಂಡು ಹೋಗು ಇಲ್ಲದಿದ್ದರೆ ಸಾಯುತ್ತೇನೆ ಎಂದಿದ್ದಳು ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಮಗಳನ್ನು ಕರೆದುಕೊಂಡು ಬಂದಿದ್ದೆ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ನಮ್ಮ ಅಣ್ಣ ವಸಂತ ನಾಯ್ಕ್‌ ಮನೆಗೆ ನುಗ್ಗಿ ಗಲಾಟೆ ಮಾಡಿದರು. ಕಾರಿನಲ್ಲಿ ಬಂದಿದ್ದ ಅವರು ಚಾಕು ತಂದಿದ್ದರು. ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದೆವು . ಪೊಲೀಸರು ಬರುವಷ್ಟರಲ್ಲಿ ನನ್ನ ಅಣ್ಣ ವಸಂತ್ ನಾಯ್ಕ ಪಕ್ಕದ ಮನೆಯ ಕುಮಾರ್ ನಾರಾಯಣ ನಾಯ್ಕ ಹಾಗೂ ನನಗೆ ಚಾಕುವಿನಿಂದ ಇರಿದಿದ್ದಾರೆ. ನನ್ನ ಅಣ್ಣ ವಸಂತ ನಾಯ್ಕ ಸಾವು ಕಂಡಿದ್ದಾರೆ. ನನ್ನ ಪತ್ನಿಯ ನಡವಳಿಕೆ ಸರಿ ಇರಲಿಲ್ಲ. ಆಕೆಗೆ ಜ್ಯೋತಿಷಿ ಕಮಲಾಕರ್ ಭಟ್ ಜೊತೆ ಸಂಬಂಧ ಇತ್ತು. ನನ್ನ ಮಗಳು ಅವರಿಬ್ಬರೂ ಒಂದೇ ಕೋಣೆಯಲ್ಲಿ ಮಲಗುತ್ತಿದ್ದರು ನಮಗೆ ಹೊರಗೆ ಮಲಗಿಸುತ್ತಿದ್ದರು ಎಂದು ಹೇಳಿದ್ದಳು ಎಂದಿದ್ದಾರೆ.

ಗುರೂಜಿ ಕಮಲಾಕರ್‌ ಭಟ್‌ ಹಾಕಿದ್ದ ‘ಮೈ ಫ್ಯಾಮಿಲಿ..’ ಸೆಲ್ಫಿಯಲ್ಲಿದ್ದ ಮಹೇಶ್‌ ಅವರ ಪತ್ನಿ ಸುಚಿತ್ರಾ

ಫೇಸ್‌ಬುಕ್‌ನಿಂದ ಇದ್ದಿದ್ದವರ ಸಂಪರ್ಕ!

'ಇಲ್ಲಿಯವರೆಗೂ ನನ್ನ ಹೆಂಡತಿ ನನ್ನ ಜೊತೆಯಲ್ಲೇ ಇದ್ದಳು. ಆದರೆ, ಫೇಸ್‌ಬುಕ್‌ನಲ್ಲಿ ಇದ್ದ ಬದ್ದ ಹುಡುಗರ ಜೊತೆ ಕಾಂಟಾಕ್ಟ್‌ ಮಾಡೋದು ಮಾಡ್ತಿದ್ದಳು. ಅವರ ಜೊತೆಗೆಲ್ಲಾ ಆಕೆ ತಿರುತ್ತಾ ಇರುತ್ತಿದ್ದಳು. ಈ ಬಗ್ಗೆ ನನಗೆ ಗೊತ್ತಾದಾಗ ಆಕೆಗೆ ಬೈದಿದ್ದೆ. ಆದರೂ ಆಕೆ ಪಾಠ ಕಲಿತಿರಲಿಲ್ಲ. ಈಗ ನನ್ನ ಬಿಟ್ಟು ಮಕ್ಕಳನ್ನು ಕರ್ಕೊಂಡು ಶಿವಮೊಗ್ಗ ಬಂದು ಸೆಟಲ್‌ ಆಗಿದ್ದಳು. ಯಾರೋ ಸ್ವಾಮಿ ಜೊತೆ ಇದ್ದಾಳೆ ಅಂತಾ ನನಗೆ ಮೊದಲು ಸುದ್ದಿ ಸಿಕ್ಕಿತ್ತು.

ಮಗಳು ಕೂಡ ಆಕೆಯ ಜೊತೆಯಲ್ಲೇ ಇದ್ದಳು. ಮಗಳು ಫೆ. 1ಕ್ಕೆ ನನಗೆ ಫೋನ್‌ ಮಾಡಿ, 'ಪಪ್ಪ ನನ್ನ ಕರ್ಕೊಂಡು ಹೋಗು. ನಾನು ಮಮ್ಮಿ ಜೊತೆ ಇರಲ್ಲ. ನನಗೆ ಟಾರ್ಚರ್‌ ಕೊಡ್ತಾ ಇದ್ದಾಳೆ. ನಾನು ಇರಲ್ಲ. ನೀನು ಕರ್ಕೊಂಡು ಹೋಗು ಇಲ್ಲ ಅಂದ್ರೆ ನಾನು ಸತ್ತು ಹೋಗ್ತಿನಿ ಅಂತಾ ಹೇಳಿದ್ಲು' ಅದಕ್ಕೆ ನಾನು, 'ಮಗಳೇ ಬಸ್‌ ಹತ್ತಿ ಬಾರಮ್ಮ..'ಅಂತಾ ಹೇಳಿದೆ.

ಮಗಳು ನನ್ನ ಬಳಿ ಬಂದ ಬಳಿಕವೇ ಈ ರೀತಿ ಗಲಾಟೆ ಆಗಿದೆ. ಶಿವಮೊಗ್ಗದಿಂದ ರೌಡಿಗಳನ್ನು ಕರೆದುಕೊಂಡು ಬಂದು ನನಗೆ, ನನ್ನ ಅಣ್ಣನಿಗೆ ಹಾಗೂ ನನ್ನ ಫ್ರೆಂಡ್‌ಗೆ, ತಂದೆ-ತಾಯಿಗೆ ಎಲ್ಲರಿಗೂ ಚಾಕು ಚುಚ್ಚಿಬಿಟ್ಟಿದ್ದಾರೆ. ಮಗಳನ್ನು ಕರ್ಕೊಂಡು ಬಂದಿದ್ದಕ್ಕೆ, ಈ ರೀತಿಯಲ್ಲಿ ಹೊಡೆದಿದ್ದಾರೆ. ಹೊಡೆಸಿರೋದು ನನ್ನ ಹೆಂಡತಿಯೇ. ನಮ್ಮ ಮನೆ ಅರಗೊಪ್ಪದಲ್ಲಿ ಇರೋದು ಸರ್‌. ನನಗೆ, ನನ್ನ ಅಣ್ಣ ಹಾಗೂ ಫ್ರೆಂಡ್‌ಗೆ ಚಾಕುವಿನಿಂದ ಚುಚ್ಚಿದ್ದಾರೆ. ಆ ಜ್ಯೋತಿಷಿ ಕಮಲಾಕರ್‌ ಭಟ್‌ ಅಂತಾ ಹೇಳ್ತಾರೆ. ಅವರು ಶಾಸ್ತ್ರ ಹೇಳುವವರು. ಅವರ ಜೊತೆಗೆ ಇದ್ದಾಳೆ ಅಂತ ನನಗೆ ಸುದ್ದಿ ಸಿಕ್ಕಿರೋದು. ನನ್ನ ಹೆಂಡಿ ಹಾಗೂ ನಾಲ್ಕು ಹುಡುಗರ ಮೇಲೆ ಎಫ್‌ಐಆರ್‌ ಆಗಿದೆ ಎಂದು ಮಹೇಶ್‌ ಹೇಳಿದ್ದಾರೆ.